ಕಂಬಳಕ್ಕೆ ಸೆನ್ಸಾರ್ ಅಳವಡಿಸಲು ನೆರವು: ರಾಜೇಂದ್ರ ಕುಮಾರ್

Update: 2020-02-25 14:25 GMT

ಮಂಗಳೂರು, ಫೆ.25: ಕರಾವಳಿಯಲ್ಲಿ ನಡೆಯುವ ಕಂಬಳಕ್ಕೆ ಹೊಸ ಮಾದರಿಯ ಸೆನ್ಸಾರ್ ಅಳವಡಿಸಲು 4 ಲಕ್ಷ ರೂ. ಸಹಾಯಧನವನ್ನು ದ.ಕ.ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನೀಡಲಿದೆ ಎಂದು ಬ್ಯಾಂಕ್‌ನ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಹೇಳಿದ್ದಾರೆ.

ಕಂಬಳದಲ್ಲಿ ಸಾಧನೆಗೈದ ಕಂಬಳವೀರ ಶ್ರೀನಿವಾಸ ಗೌಡ ಸಹಿತ ಐವರು ಸಮಕಾಲೀನ ಓಟಗಾರರಿಗೆ ಹಾಗೂ ಈ ಹಿಂದೆ ಸಾಧನೆ ಮಾಡಿದವರನ್ನು ಮಂಗಳವಾರ ಬ್ಯಾಂಕ್‌ನ ವತಿಯಿಂದ ಸನ್ಮಾನಿಸಿ ಅವರು ಮಾತನಾಡಿದರು.

ಕಂಬಳ ಕರೆಯ ಆರಂಭ ಹಾಗೂ ಅಂತ್ಯದಲ್ಲಿ ಸೆನ್ಸಾರ್ ಅಳವಡಿಸುವುದರಿಂದ ಪಾರದರ್ಶಕ ಫಲಿತಾಂಶ ಹಾಗೂ ಸಮಯ ಉಳಿತಾಯ ಸಾಧ್ಯವಿದೆ. ಪ್ರಸಕ್ತ ಸೆನ್ಸಾರ್‌ನ್ನು ಬಾಡಿಗೆ ಮೊತ್ತ ಅಧಿಕವಾಗಿರುವುದರಿಂದ ಇದು ಹೊರೆಯಾಗುತ್ತಿದೆ. ಆದ್ದರಿಂದ ಹೊಸ ಸೆನ್ಸಾರ್ ಖರೀದಿಗೆ ನೆರವು ಒದಗಿಸುವಂತೆ ಕಂಬಳ ಸಮಿತಿ ವಿನಂತಿಸಿದೆ. ಈ ಹಿನ್ನೆಲೆಯಲ್ಲಿ 4 ಲಕ್ಷ ರೂ. ನೆರವನ್ನು ಬ್ಯಾಂಕ್ ನೀಡಲಿದೆ ಎಂದು ಡಾ.ರಾಜೇಂದ್ರ ಕುಮಾರ್ ನುಡಿದರು.

ಸ್ವಂತ ಸೆನ್ಸಾರ್ ಹೊಂದುವುದರಿಂದ ಈಗಿನ ದರಕ್ಕಿಂತ ಪ್ರತಿ ಕಂಬಳಕ್ಕೆ ಶೇ.35ರಷ್ಟು ಆರ್ಥಿಕ ವೆಚ್ಚ ಕಡಿಮೆಯಾಗಲಿದೆ. ಕೇವಲ ಸರ್ವಿಸ್ ಚಾರ್ಜ್ ಮಾತ್ರ ಪಡೆಯಲು ಅವಕಾಶ ನೀಡಿ ಮೂಲ ಬಂಡವಾಳಕ್ಕೆ ಬ್ಯಾಂಕ್ ಪ್ರೋತ್ಸಾಹಿಸಲಿದೆ ಎಂದು ಹೇಳಿದರು.

ಓಟಗಾರರಿಗೆ ವಿಮಾ ಸೌಲಭ್ಯ: ಕಂಬಳ ಸೆನ್ಸಾರ್ ಬಳಕೆಗೆ 18 ಸಾವಿರ ರೂ. ಬಾಡಿಗೆ ನಿಗದಿಪಡಿಸಬಹುದು. ಈ ಮೊತ್ತದಲ್ಲಿ ಕನಿಷ್ಠ 100 ಮಂದಿ ಕಂಬಳ ಓಟಗಾರರಿಗೆ ವಿಮಾ ಸೌಲಭ್ಯ ಕಲ್ಪಿಸಿದರೆ, ಅದರಿಂದ ಕಂಬಳ ಓಟಗಾರರಿಗೆ ವಿಮಾ ಭದ್ರತೆ ಒದಗಿಸಿದಂತಾಗುತ್ತದೆ. ವಿಮಾ ಸೌಲಭ್ಯವನ್ನು ಎಸ್‌ಸಿಡಿಸಿಸಿ ಬ್ಯಾಂಕ್ ಒದಗಿಸಲಿದ್ದು, ಕಂಬಳ ಸಮಿತಿ ಇದರ ನಿರ್ವಹಣೆ ಮಾಡಲಿದೆ ಎಂದು ಡಾ. ರಾಜೇಂದ್ರ ಕುಮಾರ್ ಹೇಳಿದರು.

