ಯೆಸ್ ಬ್ಯಾಂಕ್ ಬಿಕ್ಕಟ್ಟಿಗೆ ಮುನ್ನ 1,300 ಕೋಟಿ ರೂ. ಹಿಂದೆ ಪಡೆದಿದ್ದ ತಿರುಪತಿ ದೇವಸ್ಥಾನ
ತಿರುಪತಿ: ಅತ್ಯಂತ ಶ್ರೀಮಂತ ದೇವಸ್ಥಾನ ಎನಿಸಿದ ತಿರುಪತಿ ತಿರುಮಲ ದೇವಸ್ಥಾನ ಕಳೆದ ವರ್ಷದ ಕೊನೆಗೆ ಯೆಸ್ ಬ್ಯಾಂಕ್ನಿಂದ 1,300 ಕೋಟಿ ರೂ. ವಾಪಾಸು ಪಡೆದಿದೆ.
ತಿರುಮಲ ದೇವಸ್ಥಾನವನ್ನು ನಿರ್ವಹಿಸುವ ತಿರುಪತಿ ತಿರುಮಲ ದೇವಸ್ಥಾನಮ್ (ಟಿಟಿಡಿ) ಟ್ರಸ್ಟ್ ಈ ಬಗ್ಗೆ ಸ್ಪಷ್ಟನೆ ನೀಡಿ, ