×
Ad

ಮೀನುಗಾರರಿಗೆ ವಿತರಿಸುವ ಸೀಮೆಎಣ್ಣೆ ಪ್ರಮಾಣ ಹೆಚ್ಚಳಕ್ಕೆ ಪ್ರಯತ್ನ: ಸಚಿವ ಕೆ.ಗೋಪಾಲಯ್ಯ

Update: 2020-02-29 20:36 IST

ಉಡುಪಿ, ಫೆ.29: ಕರಾವಳಿಯಲ್ಲಿ ನಾಡದೋಣಿಯನ್ನು ಅವಲಂಬಿಸಿರುವ ಮೀನುಗಾರರ ಸಂಕಷ್ಟಗಳಿಗೆ ಸ್ಪಂದಿಸಲು ಸರಕಾರ ಬದ್ದವಾಗಿದೆ. ನಾಡದೋಣಿ ಮೀನುಗಾರರಿಗೆ ಪ್ರಸ್ತುತ ಸರಕಾರದ ವತಿಯಿಂದ 210ರಿಂದ 230 ಲೀಟರ್ ಸೀಮೆಎಣ್ಣೆ ಒದಗಿಸಲಾ ಗುತಿದ್ದು, ಮೀನುಗಾರರು ಕನಿಷ್ಠ 400 ಲೀ. ಸೀಮೆ ಎಣ್ಣೆಗೆ ಬೇಡಿಕೆ ಇಟ್ಟಿದ್ದಾರೆ. ಮುಖ್ಯಮಂತ್ರಿಗಳು ಹಾಗೂ ಮೀನುಗಾರಿಕಾ ಸಚಿವರ ಜೊತೆ ಸಮಾಲೋಚನೆ ನಡೆಸಿ ಸೀಮೆಎಣ್ಣೆ ವಿತರಣೆಯಲ್ಲಿ ಹೆಚ್ಚಳ ಮಾಡಿ ಬಡ ಮೀನುಗಾರರ ಸಂಕಷ್ಟಗಳಿಗೆ ಸ್ಪಂದಿಸಲು ಪ್ರಯತ್ನಿಸಲಾಗುವುದು ಎಂದು ರಾಜ್ಯ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಸಚಿವ ಕೆ.ಗೋಪಾಲಯ್ಯ ತಿಳಿಸಿದ್ದಾರೆ.

ಶನಿವಾರ ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಅವರು ಈ ವಿಷಯ ತಿಳಿಸಿದರು.

ಉಡುಪಿಯಲ್ಲಿ 4300 ನಾಡದೋಣಿ ಮೀನುಗಾರರಿದ್ದು, ಈ ದೋಣಿಗಳು ಕಾರ್ಯನಿರ್ವಹಿಸಲು ಸೀಮೆಎಣ್ಣೆಯ ಅಗತ್ಯವಿದೆ. ಸೀಮೆಎಣ್ಣೆಯ ಪ್ರಮಾಣ ವನ್ನು ಹೆಚ್ಚಿಸುವುದರಿಂದ ಮೀನುಗಾರರಿಗೆ ನೆರವಾಗಲಿದೆ. ಈ ನಿಟ್ಟಿನಲ್ಲಿ ಸೀಮೆ ಎಣ್ಣೆಯ ಪ್ರಮಾಣವನ್ನು ಹೆಚ್ಚಿಸಲು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.

ಕೇಂದ್ರ ಸರಕಾರ ಈಗಾಗಲೇ ರಾಜ್ಯಗಳಿಗೆ ಸೀಮೆಎಣ್ಣೆ ಹಂಚಿಕೆಯನ್ನು ನಿಲ್ಲಿಸಿರುವ ಕುರಿತು ಅವರು ಗಮನ ಸೆಳೆದಾಗ, ಈಗ ಸಬ್ಸಿಡಿ ಸೀಮೆಎಣ್ಣೆ ಸರಬರಾಜಿಲ್ಲ. ಆದರೆ ಮುಕ್ತ ಮಾರುಕಟ್ಟೆಯಲ್ಲಿ ಅದು ಲಭ್ಯವಿದೆ. ರಾಜ್ಯದಲ್ಲಿ 10 ಲಕ್ಷ ಕುಟುಂಬಗಳು ಈಗಲೂ ಸೀಮೆಎಣ್ಣೆ ಬಳಸುತ್ತಿವೆ ಎಂದರು.

