ಫೆ.29ರಿಂದ ಉಡುಪಿ ಜಿಲ್ಲಾ ಮಟ್ಟದ ಫಲಪುಷ್ಪಪ್ರದರ್ಶನ

Update: 2020-02-27 16:51 GMT

ಉಡುಪಿ, ಫೆ.27: ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಉಡುಪಿ ಜಿಲ್ಲೆ ತೋಟಗಾರಿಕೆ, ಕೃಷಿ ಹಾಗೂ ಕೃಷಿ ಸಂಬಂಧಿತ ಇಲಾಖೆಗಳ ಸಹಯೋಗ ದಲ್ಲಿ ಉಡುಪಿ ಜಿಲ್ಲಾ ಮಟ್ಟದ ಫಲಪುಷ್ಪಪ್ರದರ್ಶನವನ್ನು ಫೆ.29ರಿಂದ ಮಾ.2 ರವರೆಗೆ ಉಡುಪಿ ದೊಡ್ಡಣಗುಡ್ಡೆಯ ಶಿವಳ್ಳಿ ಮಾದರಿ ತೋಟಗಾರಿಕಾ ಕ್ಷೇತ್ರದ ರೈತ ಸೇವಾ(ಪುಷ್ಪ ಹರಾಜು) ಕೇಂದ್ರದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.

ತೋಟಗಾರಿಕಾ ಇಲಾಖೆಯ ಕಚೇರಿಯಲ್ಲಿ ಗುರುವಾರ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರೀತಿ ಗೆಹ್ಲೋಟ್ ಈ ಕುರಿತು ಮಾಹಿತಿ ನೀಡಿದರು. ಪ್ರದರ್ಶನವನ್ನು ಫೆ.29ರಂದು ಸಂಜೆ 4:30ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಉದ್ಘಾಟಿಸಲಿದ್ದು, ತೋಟಗಾರಿಕಾ ಮತ್ತು ರೇಷ್ಮೆ ಸಚಿವ ಸಿ.ನಾರಾಯಣ ಗೌಡ ಮೊದಲಾದ ವರು ಭಾಗವಹಿಸಲಿರುವರು.

30,000 ಹೂವುಗಳ ಬಳಕೆ: ಈ ಬಾರಿಯ ಪಲಪುಷ್ಪಪ್ರದರ್ಶನದಲ್ಲಿ ಸಮುದ್ರ ನೀರಿನಲ್ಲಿ ವಾಸಿಸುವ ಜಲಚರಗಳ ಆಕೃತಿಗಳನ್ನು ತಯಾರಿಸುವುದು ಮುಖ್ಯ ವಿಷಯವಾಗಿದೆ. ಪ್ರಮುಖವಾಗಿ ಸೀ ಹಾರ್ಸ್‌, ಮೆಕೆರಲ್- ಇಂಡಿಯನ್ ಫಿಶ್, ಸಾರ್ ಡೈನ್- ಇಂಡಿಯನ್ ಫಿಶ್(ಬೂತಾಯಿ), ಅಕ್ಟೋಪಸ್, ಶೆಲ್‌ಫಿಶ್, ಸ್ಟಾರ್ ಫಿಶ್‌ಗಳು ಗುಲಾಬಿ, ಸೇವಂತಿಗೆ, ಚೆಂಡು ಹೂವು, ಗ್ಲಾಡಿಯೋಲಸ್, ಕಾರ್ನೇಶನ್ ಪುಷ್ಪಗಳಿಂದ ಅಲಂಕೃತೊಳ್ಳಲಿವೆ.

24 ಅಡಿ ಉದ್ದದ ಹಡಗಿನ ಕಲಾಕೃತಿಯನ್ನು ಗುಲಾಬಿ, ಸೇವಂತಿಗೆ, ಚೆಂಡು ಹೂವು, ಗ್ಲಾಡಿಯೋಲಸ್, ಕಾರ್ನೇಶನ್ ಪುಷ್ಪಗಳಿಂದ ರಚಿಸಲಾಗುತ್ತದೆ. ಒಟ್ಟು 30000 ಹೂವುಗಳನ್ನು ಮಾದರಿ ರಚನೆಗಳಿಗೆ ಬಳಸಲಾಗುತ್ತಿದೆ. ತರಕಾರಿಯಲ್ಲಿ ವಿವಿಧ ದಾರ್ಶನಿಕರ ಪ್ರಾಣಿಗಳ ಮಾದರಿಯನ್ನು ಕೆತ್ತನೆ ವಾಡಿ ಪ್ರದರ್ಶಿಸ ಲಾಗುತ್ತದೆ.

ಕುಂಡಗಳಲ್ಲಿ ಹಾಗೂ ಪಾಲಿಬ್ಯಾಗ್‌ಗಳಲ್ಲಿ ಅಲಂಕಾರಿಕ ಪುಷ್ಪ ಜಾತಿಯ ಹೂವುಗಳಾದ ಪೆಟೋನಿಯ, ಸ್ಯಾಲ್ವಿಯಾ, ಸೆಲೋಶಿಂ, ಕಾಕ್ಸ್ ಕೂಂಬ್, ಗಾಝೀನಿಯಾ, ಡಯಾಂತಸ್, ಥೊರೇನಿಯಾ, ಗುಲಾಬಿ, ದಾಸವಾಳ, ಸೇವಂತಿಗೆ, ಚೆಂಡು ಹೂವು, ಕಳಂಚಿಯಾ ಹೀಗೆ ಒಟ್ಟು 12 ವಿವಿಧ ಜಾತಿಯ ಅಲಂಕಾರಿಕ ಪುಷ್ಪಗಳ 6000 ಗಿಡಗಳನ್ನು ವಿವಿಧ ಮಾದರಿಯಲ್ಲಿ ಜೋಡಿಸ ಲಾಗುತ್ತದೆ.

