ಮಂಗಳೂರು ಗೋಲಿಬಾರ್-ಹಿಂಸಾಚಾರ ಪ್ರಕರಣ: ಖುದ್ದು ಸಾಕ್ಷಿ ಹೇಳಲು ನೋಟಿಸ್ ಪಡೆದ 12 ಪೊಲೀಸರು ಗೈರು

Update: 2020-02-25 14:35 GMT
ಫೈಲ್ ಚಿತ್ರ

ಮಂಗಳೂರು, ಫೆ.25: ಮಂಗಳೂರು ಗೋಲಿಬಾರ್ ಮತ್ತು ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿ ನಗರದ ಎಸಿ ಕಚೇರಿ ಕೋರ್ಟ್‌ನಲ್ಲಿ ಮಂಗಳವಾರ ನಡೆದ ಮ್ಯಾಜಿಸ್ಟ್ರೀರಿಯಲ್ ವಿಚಾರಣೆಗೆ ಖುದ್ದು ಹಾಜರಾಗಿ ಸಾಕ್ಷಿ ಹೇಳಲು ಕಳೆದ ವಾರ ನೋಟಿಸ್ ಪಡೆದಿದ್ದ 12 ಮಂದಿ ಪೊಲೀಸ್ ಅಧಿಕಾರಿ-ಸಿಬ್ಬಂದಿ ವರ್ಗವು ಗೈರು ಹಾಜರಾಗುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಈ ಮಧ್ಯೆ ಪೊಲೀಸ್ ಇಲಾಖೆಯಿಂದ ನೋಡಲ್ ಅಧಿಕಾರಿಯಾಗಿ ನಿಯುಕ್ತಿಗೊಂಡು ಉತ್ತರ ಉಪವಿಭಾಗದ ಎಸಿಪಿ ಬೆಳ್ಳಿಯಪ್ಪ ಪೊಲೀಸ್ ಇಲಾಖೆಯ ಪರವಾದ ಸಾಕ್ಷ್ಯವನ್ನು ಸಲ್ಲಿಸಿದರು.

ಉಡುಪಿ ಜಿಲ್ಲಾಧಿಕಾರಿಯೂ ಆಗಿರುವ ಮ್ಯಾಜಿಸ್ಟ್ರೀರಿಯಲ್ ತನಿಖಾಧಿಕಾರಿ ಜಗದೀಶ್ ಅವರು ಪೊಲೀಸ್ ಇಲಾಖೆಯ ಸಾಕ್ಷಿಗಳಿಗೆ ಸಂಬಂಧಿಸಿದ ದಾಖಲೆಯನ್ನು ಸ್ವೀಕರಿಸಿ ಮಾ.4ರಂದು ಪೊಲೀಸರ ವೈಯಕ್ತಿಕ ಸಾಕ್ಷ್ಯ ಸಲ್ಲಿಕೆಗೆ ಅವಕಾಶ ಕಲ್ಪಿಸಿದ್ದಾರೆ. ಇದರೊಂದಿಗೆ ಪೂ.11ಕ್ಕೆ ಆರಂಭಗೊಂಡ ವಿಚಾರಣೆಯು ಅರ್ಧ ಗಂಟೆಯೊಳಗೆ ಮುಕ್ತಾಯಗೊಂಡಿತು.

