ಆರೋಗ್ಯ ಸಮಸ್ಯೆಗಳಿಗೆ ಜೀವನ ಶೈಲಿ ಮೂಲ ಕಾರಣ: ಡಾ. ವಾಹೀದಾ ಬಾನು
ಮಂಗಳೂರು, ಮಾ. 4: ತಪ್ಪು ಮಾಡಿದ್ದನ್ನು ಒಪ್ಪಿಕೊಂಡು ಬಾಳುವುದೇ ಜೀವನ. ಹಾಗಿರುವಾಗ ನಮ್ಮ ಜೀವನದಲ್ಲಿ ನಡೆಯುವ ತಪ್ಪುಗಳಿಗೆ ಜೀವನ ಪೂರ್ತಿ ಕೊರಗುವುದಕ್ಕಿಂತ ಅದನ್ನು ಒಪ್ಪಿಕೊಳ್ಳುವ ಗುಣವನ್ನು ಬೆಳೆಸಿಕೊಳ್ಳಬೇಕು, ಎಂದು ಮಂಗಳೂರಿನ ಕರ್ನಾಟಕ ಆಯುರ್ವೇದ ವೈದ್ಯಕೀಯ ಕಾಲೇಜಿನ ಕಾಯ ಚಿಕಿತ್ಸಾ ವಿಭಾಗದ ಮುಖ್ಯಸ್ಥರಾದ ಡಾ ವಹೀದಾ ಬಾನು ತಿಳಿಸಿದರು.
ಇವರು ಕಾಟಿಪಳ್ಳದ ಮಿಸ್ಬಾ ಮಹಿಳಾ ಕಾಲೇಜಿನ ರೆಡ್ ಕ್ರಾಸ್ ಕ್ಲಬ್ ನಿಂದ ನಡೆಸಿದ 'ಆರೋಗ್ಯ ಹಾಗು ಕ್ಷೇಮ' ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು.
'ನಮ್ಮಲ್ಲೆ ಕಾಡುವ ಹಲವಾರು ಆರೋಗ್ಯ ಸಮಸ್ಯೆಗಳಿಗೆ ನಮ್ಮ ಜೀವನಶೈಲಿಯೇ ಮೂಲ ಕಾರಣ. ಅದರಲ್ಲೂ ಅತಿಯಾದ ಮೊಬೈಲ್ ಬಳಕೆ ಇದು ವಿದ್ಯಾರ್ಥಿಗಳ ಜೀವನದಲ್ಲಿ ಅವರ ಅಮೂಲ್ಯ ಕ್ಷಣಗಳನ್ನು ನಾಶ ಮಾಡಿಸುತ್ತಿದೆ. ಇದು ಮಾನಸಿಕ ಒತ್ತಡಕ್ಕೆ ಮೂಲ ಕಾರಣವಾಗಿದೆ, ಇದರ ಬಗ್ಗೆ ಹೆತ್ತವರು ಗಮನಹರಿಸುವುದು ಬಹಳ ಅಗತ್ಯವಿದೆ ಎಂದರು.
ನಿಮ್ಮ ಜೀವನದಲ್ಲಿ ಹಿಂದೆ ನಡೆದ ನೋವುಗಳನ್ನು ಭವಿಷ್ಯದಲ್ಲಿ ಪಾಠವನ್ನಾಗಿ ಅಳವಡಿಸಿಕೊಳ್ಳಿ. ಯಾವತ್ತೂ ಬೇರೆಯವರ ಯಶಸ್ಸಿನ ಕಥೆಗಳನ್ನು ಓದುವುದಕ್ಕಿಂತ ನೋವಿನ ಕಥೆಗಳನ್ನು ಕೂಡ ಓದಿ. ಆಗ ಜೀವನ ಏನು ಎಂಬುದು ಅರ್ಥವಾಗುತ್ತದೆ, ಎಂದರು.
ಕಾರ್ಯಕ್ರಮದಲ್ಲಿ, ಪ್ರಾಂಶುಪಾಲರಾದ ಝಾಹಿದಾ ಜಲೀಲ್ ಹಾಗೂ ಉಪನ್ಯಾಸಕರು ಉಪಸ್ಥಿತರಿದ್ದರು. ಉಪಪ್ರಾಂಶುಪಾಲರಾದ ಸನಾ ಹುಸೈನ್ ಕಾರ್ಯಕ್ರಮ ನಿರೂಪಿಸಿದರು.