ಮನಪಾ ನಗರ ಬಡತನ ನಿರ್ಮೂಲನಾ ಕೋಶ: 873 ಫಲಾನುಭವಿಗಳಿಗೆ 65 ಲಕ್ಷ ರೂ. ಮೌಲ್ಯದ ಸವಲತ್ತು ವಿತರಣೆ

Update: 2020-02-25 11:25 GMT

ಮಂಗಳೂರು, ಫೆ. 25: ಮಂಗಳೂರು ಮಹಾನಗರ ಪಾಲಿಕೆಯ ನಗರ ಬಡತನ ನಿರ್ಮೂಲನಾ ಕೋಶದ ವಿವಿಧ ಯೋಜನೆಗಳಡಿ 873 ಫಲಾನುಭವಿಗಳಿಗೆ 65 ಲಕ್ಷ ರೂ. ಮೌಲ್ಯದ ವಿವಿಧ ಸಲವತ್ತುಗಳನ್ನು ಇಂದು ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ವಿತರಿಸಲಾಯಿತು.

ಗಾಲಿಕುರ್ಚಿ, ತ್ರಿಚಕ್ರ ವಾಹನ, ಶ್ರವಣ ಸಾಧನ, ಪಕ್ಕಾ ಮನೆ ನಿರ್ಮಾಣಕ್ಕೆ ಧನ ಸಹಾಯ, ಕೃತಕ ಕಾಲು, ಹೊಲಿಗೆ ಯಂತ್ರ, ಅಡುಗೆ ಅನಿಲ ಸಂಪರ್ಕ, ವಿಕಲಚೇತನ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ, ಕ್ರೀಡಾ ಪ್ರೋತ್ಸಾಹ, ಶೇ. 24.10 ರಡಿ ಶೌಚಾಲಯ ನಿರ್ಮಾಣಕ್ಕೆ ಸಹಾಯಧನ ಹಾಗೂ ಮನೆ ದುರಸ್ತಿಗೆ ಸಹಾಯಧನದ ಚೆಕ್‌ಗಳನ್ನು ಫಲಾನುಭವಿಗಳಿಗೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ವೇದವ್ಯಾಸ ಕಾಮತ್ ಹಾಗೂ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಸಾಂಕೇತಿಕವಾಗಿ ಸವಲತ್ತುಗಳನ್ನು ವಿತರಿಸಿದರು.

ಸಮಾಜದ ಸರ್ವ ಜನರ ಅಭಿವೃದ್ಧಿಗಾಗಿ ಸರಕಾರ ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತದೆ. ಅನ್ನ ಭಾಗ್ಯ ಯೋಜನೆ ಕಳೆದ ಆರು ವರ್ಷಗಳಿಂದ ಸರಕಾರ ನಡೆಸುತ್ತಿರುವ ಉದ್ದೇಶ ಬಡತನ ನಿರ್ಮೂಲನ, ಹಸಿವು ಮುಕ್ತಗೊಳಿಸುವುದಾಗಿದೆ. ಸರಕಾರದ ಸಂಪತ್ತು ಜನರ ತೆರಿಗೆಯಿಂದ ಸಂಗ್ರಹಿಸಲ್ಪಟ್ಟಿರುವುದು. ಆ ಹಣವನ್ನು ಸದುಪಯೋಗವಾದಾಗ ವಿಧಾನಸೌಧದಲ್ಲಿ ಬರೆಯಲಾಗಿರುವಂತೆ ಸರಕಾರದ ಕೆಲಸ ದೇವರ ಕೆಲಸ ಎಂಬ ಮಾತು ಸಾರ್ಥಕವಾಗುತ್ತದೆ ಎಂದು ಮುಖ್ಯ ಅತಿಥಿಯಾಗಿ ಮಾನಾಡಿದ ಐವನ್ ಡಿಸೋಜಾ ಹೇಳಿದರು.

ಪಾಲಿಕೆಯ ಜಂಟಿ ಆಯುಕ್ತ ಡಾ. ಸಂತೋಷ್ ಕುಮಾರ್ ಸ್ವಾಗತಿಸಿದರು. ವೇದಿಕೆಯಲ್ಲಿ ಮನಪಾ ಆರೋಗ್ಯ ಅಧಿಕಾರಿ ಡಾ. ಮಂಜಯ್ಯ ಶೆಟ್ಟಿ, ಮಾಲಿನಿ ರಾಡ್ರಿಗಸ್ ಉಪಸ್ಥಿತರಿದ್ದರು.

ಪರಿಸರ ಅಭಿಯಂತರ ಮಧು ಮನೋಹರ್ ಕಾರ್ಯಕ್ರಮ ನಿರೂಪಿಸಿದರು. ಉದ್ಘಾಟನಾ ಸಮಾರಂಭದಲ್ಲಿ ಸಾಂಕೇತಿಕವಾಗಿ ಫಲಾನುಭವಿಗಳಿಗೆ ಸವಲತ್ತು ವಿತರಿಸಲಾಯಿತು. ಬಳಿಕ ಅಧಿಕಾರಿಗಳು ಫಲಾನುಭವಿಗಳು ಕುಳಿತಲ್ಲಿಗೆ ಸಲತ್ತುಗಳನ್ನು ಹಸ್ತಾಂತರಿಸಿದರು.

ಗ್ಯಾಸ್ ಸಂಪರ್ಕ ಇಲ್ಲದಿದ್ದರೆ ತಿಳಿಸಿ: ಶಾಸಕ ವೇದವ್ಯಾಸ ಕಾಮತ್

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ‘‘ನಗರ ಪ್ರದೇಶದಲ್ಲಿ ಇನ್ನೂ ಅಡುಗೆ ಅನಿಲ ಸಂಪರ್ಕ ಹೊಂದಿಲ್ಲದ ಬಡವರು ಇರುವುದು ಬೇಸರದ ಸಂಗತಿ. ಗ್ಯಾಸ್ ಸಂಪರ್ಕ ಹೊಂದಿಲ್ಲದವರು ನನಗೆ ಅಥವಾ ಅಧಿಕಾರಿಗಳಿಗೆ ಮಾಹಿತಿ ನೀಡಿದರೆ ಅದನ್ನು ಒದಗಿಸುವ ವ್ಯವಸ್ಥೆ ಮಾಡಲಾಗುವುದು’’ ಎಂದು ಹೇಳಿದರು.

ಹಲವು ಕಾರಣಗಳಿಂದ ಮುಖ್ಯವಾಹಿನಿಗೆ ಬರಲು ಸಾಧ್ಯವಾಗದವರಿಗೆ ಮುಖ್ಯವಾಹಿನಿಗೆ ತರಲು ಅವಕಾಶ ಕಲ್ಪಿಸಬೇಕು. ಅವರ ಕಣ್ಣೀರು ಒರಸುವ ಕಾರ್ಯ ಆಗಬೇಕು ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News