ಈ ಸಂದರ್ಭ ಬಾಂಕ್‌ನ ಉಪಾಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು, ನಿರ್ದೇಶಕರಾದ ಐಕಳ ದೇವಿಪ್ರಸಾದ್ ಶೆಟ್ಟಿ, ಸದಾಶಿವ ಉಳ್ಳಾಲ್, ಕಂಬಳ ಸಮಿತಿ ಅಧ್ಯಕ್ಷ ಗುಣಪಾಲ ಕಡಂಬ, ಸುಕುಮಾರ ಶೆಟ್ಟಿ, ಭಾಸ್ಕರ ಕೋಟ್ಯಾನ್, ಪ್ರಸಾದ್ ಕೌಶಲ್ಯ, ಅರುಣ್ ಶೆಟ್ಟಿ, ಸಹಕಾರಿ ಯೂನಿಯನ್ ಜಿಲ್ಲಾಧ್ಯಕ್ಷ ಚಿತ್ತರಂಜನ್ ಭಂಡಾರಿ ಉಪಸ್ಥಿತರಿದ್ದರು.

ಕಂಬಳವೀರ ಸೇರಿದಂತೆ ಸಾಧಕ ಓಟಗಾರರಿಗೆ ಸನ್ಮಾನ

ಈ ಸಂದರ್ಭ ಕಂಬಳವೀರ ಶ್ರೀನಿವಾಸ ಗೌಡ ಸಹಿತ ಸಾಧಕ ಕಂಬಳ ಓಟಗಾರರನ್ನು ಬ್ಯಾಂಕ್‌ನ ವತಿಯಿಂದ ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು. ಇತ್ತೀಚೆಗೆ ಕಂಬಳ ಓಟಗಾರರಾಗಿ ದಾಖಲೆ ನಿರ್ಮಿಸಿದ ಅಶ್ವತ್ಥಪುರ ಶ್ರೀನಿವಾಸ ಗೌಡ ಹಾಗೂ ಬಜಗೋಳಿಯ ನಿಶಾಂತ್ ಶೆಟ್ಟಿಗೆ ಬ್ಯಾಂಕ್‌ನಿಂದ ತಲಾ 25 ಸಾವಿರ ರೂ.ಗಳ ಚೆಕ್ ವಿತರಿಸಲಾಯಿತು. ಈ ಹಿಂದೆ ದಾಖಲೆ ಬರೆದ ಇರ್ವತ್ತೂರು ಆನಂದ, ಹಕ್ಕೇರಿ ಸುರೇಶ್ ಶೆಟ್ಟಿ, ಅಳದಂಗಡಿ ರವಿ ಹಾಗೂ ಪಣಪೀಲು ಪ್ರವೀಣ್ ಕೋಟ್ಯಾನ್‌ರಿಗೆ ತಲಾ 10 ಸಾವಿರ ರೂ. ಗಳ ಚೆಕ್ ನೀಡಲಾಯಿತು. ಅಲ್ಲದೆ ಹಿರಿಯ ಕಂಬಳ ಓಟಗಾರ ಪೇಜಾವರ ಭಾಸ್ಕರ್, ವೀರಕಂಬ ಜಯಂತ ಶೆಟ್ಟಿ, ನಕ್ರೆ ಜಯಕರ ಮಡಿವಾಳ, ಫಲಿಮಾರು ದೇವೇಂದ್ರ ಕೋಟ್ಯಾನ್, ಪ್ರವೀಣ್ ಶೆಟ್ಟಿ ಸಾಣೂರು, ಈದು ಅಜಿತ್ ಕುಮಾರ್, ವಿಜಯ ಕುಮಾರ್ ಕಂಗಿನಮನೆ, ಮಾರ್ನಾಡು ರಾಜೇಶ್ ಅವರನ್ನು ಅಭಿನಂದಿಸಲಾಯಿತು. ಅಲ್ಲದೆ ಯೋಗದಲ್ಲಿ ಸತತ ಗಿನ್ನೆಸ್ ದಾಖಲೆ ನಿರ್ಮಿಸಿದ ತನುಶ್ರೀ ಪಿತ್ರೋಡಿ ಅವರನ್ನು ಸನ್ಮಾನಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News