ಆಧ್ಯಾತ್ಮ, ಸಾಹಿತ್ಯದ ಶಕ್ತಿಗಳಾದ ವಿವೇಕಾನಂದ, ಡಾ. ಕಾರಂತರು ಎಲ್ಲರಿಗೂ ಪ್ರೇರಣೆ: ಮಠಂದೂರು

Update: 2020-02-27 16:14 GMT

ಪುತ್ತೂರು: ಆಧ್ಯಾತ್ಮಿಕ ಸಂದೇಶದ ಮೂಲಕ ಜಗತ್ತಿಗೆ ಪರಿಚಿತರಾಗಿರುವ ಶ್ರೇಷ್ಠ ಸಂತ ಸ್ವಾಮಿ ವಿವೇಕಾನಂದರು ಮತ್ತು ಸಾಹಿತ್ಯ ಹಾಗೂ ಸಾಂಸ್ಕೃತಿಕ ಸಾಧನೆಯ ಮೂಲಕ ಪ್ರಸಿದ್ದಿ ಪಡೆದ ಸಾಹಿತಿ ಡಾ. ಕೋಟ ಶಿವರಾಮ ಕಾರಂತರು ಎಲ್ಲರಿಗೂ ಪ್ರೇರಣೆಯಾಗಿದ್ದು, ಅವರ ಆದರ್ಶ, ಬದುಕು, ನೇರ ನಡೆ ನುಡಿಗಳು ಯುವ ಜನಾಂಗಕ್ಕೆ ದಾರಿದೀಪವಾಗಿದೆ ಎಂದು ಪುತ್ತೂರು ಶಾಸಕ ಸಂಜೀವ ಮಠಂದೂರು ಹೇಳಿದರು.

ಅವರು ಗುರುವಾರ ನಗರದ ಪರ್ಲಡ್ಕ ಡಾ. ಶಿವರಾಮ ಕಾರಂತ ಬಾಲವನದಲ್ಲಿ ಬಾಲವನ ಅಭಿವೃದ್ಧಿ ಸಮಿತಿ, ಪುತ್ತೂರು ಸಹಾಯಕ ಕಮೀಷನ್ ಕಚೇರಿ, ಪುತ್ತೂರು ತಾಲೂಕು ಪತ್ರಕರ್ತರ ಸಂಘ, ಕರ್ನಾಟಕ ಯುವ ಸಂಘಗಳ ಒಕ್ಕೂಟದ ಸಂಯುಕ್ತ ಆಶ್ರಯದಲ್ಲಿ ನಡೆದ ಸ್ವಾಮಿ ವಿವೇಕಾನಂದ ಯುವ ಪ್ರಶಸ್ತಿ ಪ್ರಧಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. 

ರಾಜ್ಯ ಯುವ ಸಂಘಗಳ ಒಕ್ಕೂಟದ ರಾಜ್ಯಾಧ್ಯಕ್ಷ ಬಾಲಾಜಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ರಾಜ್ಯದಲ್ಲಿ ಯುವ ಸಂಸ್ಥೆಗಳಿಗೆ ಸಮರ್ಪಕವಾದ ಅನುದಾನದ ಕೊರತೆ ಇದೆ. ಪ್ರತಿ ಗ್ರಾಮದಲ್ಲೂ ಯುವಕ-ಯುವತಿ ಮಂಡಲಗಳ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಮುಂದಾಗಬೇಕು. ಯುವ ಜನತೆಗೆ ತರಬೇತಿ ನೀಡಬೇಕು. ಯುವಕರ ಹಕ್ಕುಗಳನ್ನು ರಕ್ಷಿಸುವ `ಯುವ ಕಾಯ್ದೆ' ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.

ಪುತ್ತೂರು ತಾಪಂ ಅಧ್ಯಕ್ಷ ಕೆ. ರಾಧಾಕೃಷ್ಣ ಬೋರ್ಕರ್ ಮಾತನಾಡಿ ಯುವಕರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಗ್ರಾಮ ಮಟ್ಟದಲ್ಲಿ ಇಂತಹ ಕಾರ್ಯಕ್ರಮಗಳು ನಡೆಯಬೇಕು. ಪುತ್ತೂರಿನ ಸರ್ಕಾರಿ ಇಲಾಖೆಗಳು ಬಾಲವನದಲ್ಲಿ ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜಿಸಬೇಕು ಎಂದರು.

ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಸಂಶುದ್ದೀನ್ ಸಂಪ್ಯ  ಪತ್ರಕರ್ತರು ಯಾವುದೇ ಕಾರ್ಯಕ್ರಮಗಳ ಸಾಧಕ ಬಾಧಕಗಳ ಬಗ್ಗೆ ವರದಿ ಮಾಡುವವರಾಗಿದ್ದು, ಕಾರಂತರ ಬಾಲವನದ ಬಗ್ಗೆ ಪತ್ರಕರ್ತರಿಗೂ ಜವಾಬ್ದಾರಿಯಿದೆ. ಈ ನಿಟ್ಟಿನಲ್ಲಿ ಪತ್ರಕರ್ತರ ಸಂಘವು ಬಾಲವನದಲ್ಲಿ ನಡೆಯಲಿರುವ ಕಾರ್ಯಕ್ರಮಗಳಿಗೆ ಪರಿಪೂರ್ಣ ಸಹಕಾರ ನೀಡಲಿದೆ ಎಂದರು. 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪುತ್ತೂರು ಸಹಾಯಕ ಕಮೀಷನರ್ ಮತ್ತು ಬಾಲವನ ಅಭಿವೃದ್ಧಿ ಸಮಿತಿಯ ಸದಸ್ಯ ಕಾರ್ಯದರ್ಶಿ ಡಾ. ಯತೀಶ್ ಉಳ್ಳಾಲ್ ಮಾತನಾಡಿ ಕಾರಂತರ ಆಶಯಗಳನ್ನು ಮತ್ತೆ ಕ್ರಿಯಾಶೀಲಗೊಳಿಸುವ ಮೂಲಕ ಬಾಲವನವನ್ನು ಪುನರುಜೀವನ ಗೊಳಿಸಲಾಗುವುದು. ಎಲ್ಲರನ್ನೂ ಸೇರಿಸಿಕೊಂಡು ಬಾಲವನ ರಾಜ್ಯಕ್ಕೆ ಮಾದರಿಯಾಗುವಂತೆ ರೂಪಿಸಲಾಗುವುದು. ನಿರಂತರ ಕಾರ್ಯಕ್ರಮಗಳನ್ನು ಇಲ್ಲಿ ನಡೆಸಲಾಗುವುದು ಎಂದರು.

ಡಾ.ಕಾರಂತರು ಪ್ರಕೃತಿಯ ಜತೆಗಿನ ಬದುಕನ್ನು ಅನಾವರಣಗೊಳಿಸಿ ಅದರಲ್ಲಿ ಬದುಕುವ ಚಿಂತನೆಯನ್ನು ಹುಟ್ಟು ಹಾಕಿದವರು. ಸಾಹಿತ್ಯ, ಸಾಂಸ್ಕೃತಿಕವಾಗಿ ಪರಿಸರವನ್ನು ಕಟ್ಟಿ ಬೆಳೆಸುವ ಮೂಲಕ ನಮ್ಮ ಬದುಕನ್ನು ಚೈತನ್ಯಮಯಗೊಳಿಸುವ ಪ್ರಯತ್ನ ನಡೆಸಿದರು. ಬಾಲವನದಂತಹ ಪ್ರಕೃತಿದತ್ತ ತಾಣವನ್ನು ನಿರ್ಮಿಸಿ ಆಹ್ಲಾದಕರ ಮನೋಭೂಮಿಕೆಗೆ ಅರ್ಥ ಕಂಡುಕೊಂಡವರು. ಸ್ವಾಮಿ ವಿವೇಕಾನಂದ ಅವರು ತನ್ನ ಚಿಕ್ಕ ಪ್ರಾಯದಲ್ಲಿಯೇ ಜಗತ್ತನ್ನು ನೋಡುವ ದೃಷ್ಟಿಕೋನವನ್ನು ನಾಡಿಗೆ ನೀಡಿದರು. ಈ ದಿಗ್ಗಜರ ಸದಾಶಯ ನಮ್ಮ ಬದುಕಿಗೆ ಅರ್ಥಪೂರ್ಣ ಚಿಂತನೆಯನ್ನು ನೀಡಲು ಸಹಕಾರಿಯಾಗಿದೆ ಎಂದು ಅವರು ಹೇಳಿದರು.