ಇ-ಕೆವೈಸಿ 2 ತಿಂಗಳು ವಿಸ್ತರಣೆ: ಪಡಿತರ ಚೀಟಿಗಳ ಇ-ಕೆವೈಸಿ ಪ್ರಕ್ರಿಯೆ ಗಳಿಗೆ ಸರ್ವರ್ ಸಮಸ್ಯೆಯಿಂದ ತೊಡಕುಂಟಾಗಿದ್ದು, ಇಲ್ಲಿವರೆಗೆ 3,52,154 ಸದಸ್ಯರ ಇ-ಕೆವೈಸಿ ಸಂಗ್ರಹಣೆಯಾಗಿದ್ದು, ಶೇ. 44 ಪ್ರಗತಿ ದಾಖಲಾಗಿದೆ. ಸದ್ಯ ಇ-ಕೆವೈಸಿ ಸಂಗ್ರಹಣೆ ಪ್ರಕ್ರಿಯೆಯನ್ನು ಇನ್ನೂ ಎರಡು ತಿಂಗಳ ಕಾಲ (ಮಾರ್ಚ್-ಎಪ್ರಿಲ್) ವಿಸ್ತರಿಸಲಾಗಿದೆ. ಈ ಎರಡು ತಿಂಗಳ ಕಾಲ ಕರಾವಳಿಯ ಎಲ್ಲಾ ನ್ಯಾಯಬೆಲೆ ಅಂಗಡಿಗಳಲ್ಲೂ ಸರಕಾರಿ ರಜಾ ದಿನಗಳನ್ನು ಹೊರತು ಪಡಿಸಿ ಉಳಿದಂತೆ ಪ್ರತಿದಿನ ಬೆಳಗ್ಗೆ 7 ಗಂಟೆಯಿಂದ ರಾತ್ರಿ 9 ಗಂಟೆವರೆಗೂ ಇ-ಕೆವೈಸಿ ನೋಂದಣಿಯನ್ನು ಕೈಗೊಂಡು ಶೇ.100 ಪ್ರಗತಿ ಸಾಧಿಸುವಂತೆ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಲಾಗಿದೆ ಎಂದರು.

ಪಡಿತರ ಚೀಟಿಗಳ ಇ-ಕೆವೈಸಿ ಪ್ರಕ್ರಿಯೆ ಗಳಿಗೆ ಸರ್ವರ್ ಸಮಸ್ಯೆಯಿಂದ ತೊಡಕುಂಟಾಗಿದ್ದು, ಇಲ್ಲಿವರೆಗೆ 3,52,154 ಸದಸ್ಯರ ಇ-ಕೆವೈಸಿ ಸಂಗ್ರಹಣೆಯಾಗಿದ್ದು, ಶೇ. 44 ಪ್ರಗತಿ ದಾಖಲಾಗಿದೆ. ಸದ್ಯ ಇ-ಕೆವೈಸಿ ಸಂಗ್ರಹಣೆ ಪ್ರಕ್ರಿಯೆಯನ್ನು ಇನ್ನೂ ಎರಡು ತಿಂಗಳ ಕಾಲ (ಮಾರ್ಚ್-ಎಪ್ರಿಲ್) ವಿಸ್ತರಿಸಲಾಗಿದೆ. ಈ ಎರಡು ತಿಂಗಳ ಕಾಲ ಕರಾವಳಿಯ ಎಲ್ಲಾ ನ್ಯಾಯಬೆಲೆ ಅಂಗಡಿಗಳಲ್ಲೂ ಸರಕಾರಿ ರಜಾ ದಿನಗಳನ್ನು ಹೊರತು ಪಡಿಸಿ ಉಳಿದಂತೆ ಪ್ರತಿದಿನ ಬೆಳಗ್ಗೆ 7 ಗಂಟೆಯಿಂದ ರಾತ್ರಿ 9 ಗಂಟೆವರೆಗೂ ಇ-ಕೆವೈಸಿ ನೋಂದಣಿಯನ್ನು ಕೈಗೊಂಡು ಶೇ.100 ಪ್ರಗತಿ ಸಾಧಿಸುವಂತೆ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಲಾಗಿದೆ ಎಂದರು. ಜಿಲ್ಲೆಯಲ್ಲಿ 28,333 ಅಂತ್ಯೋದಯ, 1,61,609 ಆದ್ಯತಾ (ಬಿಪಿಎಲ್) ಪಡಿತರ ಚೀಟಿಗಳು, 1,00,236 ಆದ್ಯತೇತರ (ಎಪಿಎಲ್) ಪಡಿತರ ಚೀಟಿಗಳಿದ್ದು, ಒಟ್ಟು 2,90,178 ಪಡಿತರ ಚೀಟಿಗಳು ಚಾಲ್ತಿಯಲ್ಲಿವೆ. 190686 ಪಡಿತರ ಚೀಟಿಗಳನ್ನು ಆಧಾರ್ ಕಾರ್ಡ್‌ಗೆ ಜೋಡಣೆ ಮಾಡಲಾಗಿದ್ದು, ಶೇ.100 ಪ್ರಗತಿ ಸಾಧಿಸಲಾಗಿದೆ ಎಂದರು.

