ಎಪ್ರಿಲ್‌ಗೆ ಮಂಗಳೂರಿನಲ್ಲಿ ಹೂಡಿಕೆದಾರರ ಸಮಾವೇಶ: ಸಚಿವ ಜಗದೀಶ ಶೆಟ್ಟರ್

Update: 2020-02-29 12:39 GMT

ಮಂಗಳೂರು, ಫೆ.29: ರಾಜ್ಯದ ದ್ವಿತೀಯ ಹಂತದ ನಗರಗಳಲ್ಲಿ ಕೈಗಾರಿಕೆಗಳ ಅಭಿವೃದ್ಧಿಗೆ ಸರಕಾರ ಆದ್ಯತೆ ನೀಡುತ್ತಿದೆ. ಈ ನಿಟ್ಟನಲ್ಲಿ ಎಪ್ರಿಲ್ ಅಂತ್ಯಕ್ಕೆ ಅಥವಾ ಮೇ ಮೊದಲ ವಾರದಲ್ಲಿ ಮಂಗಳೂರಿನಲ್ಲಿ ಹೂಡಿಕೆದಾರರ ಸಮಾವೇಶ ಮತ್ತು ಉದ್ಯೋಗ ಮೇಳ ನಡೆಸಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ತಿಳಿಸಿದ್ದಾರೆ.

ದ.ಕ. ಜಿಲ್ಲಾ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ವತಿಯಿಂದ ನಗರದ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ಶನಿವಾರ ನಡೆದ ದ.ಕ. ಜಿಲ್ಲೆಯ ಕೈಗಾರಿಕಾಭಿವೃದ್ಧಿ ಸಭೆಯಲ್ಲಿ ಅವರು ಮಾತನಾಡಿದರು.

 ಬೆಂಗಳೂರಿನಲ್ಲಿ ಕೈಗಾರಿಕೆ ಸ್ಥಾಪಿಸಲು ಭೂಮಿಗೆ ಬೇಡಿಕೆ ಇದೆ. ಕೈಗಾರಿಕೆಗೆ ಬೆಂಗಳೂರು ಮಾತ್ರ ಸೂಕ್ತ ಎಂಬ ಉದ್ಯಮಿಗಳ ಮಾನಸಿಕತೆ ಬದಲಾಯಿಸಬೇಕಿದೆ. ಮಂಗಳೂರು, ಮೈಸೂರು, ಹುಬ್ಬಳ್ಳಿ, ಕಲಬುರಗಿ, ಬೆಳಗಾವಿ ಸಹಿತ ರಾಜ್ಯದ ಎರಡು ಮತ್ತು ಮೂರನೇ ಹಂತದ ನಗರಗಳಲ್ಲಿ ಕೈಗಾರಿಕೆ ಅಭಿವೃದ್ಧಿಗೆ ಬೇಕಾದ ಮೂಲಸೌಲಭ್ಯ ಒದಗಿಸುವ ಮೂಲಕ ಹೂಡಿಕೆದಾರರನ್ನು ಆಕರ್ಷಿಸಲು ಸರಕಾರ ಬದ್ಧವಾಗಿದೆ. ಈ ನಿಟ್ಟಿನಲ್ಲಿ ಎಲ್ಲ ಕಡೆ ಹೂಡಿಕೆದಾರರ ಸಮಾವೇಶ ನಡೆಸಲಾಗುತ್ತಿದೆ ಎಂದರು.

ಕರಾವಳಿಯಲ್ಲಿ ಧರ್ಮಸ್ಥಳ, ಸುಬ್ರಹ್ಮಣ್ಯ, ಉಳ್ಳಾಲ ದರ್ಗಾ, ಚರ್ಚ್‌ಗಳು ಸಹಿತ ಧಾರ್ಮಿಕ ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶವಿದೆ. ವೆಲ್‌ನೆಸ್ ಸೆಂಟರ್‌ಗಳ (ಕ್ಷೇಮ ಕೇಂದ್ರ) ಮೂಲಕವೂ ಪ್ರವಾಸೋದ್ಯಮ ಅಭಿವೃದ್ಧಿ ಸಾಧ್ಯ. ಕರಾವಳಿಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ರಾಜ್ಯ ಸರಕಾರ ಬದ್ಧವಿದೆ ಎಂದು ಸಚಿವರು ವಾಗ್ದಾನ ಮಾಡಿದರು.