ಯುವ ಪ್ರಶಸ್ತಿ ಪ್ರಧಾನ

ಕರ್ನಾಟಕ ರಾಜ್ಯದ 30 ಜಿಲ್ಲೆಗಳ 30 ಯುವಕ-ಯುವತಿಯರಿಗೆ ಸ್ವಾಮಿ ವಿವೇಕಾನಂದ ರಾಜ್ಯ ಯುವ ಪ್ರಶಸ್ತಿಯನ್ನು ಪ್ರಧಾನ ಮಾಡಲಾಯಿತು. ನಾಲ್ಕು ಯುವಕ ಮಂಡಲಗಳಿಗೆ ಸಾಂಘಿಕ ಪ್ರಶಸ್ತಿಯನ್ನು ನೀಡಲಾಯಿತು. ಯೋಗಪಟು ಪ್ರಣಮ್ಯ ಅಗಳಿ ಮತ್ತು ಯುವ ಚಿತ್ರಕಲಾವಿದ ರಜತ್ ರೈ, ಉಪವಿಭಾಗಾಧಿಕಾರಿ ಡಾ. ಯತೀಶ್ ಉಳ್ಳಾಲ್, ಬಾಲವನ ಕಾರ್ಯಕ್ರಮ ಸಂಯೋಜಕ ಕೃಷ್ಣಪ್ಪ ಬಂಬಿಲ ಅವರನ್ನು ಗೌರವಿಸಲಾಯಿತು.

ವೇದಿಕೆಯಲ್ಲಿ ಪುತ್ತೂರು ನಗರಸಭಾ ಪೌರಾಯುಕ್ತೆ ರೂಪಾ ಟಿ ಶೆಟ್ಟಿ, ಮಹಿಳಾ ಮತ್ತು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀಲತಾ, ಯುವಜನ ಒಕ್ಕೂಟದ ಶೈಲೇಶ್ ಅಂಬೆಕಲ್ಲು, ಹಿರಿಯ ಸಾಹಿತಿ ಬಿ. ಪುರಂದರ ಭಟ್, ಸುಬ್ರಹ್ಮಣ್ಯ ಕರಂಬಾರು, ನೆಹರೂ ಯುವ ಕೇಂದ್ರದ ಸಮಸ್ವಯಾಧಿಕಾರಿ ರಘುವೀರ್ ಸೂಟರ್‍ಪೇಟೆ ಮತ್ತಿತರರು ಉಪಸ್ಥಿತರಿದ್ದರು.

ಜಿಲ್ಲಾ ಯುವಜನ ಒಕ್ಕೂಟದ ಅಧ್ಯಕ್ಷ ಸುರೇಶ್ ರೈ ಸೂಡಿಮುಳ್ಳು ಸ್ವಾಗತಿಸಿದರು. ಬಾಲವನದ ಕಾರ್ಯಕ್ರಮ ಸಂಯೋಜಕ ಕೃಷ್ಣಪ್ಪ ಬಂಬಿಲ ವಂದಿಸಿದರು. ರಾಕೇಶ್ ರೈ ಕೆಡೆಂಜಿ ಮತ್ತು ಪತ್ರಕರ್ತ ಪ್ರವೀಣ್ ಚೆನ್ನಾವರ ಕಾರ್ಯಕ್ರಮ ನಿರೂಪಿಸಿದರು.

ಗಮನ ಸೆಳೆದ ಚಿತ್ರಕಲಾವಿದ
ಪುತ್ತೂರು: ಡಾ. ಶಿವರಾಮ ಕಾರಂತ ಬಾಲವನದಲ್ಲಿ ಗುರುವಾರ ನಡೆದ ರಾಜ್ಯ ಯುವ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಸ್ಥಳದಲ್ಲಿಯೇ ಡಾ. ಶಿವರಾಮ ಕಾರಂತರ ಚಿತ್ರ ಬಿಡಿಸುವ ಮೂಲಕ ಕಲಾವಿದ ರಜಿತ್ ರೈ ಸವಣೂರು ಸಭಿಕರ ಗಮನ ಸೆಳೆದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News