ಜಿಲ್ಲೆಯಲ್ಲಿ 7,98,735 ಕುಟುಂಬಗಳ ಸದಸ್ಯರಿಗೆ ಬಯೋಮೆಟ್ರಿಕ್ ಮೂಲಕ ಆಹಾರ ವಿತರಣೆ ನಡೆಯುತ್ತಿದೆ. ಒಟ್ಟು 292 ನ್ಯಾಯಬೆಲೆ ಅಂಗಡಿಗಳು, 3 ಟಿಎಪಿಸಿಎಂಎಸ್ ಸಗಟು ಮಳಿಗೆಗಳು 24 ಎಲ್‌ಪಿಜಿ ವಿತರಕರು ಮತ್ತು 97 ಪೆಟ್ರೋಲ್ ಬಂಕ್ ಹಾಗೂ 98 ವೇಬ್ರಿಡ್ಜ್‌ಗಳಿವೆ. ಜಿಲ್ಲೆಯ 292 ನ್ಯಾಯ ಬೆಲೆ ಅಂಗಡಿಗಳಲ್ಲಿ 291 ಅಂಗಡಿಗಳನ್ನು ಪಿಓಎಸ್ ಆಗಿ ಪರಿವರ್ತಿಸಲಾಗಿದೆ. ಬಯೋಮೆಟ್ರಿಕ್ ನೀಡಲು ಸಾಧ್ಯವಾಗದ 1327 ಮಂದಿ ಅಂಗವಿಕಲರು, ಅಶಕ್ತರು ಮತ್ತು ವಯೋವೃದ್ದರನ್ನು ಗುರುತಿಸಿ ಇವರಿಗೆ ಬಯೋಮೆಟ್ರಿಕ್ ನೀಡುವುದರಿಂದ ವಿನಾಯತಿ ನೀಡಿ ಪಡಿತರಗಳನ್ನು ವಿತರಿಸಲಾಗುತ್ತಿದೆ ಎಂದು ವಿವರಿಸಿದರು.

ಪ್ರತಿ ತಿಂಗಳೂ ಜಿಲ್ಲೆಯಲ್ಲಿ 5492.910 ಮೆಟ್ರಿಕ್ ಟನ್ ಅಕ್ಕಿ ಹಂಚಿಕೆ ಯಾಗುತ್ತಿದ್ದು, ಇದು ಎನ್‌ಎಫ್‌ಎಸ್‌ಎ (ಬಿಪಿಎಲ್, ಅಂತ್ಯೋದಯ) ಪಡಿತರ ಚೀಟಿದಾರರಿಗೆ ಉಚಿತವಾಗಿ ವಿತರಿಸಲಾಗುತ್ತದೆ. ಜಿಲ್ಲೆಯಲ್ಲಿ 20 ಕಲ್ಯಾಣ ಸಂಸ್ಥೆಗಳಲ್ಲಿರುವ 36,000 ಫಲಾನುವಿಗಳಿಗೆ ಪ್ರತಿ ತಿಂಗಳೂ 10 ಕೆ.ಜಿ ಅಕ್ಕಿ ಮತ್ತು 5 ಕೆ.ಜಿ ಗೊೀಧಿಯನ್ನು ಉಚಿತವಾಗಿ ನೀಡಲಾಗುತ್ತಿದೆ. ಇದುವರೆಗೂ ಬಿಪಿಎಲ್ ಪಡಿತರ ಚೀಟಿ ಕೋರಿ 7933 ಅರ್ಜಿಗಳು ಸ್ವೀಕೃತವಾಗಿದ್ದು, 4611 ಅರ್ಜಿಗಳ ವಿಲೇವಾರಿಯಾಗಿವೆ. 3322 ಅರ್ಜಿಗಳು ಬಾಕಿ ಇವೆ. ಎಪಿಎಲ್‌ನಲ್ಲಿ 6155 ಅರ್ಜಿಗಳು ಸ್ವೀಕೃತವಾಗಿದ್ದು, 2509 ವಿಲೇವಾರಿಯಾಗಿದೆ. 3646 ಬಾಕಿ ಇದ್ದು, ಪ್ರಕ್ರಿಯೆ ಪ್ರಗತಿಯಲ್ಲಿದೆ. ಅನಿಲ ಬಾಗ್ಯ ಯೋಜನೆಯಡಿ 1106 ಗುರಿ ನಿಗದಿಪಡಿಸಲಾಗಿದ್ದು, ಶೇ100 ಗುರಿ ಸಾಧಿಸಲಾಗಿದೆ ಎಂದರು

