ಜನಗಣತಿಗೆ ನಿಯೋಜನೆಗೊಂಡವರಿಗೆ ತರಬೇತಿ
ಉಡುಪಿ, ಫೆ.29: ಹತ್ತು ವರ್ಷಗಳ ನಂತರ ಕೈಗೊಳ್ಳಲಾಗುತ್ತಿರುವ ಜನಗಣತಿ ಕಾರ್ಯವನ್ನು ಗೊಂದಲಗಳಿಗೆ ಆಸ್ಪದವಿಲ್ಲದಂತೆ ಸಮರ್ಪಕವಾಗಿ ನಿರ್ವಹಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಎಲ್ಲಾ ತಯಾರಿ ಮಾಡಿಕೊಳ್ಳಬೇಕು ಎಂದು ಜಿಲಾ್ಲಧಿಕಾರಿ ಜಿ. ಜಗದೀಶ್ ಸಲಹೆ ನೀಡಿದರು.
ಮಣಿಪಾಲದ ಜಿಪಂನ ಡಾ. ವಿ.ಎಸ್ ಆಚಾರ್ಯ ಸಬಾಂಗಣದಲ್ಲಿ ನಡೆದ 2021 ರ ಜನಗಣತಿ ಕಾರ್ಯಕ್ಕೆ ನಿಯೋಜನೆಗೊಂಡ ಅಧಿಕಾರಿಗಳು, ತಾಂತ್ರಿಕ ಸಹಾಯಕರಿಗೆ ತರಬೇತಿ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.
ಜನಗಣತಿ ಕಾರ್ಯಕ್ಕೆ ನಿಯೋಜಿಸಲ್ಪಟ್ಟ ಅಧಿಕಾರಿಗಳು, ನಿಬಾಯಿಸ ಬೇಕಾದ ಪಾತ್ರಗಳು ಮತ್ತು ಜವಾಬ್ದಾರಿಗಳ ಬಗ್ಗೆ ಸ್ಪಷ್ಟ, ವಿವರವಾದ ತಿಳುವಳಿಕೆ ಹಾಗೂ ಮನೆ ಪಟ್ಟಿ, ವಸತಿ ಗಣತಿ, ಎನ್ಪಿಆರ್ ನವೀಕರಣದ ಪ್ರಕ್ರಿಯೆಗಳು ಮತ್ತು ಸಿಎಂಎಂಎಸ್ ಅಪ್ಲಿಕೇಶನ್ಗಳ ಎಲ್ಲಾ ಭಾಗಗಳನ್ನು ತಿಳಿದುಕೊಳ್ಳಲು ಹಾಗೂ ಗಣತಿ ವೇಳೆ ಎದುರಾಗುವ ಸಮಸ್ಯೆಗಳ ನಿವಾರಣೆಗೆ ತರಬೇತಿ ಕಾರ್ಯಾಗಾರವು ಸಹಕಾರಿಯಾಗಲಿದೆ ಎಂದರು.
ಕಾರ್ಯಾಗಾರದಲ್ಲಿ ಜನಗಣತಿಗೆ ನಿಯೋಜಿಸಿದ ಅಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.