ಮ್ಯಾಜಿಸ್ಟ್ರೀರಿಯಲ್ ತನಿಖೆಯಲ್ಲಿ ಈವರೆಗೆ ಸಾರ್ವಜನಿಕರ ಹಾಗೂ ಸಂತ್ರಸ್ತರ ಸಾಕ್ಷ್ಯ ಸಲ್ಲಿಕೆಗೆ ಅವಕಾಶ ನೀಡಲಾಗಿತ್ತು. ಮಂಗಳವಾರ ಪೊಲೀಸರಿಗೆ ಖುದ್ದು ಸಾಕ್ಷ್ಯ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಆದರೆ ನೋಟಿಸ್ ಪಡೆದ ಪೊಲೀಸರಿಗೆ ಅನಿವಾರ್ಯ ಕಾರಣದಿಂದ ಸಾಕ್ಷ್ಯ ಸಲ್ಲಿಕೆಗೆ ಹಾಜರಾಗಲು ಅಸಾಧ್ಯವಾದ ಹಿನ್ನೆಲೆಯಲ್ಲಿ ಕೇವಲ ದಾಖಲೆಗಳ ಸಾಕ್ಷ್ಯವನ್ನು ಸಲ್ಲಿಸಲಾಯಿತು. ಅದರಲ್ಲಿ ಮರಣೋತ್ತರ ಪರೀಕ್ಷಾ ವರದಿ, ಕೇಸುಗಳ ದಾಖಲಾತಿ, ಎಫ್‌ಎಸ್‌ಎಲ್ ವರದಿ ಸಹಿತ ಪ್ರಮುಖ ಸಾಕ್ಷಿಗಳ ದಾಖಲೆಗಳು ಸೇರಿವೆ.

ಘಟನೆಯ ಬಗ್ಗೆ ಸಾಕ್ಷಿ ಹೇಳಲು ಸಿದ್ಧರಿರುವ 176 ಪೊಲೀಸರ ಪಟ್ಟಿಯನ್ನು ಪೊಲೀಸ್ ಇಲಾಖೆಯು ಈಗಾಗಲೇ ನೀಡಿತ್ತು. ಅದರಂತೆ ಮಂಗಳವಾರ 12 ಪೊಲೀಸರಿಗೆ ಸಾಕ್ಷಿ ಹೇಳಲು ಸೂಚಿಸಲಾಗಿತ್ತು. ಇದೀಗ ಮಾ.4ರಂದು ಪೊಲೀಸರು ಖುದ್ದು ಹಾಜರಾಗಲು ದಿನ ನಿಗದಿಪಡಿಸಲಾಗಿದೆ. ಉಳಿದವರಿಗೆ ಹಂತ ಹಂತವಾಗಿ ಸಾಕ್ಷ್ಯ ನೀಡಲು ಅವಕಾಶ ಮಾಡಲಾಗುವುದು. ಪೊಲೀಸ್ ಇಲಾಖೆಯು ನೀಡಿದ ಪಟ್ಟಿಯಲ್ಲಿ ಮಂಗಳೂರು ಪೊಲೀಸ್ ಆಯುಕ್ತ ಡಾ.ಪಿ.ಎಸ್. ಹರ್ಷ ಮತ್ತು ಡಿಸಿಪಿ ಅರುಣಾಂಶಗಿರಿ ಅವರ ಹೆಸರು ಕೂಡ ಇದೆ.

ಡಿ.19ರಂದು ನಡೆದ ಮಂಗಳೂರು ಗೋಲಿಬಾರ್ ಮತ್ತು ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿ ಜಿಲ್ಲಾಧಿಕಾರಿ ಜಗದೀಶ್ ಆರಂಭಿಸಿದ ಮ್ಯಾಜಿಸ್ಟ್ರೀರಿಯಲ್ ತನಿಖೆಯಲ್ಲಿ ಡಿ.31ರಂದು ಸ್ಥಳ ಮಹಜರು, ಜ.7, ಫೆ.6, ಫೆ.13ರಂದು ಸಾರ್ವಜನಿಕರ ಲಿಖಿತ ಸಾಕ್ಷಿ ಹೇಳಿಕೆ ಮತ್ತು ವಿಡಿಯೋ ದೃಶ್ಯಾವಳಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು. ಅದರಂತೆ 204 ಮಂದಿ ಸಾಕ್ಷಿ ನುಡಿದಿದ್ದರು. ಪೊಲೀಸರು 50 ವಿಡಿಯೋಗಳಿರುವ ಪೆನ್‌ಡ್ರೈವ್ ಹಾಗೂ ಸಾರ್ವಜನಿಕರು ಕೂಡ 1 ವೀಡಿಯೋ ಸಿಡಿ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News