ಜಿಲ್ಲೆಯಲ್ಲಿ ಬಿಪಿಎಲ್‌ನಲ್ಲಿ 1874 ಅನರ್ಹ ಪಡಿತರ ಚೀಟಿಗಳನ್ನು ಗುರುತಿಸಲಾಗಿದ್ದು, ಇವುಗಳನ್ನು ಎಪಿಎಲ್ ಪಡಿತರ ಚೀಟಿಗಳಾಗಿ ಪರಿವರ್ತಿ ಸಲಾಗಿದೆ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರ ಗಳ ಇಲಾಖೆಯ ಜಂಟಿ ನಿರ್ದೇಶಕ ಡಾ.ಮಂಜುನಾಥ್ ತಿಳಿಸಿದರು.

ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್‌ಗಳಿಗೆ ಕಲಬೆರಕೆ ಮಾಡುವ ವ್ಯವಸ್ಥಿತ ಜಾಲ ಸಕ್ರಿಯವಾಗಿದ್ದು, ಜಿಲ್ಲೆಯಲ್ಲಿ ಇಂತಹ ಘಟನೆಗಳು ಕಂಡುಬಂದಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಚಿವರು ಸಭೆಯಲ್ಲಿ ತೂಕ ಮತ್ತು ಮಾಪನ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದಾಗ, ಪ್ರತಿಕ್ರಿಯಿಸಿದ ಅಧಿಕಾರಿಗಳು ಕಲಬೆರಕೆ ತಪಾಸಣೆ ನಡೆಸಲು ಪ್ರತ್ಯೇಕ ಲ್ಯಾಬ್ ಮತ್ತು ಕಿಟ್‌ನ ಅಗತ್ಯವಿದೆ ಎಂದು ಸಚಿವರಿಗೆ ತಿಳಿಸಿದರು. ಪ್ರತಿಕ್ರಿಯಿಸಿದ ಸಚಿವರು ಇಲಾಖೆಗೆ ಅಗತ್ಯ ವಿರುವ ಲ್ಯಾಬ್ ಮತ್ತು ಕಿಟ್ ಒದಗಿಸುವ ಬಗ್ಗೆ ಸರಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗುವುದು ಎಂದರು.

18 ನಿರೀಕ್ಷಕರ ಹುದ್ದೆ ಖಾಲಿ: ಉಡುಪಿಯಲ್ಲಿ 25 ಆಹಾರ ನಿರೀಕ್ಷಕರ ಹುದ್ದೆ ಮಂಜೂರಾಗಿದ್ದು, 7 ಹುದ್ದೆ ಭರ್ತಿ ಮಾಡಲಾಗಿದೆ. 18 ಖಾಲಿ ಇದೆ. 6 ಮಂದಿ ಆಹಾರ ಶಿರಸ್ತೇದಾರರನ್ನು ಕಂದಾಯ ಇಲಾಖೆಯ ವತಿಯಿಂದ ನೇಮಿಸಲಾಗಿದೆ. ಜಿಲ್ಲೆಯ ಎಲ್ಲಾ ಅಂಗಡಿ ಮುಂಗಟ್ಟುಗಳಲ್ಲಿರುವ ತೂಕ/ಮಾಪನ ಸಾಧನಗಳು ಹಾಗೂ ಆಟೋರಿಕ್ಷಾ ಮೀಟರ್‌ಗಳನ್ನು ತಪಾಸಣೆ ನಡೆಸಿ ಉಲ್ಲಂಘನೆ ನಡೆಸಿದ್ದಲ್ಲಿ ದಂಡ ವಿಧಿಸಲಾಗುತ್ತಿದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಕಾಪು ಶಾಸಕ ಲಾಲಾಜಿ ಆರ್ ಮೆಂಡನ್, ಜಿಪಂ ಅಧ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷೆ ಶೀಲಾ ಕೆ ಶೆಟ್ಟಿ, ಜಿಲ್ಲಾಧಿಕಾರಿ ಜಿ.ಜಗದೀಶ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಮಾಪನ ಶಾಸ್ತ್ರ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News