ಪುಷ್ಪರಂಗೋಲಿ ರಚನಾ ಸ್ಪರ್ಧೆ: ಯಶಸ್ವಿ ಸನಿಲ್ ಪ್ರಥಮ
ಉಡುಪಿ, ಮಾ.1: ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಉಡುಪಿ ಜಿಲ್ಲೆ ತೋಟಗಾರಿಕೆ, ಕೃಷಿ ಹಾಗೂ ಕೃಷಿ ಸಂಬಂಧಿತ ಇಲಾಖೆಗಳ ಸಹಯೋಗದಲ್ಲಿ ಉಡುಪಿ ಜಿಲ್ಲಾ ಮಟ್ಟದ ಫಲಪುಷ್ಪಪ್ರದರ್ಶನದ ಅಂಗವಾಗಿ ಸಾರ್ವಜನಿಕರಿಗೆ ಪುಷ್ಪರಂಗೋಲಿ ರಚನಾ ಸ್ಪರ್ಧೆಯನ್ನು ರವಿವಾರ ಏರ್ಪಡಿಸ ಲಾಗಿತ್ತು.
ಉಡುಪಿ ದೊಡ್ಡಣಗುಡ್ಡೆಯ ಶಿವಳ್ಳಿ ಮಾದರಿ ತೋಟಗಾರಿಕಾ ಕ್ಷೇತ್ರದ ರೈತ ಸೇವಾ(ಪುಷ್ಪಹರಾಜು) ಕೇಂದ್ರದ ಆವರಣದಲ್ಲಿ ಹಮ್ಮಿಕೊಳ್ಳಲಾದ ಸ್ಪರ್ಧೆ ಯಲ್ಲಿ ಒಟ್ಟು ಆರು ಮಂದಿ ಸ್ಪರ್ಧಾಳುಗಳು ಭಾಗವಹಿಸಿದ್ದರು. ಇದರಲ್ಲಿ ಸಾರ್ವಜನಿಕರೇ ತೀರ್ಪು ಗಾರರಾಗಿ ಕಾರ್ಯನಿರ್ವಹಿಸಿದರು.
ಉಡುಪಿ ಪುತ್ತೂರಿನ ಯಶಸ್ವಿ ಸನಿಲ್ ಪ್ರಥಮ, ಕರಂಬಳ್ಳಿಯ ಶಾರದಾ ಆಚಾರ್ಯ ದ್ವಿತೀಯ ಹಾಗೂ ಕರಂಬಳ್ಳಿಯ ಧನುಶ್ರೀ ಆಚಾರ್ಯ ತೃತೀಯ ಬಹುಮಾನ ವನ್ನು ಪಡೆದುಕೊಂಡರು. ವಿಜೇತರಿಗೆ ಇದೇ ಸಂದರ್ಭದಲ್ಲಿ ಬಹುಮಾನವನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ತೋಟಗಾರಿಕಾ ಇಲಾಖೆಯ ಉಪನಿರ್ದೇಶಕಿ ಭುವನೇಶ್ವರಿ, ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ನಿಧೀಶ್ ಮೊದಲಾದವರು ಉಪಸ್ಥಿತರಿದ್ದರು.
ಮುಂದುವರೆದ ಪ್ರದರ್ಶನ: ಫಲಪುಷ್ಪಾ ಪ್ರದರ್ಶನದ ಎರಡನೆ ದಿನವಾದ ಇಂದು ಕೂಡ ಸಹಸ್ರಾರು ಸಂಖ್ಯೆಯ ಜನ ಆಗಮಿಸಿ, ವರ್ಣರಂಜಿತ ಹಾಗೂ ಚಿತ್ತಾಕರ್ಷಕ ಪುಷ್ಪಗಳ ಕಲಾಕೃತಿಗಳನ್ನು ವೀಕ್ಷಿಸಿದರು.
ರಜಾ ದಿನದ ಹಿನ್ನೆಲೆಯಲ್ಲಿ ಬೆಳಗ್ಗೆಯಿಂದ ಸಂಜೆಯವರೆಗೆ ಸುಮಾರು 5000 ಮಂದಿ ಸಾರ್ವಜನಿಕರು ಈ ಪ್ರದರ್ಶನವನ್ನು ಸಂದರ್ಶಿಸಿದ್ದು, ಶಾಲಾಕಾಲೇಜು ಗಳ ವಿದ್ಯಾರ್ಥಿಗಳು ಮತ್ತು ಯುವ ಸಮುದಾಯ ಹೂವುಗಳ ಎದುರು ನಿಂತು ಸೆಲ್ಫಿ ಕ್ಲಿಕ್ಕಿಸಿಕೊಂಡರು.
ಅದೇ ರೀತಿ ವಿವಿಧ ಇಲಾಖೆಗಳ ಮಳಿಗೆಗಳಲ್ಲಿ ಸಾರ್ವಜನಿಕರು ಸರಕಾರದ ವಿವಿಧ ಯೋಜನೆಗಳ ಕುರಿತು ಮಾಹಿತಿ ಪಡೆದು ಕೊಂಡರು. ತೋಟಗಾರಿಕೆ ಇಲಾಖೆಯ ಕ್ಷೇತ್ರ ಮತ್ತು ಸಸ್ಯಾಗಾರಗಳಲ್ಲಿ ಬೆಳೆಸಿರುವ ವಿವಿಧ ಕಸಿ/ಸಸಿಗಳ ಮಾರಾಟಕ್ಕೆ ಉತ್ತಮ ಸ್ಪಂದನೆ ದೊರೆತಿದೆ. ಅಲ್ಲದೆ ರೈತ ಸೇವಾ ಕೇಂದ್ರದ ಆವರಣದಲ್ಲಿ ಇರುವ ಮಾದರಿ ಮಲ್ಲಿಗೆ ತೋಟ, ತರಕಾರಿ ತೋಟವನ್ನು ಕೂಡ ಸಾರ್ವಜನಿಕರು ವೀಕ್ಷಿಸಿದರು.