ರಾಜ್ಯದಲ್ಲಿ ಕೈಗಾರಿಕೆಗಳಿಗೆ ನೀಡಲು ಭೂಮಿಯ ಕೊರತೆ ಇಲ್ಲ. ಮಂಗಳೂರಿನಲ್ಲಿ ಲ್ಯಾಂಡ್ ಬ್ಯಾಂಕ್ ಆರಂಭಿಸಬೇಕು ಎಂಬ ಬೇಡಿಕೆಯಿದೆ. ಜಿಲ್ಲೆಯಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಮುಂದೆ ಬರುವವರಿಗೆ ಅಗತ್ಯ ಇರುವಷ್ಟು ಭೂಮಿ ನೀಡಲು ಸರಕಾರ ಸಿದ್ಧ. ಬೇಡಿಕೆಗೆ ಅನುಗುಣವಾಗಿ ಸರಕಾರ ಭೂಸ್ವಾಧೀನ ನಡೆಸಲಿದೆ. ಈಗಾಗಲೇ ಯಾದಗಿರಿ ಜಿಲ್ಲೆಯಲ್ಲಿ 2000 ಎಕರೆ ಭೂಮಿಯನ್ನು ಕೆಐಎಡಿಬಿಗೆ ನೀಡಿದ್ದು, ಅಭಿವೃದ್ಧಿ ಕಾರ್ಯಗಳ ಭರದಿಂದ ಸಾಗಿದೆ ಎಂದರು.

ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್ ಕಟೀಲು ಮಾತನಾಡಿ, ಗಂಜಿಮಠದ ಕೈಗಾರಿಕಾ ಪ್ರದೇಶಕ್ಕೆ ಸಂಪರ್ಕ ಕಲ್ಪಿ ಸುವ ಕುಲಶೇಖರ- ಕಾರ್ಕಳ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗೆ 18 ಗ್ರಾಮಗಳಲ್ಲಿ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿದೆ. ಗುರುಪುರ ಸೇತುವೆ ಮೇ ತಿಂಗಳಲ್ಲಿ ಪೂರ್ಣಗೊಳ್ಳುವ ಸಾಧ್ಯತೆ ಇದೆ. ಶೀಘ್ರದಲ್ಲಿ ಟೆಂಡರ್ ಪ್ರಕ್ರಿಯೆ ನಡೆಯಲಿದೆ ಎಂದರು.

ಬಿ.ಸಿ.ರೋಡ್- ಅಡ್ಡಹೊಳೆ ಹೆದ್ದಾರಿ ಅಭಿವೃದ್ಧಿಗೆ ಅರಣ್ಯ ಇಲಾಖೆ ಕ್ಲೀಯರೆನ್ಸ್ ಹೊರತುಪಡಿಸಿದ ಕಡೆಗಳಲ್ಲಿ ಕಾಮಗಾರಿ ಪುನರಾರಂಭಗೊಳ್ಳಲಿದೆ ಎಂದು ತಿಳಿಸಿದರು.

ಕೈಗಾರಿಕೋದ್ಯಮಿಗಳ ಪ್ರತಿನಿಧಿ ಗೌರವ್ ಹೆಗ್ಡೆ ಮಾತನಾಡಿ, ಮಂಗಳೂರಿನಲ್ಲಿ ಪರಿಸರ ಸಹ್ಯ ಕೃಷಿ ಆಧಾರಿತ ಆಹಾರ ಸಂಸ್ಕರಣೆ ಸಹಿತ ಸಣ್ಣ ಮತ್ತು ಮಧ್ಯಮ ಉದ್ದಿಮೆಗಳಿಗೆ ಸರಕಾರ ಪ್ರೋತ್ಸಾಹ ನೀಡಬೇಕು. ‘ಲ್ಯಾಂಡ್ ಬ್ಯಾಂಕ್’ ನಿರ್ಮಿಸಬೇಕು. ಬೈಕಂಪಾಡಿಯ ಜೆಸ್ಕೊ ಭೂಮಿಯನ್ನು ಇತರ ಕೈಗಾರಿಕೆಗಳಿಗೆ ನೀಡಬೇಕು. ಶಿರಾಡಿ ಘಾಟ್‌ನಲ್ಲಿ ಸುರಂಗ ಮಾರ್ಗ ನಿರ್ಮಿಸ ಬೇಕು. ಮಂಗಳೂರು-ಬೆಂಗಳೂರು ರೈಲು ಸಂಪರ್ಕ ಅಭಿವೃದ್ಧಿಪಡಿಸಬೇಕು. ಮಂಗಳೂರಿನಲ್ಲಿ ಟ್ರಕ್ ಟರ್ಮಿನಲ್ ನಿರ್ಮಿಸಬೇಕು. ಕೈಗಾರಿಕಾ ಟೌನ್‌ಶಿಪ್ ಪ್ರಾಧಿಕಾರ ರಚಿಸಬೇಕು ಎಂದು ಮನವಿ ಮಾಡಿದರು.

ಕುದುರೆಮುಖ ಕಬ್ಬಿಣದ ಅದಿರು ಕಂಪೆನಿ (ಕೆಐಒಸಿಎಲ್) ಅಧಿಕಾರಿ ಗಜಾನನ ಶೆಣೈ ಮಾತನಾಡಿ, ಕೆಐಒಸಿಎಲ್‌ನ ಹೊಸ ಯೋಜನೆಗೆ ಅರಣ್ಯ ಇಲಾಖೆ ಅನುಮತಿ ದೊರಕಿಸಿ ಕೊಡಬೇಕು ಎಂದು ವಿನಂತಿಸಿದರು. ಶಾಸಕರಾದ ಡಾ. ವೈ. ಭರತ್ ಶೆಟ್ಟಿ, ಯು.ಟಿ. ಖಾದರ್, ಹರೀಶ್ ಕುಮಾರ್, ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಸಿಇಒ ಬಸವರಾಜು ಉಪಸ್ಥಿತರಿದ್ದರು.

ಸಭೆಯಲ್ಲಿ ಸಿಐಎ ಚೇರ್‌ಮನ್ ಪ್ರಕಾಶ್ ಕಲ್ಬಾವಿ, ಪ್ರವಾಸೋದ್ಯಮ ಇಲಾಖೆಯ ಸನತ್‌ಕುಮಾರ್ ಶೆಟ್ಟಿ, ಪ್ಲಾಸ್ಟಿಕ್ ಉತ್ಪಾದನಾ ಸಂಸ್ಥೆಯ ನಝೀರ್, ಉದ್ಯಮಿಗಳಾದ ರೇವಣಗೌಡ, ಅರ್ಚನಾ, ವಿಶಾಲ್ ಸಾಲ್ಯಾನ್, ಅಜಿತ್ ತಾರಾನಾಥ, ಶಶಿಕುಮಾರ್, ಶಿವಶಂಕರ್ ಮತ್ತಿತರರು ಉಪಸ್ಥಿತರಿದ್ದರು. ಕೈಗಾರಿಕಾ ಇಲಾಖೆಯ ಅಧಿಕಾರಿ ಗೋಕುಲದಾಸ್ ನಾಯಕ್ ಸ್ವಾಗತಿಸಿದರು.

ಮಾ.29ಕ್ಕೆ ಹುಬ್ಬಳ್ಳಿ-ಮಂಗಳೂರು ವಿಮಾನ ಆರಂಭ

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಅವಧಿಯಲ್ಲಿ ದೇಶದಲ್ಲಿ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಯಾಗುವ ಮೂಲಕ ಕೈಗಾರಿಕೆಗಳಿಗೆ ನೆರವಾಗಿದೆ. ಪ್ರಸ್ತುತ ಪ್ರಧಾನಿ ನರೇಂದ್ರ ಮೋದಿ ‘ಉಡಾನ್’ ಯೋಜನೆಯಲ್ಲಿ ಸಣ್ಣ ನಗರಗಳಲ್ಲೂ ವಿಮಾನ ನಿಲ್ದಾಣ ನಿರ್ಮಿಸಿ ವಿಮಾನಯಾನಕ್ಕೆ ಅವಕಾಶ ಮಾಡಿಕೊಡುತ್ತಿದ್ದಾರೆ. ಮಾ.29ಕ್ಕೆ ಹುಬ್ಬಳ್ಳಿಯಿಂದ ಮಂಗಳೂರಿಗೆ ನೇರ ವಿಮಾನಯಾನ ಆರಂಭವಾಗಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ತಿಳಿಸಿದ್ದಾರೆ.