ಯೋಜನೆಗಳ ಮಾಹಿತಿ: ಏಷ್ಯಾಟಿಕ್ ಲಿಲ್ಲಿ ಮತ್ತು ಆಲ್‌ಸ್ಟ್ರೋಮೇರಿಯಾ ಲಿಲ್ಲಿ ಅಲಂಕಾರಿಕ ಹೂವುಗಳ ಇಕೆಬನ ಹೆಚ್ಚಿನ ಆಕರ್ಷಣೆಯನ್ನು ನೀಡಲಿದೆ. ಒಟ್ಟು 8 ಕೃಷಿ ಹಾಗೂ ಕೃಷಿ ಸಂಬಂಧಿತ ಇಲಾಖೆಗಳ ಮಳಿಗೆಗಳಿದ್ದು, ಪಲಪುಷ್ಪಪ್ರದರ್ಶನಕ್ಕೆ ಬರುವ ಸಾರ್ವಜನಿಕರಿಗೆ ಸರಕಾರದ ವಿವಿಧ ಯೋಜನೆ ಗಳ ಮಾಹಿತಿ ನೀಡಲಾುವುದು ಎಂದು ಅವರು ತಿಳಿಸಿದರು.

ಇಲಾಖೆಯ ವತಿಯಿಂದ ಹೈಡ್ರೋಪೋನಿಕ್ಸ್ ಹಾಗೂ ವರ್ಟಿಕಲ್ ಗಾರ್ಡನ್ ಮಾದರಿಗಳನ್ನು ತಯಾರಿಸಲಾಗಿದ್ದು, ಲಭ್ಯವಿರುವ ಜಾಗದ ವ್ಯವಸ್ಥಿತ ಬಳಕೆಗೆ ಹಾಗೂ ತೋಟಗಾರಿಕೆ ಚಟುವಟಿಕೆಗಳನ್ನು ನಡೆಸಲು ಮಾಹಿತಿ ನೀಡಲಾಗುತ್ತದೆ. ರೈತ ಸೇವಾ ಕೇಂದ್ರದ ಹಿಂಭಾಗದಲ್ಲಿ ವಿವಿಧ ವಸ್ತುಗಳ ಮಾರಾಟಕ್ಕಾಗಿ 32 ಮಳಿಗೆಗಳನ್ನು ನೀಡಲಾಗುತ್ತಿದೆ.

ತೋಟಗಾರಿಕೆ ಇಲಾಖೆಯ ಕ್ಷೇತ್ರ ಮತ್ತು ಸಸ್ಯಾಗಾರಗಳಲ್ಲಿ ಬೆಳೆಸಿರುವ ವಿವಿಧ ಕಸಿ/ಸಸಿಗಳ ಮಾರಾಟದ ವ್ಯವಸ್ಥೆ ಮಾಡಲಾಗುತ್ತದೆ. ರೈತ ಸೇವಾ ಕೇಂದ್ರದ ಆವರಣದಲ್ಲಿ ಇರುವ ಮಾದರಿ ಮಲ್ಲಿಗೆ ತೋಟ, ತರಕಾರಿ ತೋಟ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಸಿಇಓ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ತೋಟಗಾರಿಕಾ ಇಲಾಖೆಯ ಉಪನಿರ್ದೇಶಕಿ ಭುವನೇಶ್ವರಿ, ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ನಿಧೀಶ್ ಹಾಜರಿದ್ದರು.

ಪುಷ್ಪರಂಗೋಲಿ ಸ್ಪರ್ಧೆ

ಪಲಪುಷ್ಪಪ್ರದರ್ಶನದ ಅಂಗವಾಗಿ ಸಾರ್ವಜನಿಕರಿಗೆ, ಪುಷ್ಪರಂಗೋಲಿ ರಚನೆಯ ಸ್ಪರ್ಧೆಯನ್ನು ಮಾ.1ರಂದು ಬೆಳಗ್ಗೆ 10 ಗಂಟೆಗೆ ಆಯೋಜಿಸ ಲಾಗಿದೆ. ಮಾ.2ರಂದು ತೋಟಗಾರಿಕೆ ಇಲಾಖೆಯಿಂದ ಬಹುವಾಷಿಕ ತೋಟಗಾರಿಕೆ ಬೆಳೆಗಳಲ್ಲಿ ಲಾಭದಾಯಕ ಮಿಶ್ರ ಬೇಸಾಯ ಎಂಬ ವಿಷಯದ ಬಗ್ಗೆ ವಿಚಾರ ಸಂಕಿರ್ಣವನ್ನು ಏರ್ಪಡಿಸಲಾಗಿದೆ. ಸಾರ್ವಜನಿಕರು ಇದರ ಉಪಯೋಗವನ್ನು ಪಡೆದುಕೊಳ್ಳಬೇಕು ಎಂದು ಸಿಇಒ ಪ್ರೀತಿ ಗೆಹ್ಲೋಟ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News