ಪಾಕಿಸ್ತಾನ್ ಝಿಂದಾಬಾದ್ ಘೋಷಣೆ: ಕುಂದಾಪುರದ ರಾಘವೇಂದ್ರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲು

Update: 2020-03-02 10:53 GMT

ಉಡುಪಿ, ಮಾ.2: ಕುಂದಾಪುರ ಮಿನಿ ವಿಧಾನಸೌಧದ ಒಳಗೆ ಇಂದು ಬೆಳಗ್ಗೆ ಪಾಕಿಸ್ತಾನ್ ಝಿಂದಾಬಾದ್ ಘೋಷಣೆ ಕೂಗಿದ ಆರೋಪದಡಿ ಬಂಧಿತನಾಗಿರುವ ಕೋಡಿಯ ರಾಘವೇಂದ್ರ ಗಾಣಿಗ(43) ವಿರುದ್ಧ ಕುಂದಾಪುರ ಪೊಲೀಸರು ದೇಶದ್ರೋಹ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪಾಕಿಸ್ತಾನ್ ಝಿಂದಾಬಾದ್ ಘೋಷಣೆ ಕೂಗಿದ್ದ ರಾಘವೇಂದ್ರನ ವಿರುದ್ಧ ಕುಂದಾಪುರ ತಹಶಿಲ್ದಾರ್ ಕುಂದಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅದರಂತೆ ಸ್ಥಳಕ್ಕೆ ಬಂದ ಪೊಲೀಸರು ರಾಘವೇಂದ್ರ ಗಾಣಿಗನನ್ನು ಬಂಧಿಸಿದರು.

ಈ ಬಗ್ಗೆ ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರಚಂದ್ರ ಮಾತನಾಡಿ, ರಾಘವೇಂದ್ರ ಗಾಣಿಗ ವಿರುದ್ಧ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿ, ಆತನ ವಿರುದ್ಧ ದೇಶದ್ರೋಹದ ಕೇಸು ಹಾಕಲಾಗಿದೆ. ಘಟನೆ ಬಗ್ಗೆ ಇನ್ನೂ ತನಿಖೆ ಮಾಡಬೇಕು. ರಾಘವೇಂದ್ರನ ಮಾತಿನಲ್ಲಿ ಸ್ಥಿರತೆ ಇಲ್ಲ. ಆತನ ಹಿನ್ನೆಲೆ ಬಗ್ಗೆ ಪರಾಮರ್ಶೆ ನಡೆಸಲಾಗುತ್ತದೆ. ಆತನ ಮಾನಸಿಕ ಸ್ಥಿತಿ ಬಗ್ಗೆ ನಾವೇನು ಹೇಳಲು ಆಗುವುದಿಲ್ಲ. ವೈದ್ಯಕೀಯ ವರದಿ ಬಂದ ಮೇಲೆ ಹೇಳಲಾಗುವುದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News