ಬೆಳಗಾವಿ, ಕಲಬುರಗಿ ವಿಮಾನ ನಿಲ್ದಾಣಗಳೂ ಅಭಿವೃದ್ಧಿಗೊಂಡಿದ್ದು, ಕೈಗಾರಿಕೆಗೆ ಉತ್ತೇಜನ ದೊರೆಯಲಿದೆ. ಹುಬ್ಬಳ್ಳಿ ಜತೆಗೆ ಗೋವಾ, ಕೊಚ್ಚಿ, ಪುಣೆಗೂ ಮಂಗಳೂರಿನಿಂದ ಶೀಘ್ರ ವಿಮಾನಯಾನ ಆರಂಭಗೊಳ್ಳಲಿದೆ ಎಂದೂ ಸಚಿವರು ಮಾಹಿತಿ ನೀಡಿದರು.

ಕೈಗಾರಿಕೆಗೆ ಭೂಮಿ ನೀಡಿಕೆ ನಿಯಮ ಸರಳೀಕರಣ

ಕೈಗಾರಿಕಾ ಸಂಸ್ಥೆಗಳಿಗೆ ಕೆಲವೆಡೆ ದುಪ್ಪಟ್ಟು ತೆರಿಗೆಯ ಸಮಸ್ಯೆಯಿದೆ. ನಗರಾಭಿವೃದ್ಧಿ ಇಲಾಖೆ ಸಹಕಾರದೊಂದಿಗೆ ಈ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಲಾಗುವುದು. ಖಾಸಗಿ ಕೈಗಾರಿಕಾ ಸಂಸ್ಥೆಗಳಿಗೆ ಭೂಮಿ ನೀಡಿಕೆಯ ನಿಯಮ ಸರಳೀಕರಣ ಮಾಡಲಾಗು ವುದು ಎಂದು ಸಚಿವ ಜಗದೀಶ ಶೆಟ್ಟರ್ ತಿಳಿಸಿದರು.

ಅರ್ಜಿ ಸಲ್ಲಿಸಿದ 30 ದಿನದೊಳಗೆ ಭೂಪರಿವರ್ತನೆ ಆಗದಿದ್ದರೆ, ‘ಡೀಮ್ಡ್ ಫಾರೆಸ್ಟ್’ ಎಂದು ಪರಿಗಣಿಸಲಾಗುವುದು. ಕೈಗಾರಿಕಾ ಟೌನ್‌ಶಿಪ್ ಪ್ರಾಧಿಕಾರ ರಚನೆಗೆ ನಗರಾಭಿವೃದ್ಧಿ ಇಲಾಖೆ ನಿಯಮ ಅಡ್ಡಿಯಾಗಿದೆ. ಈ ಸಂಬಂಧ ಕೈಗಾರಿಕಾ ಟೌನ್‌ಶಿಪ್ ಪ್ರಾಧಿಕಾರದ ಶೇ.30ರಷ್ಟು ತೆರಿಗೆಯನ್ನು ನಗರ ಸ್ಥಳೀಯ ಸಂಸ್ಥೆ, ಗ್ರಾಮ ಪಂಚಾಯತ್‌ಗಳಿಗೆ ನೀಡುವುದು ಹಾಗೂ ಉಳಿದ ಶೇ.70ರಷ್ಟು ತೆರಿಗೆಯ ಹಣವನ್ನು ಕೈಗಾರಿಕಾ ಟೌನ್‌ಶಿಪ್ ಪ್ರಾಧಿಕಾರ ಬಳಸಿಕೊಳ್ಳುವ ಸಂಬಂಧ ನಗರಾಭಿವೃದ್ಧಿ ಇಲಾಖೆ ಜತೆ ಚರ್ಚಿಸಲಾಗುವುದು ಎಂದು ಸಚಿವ ಜಗದೀಶ ಶೆಟ್ಟರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News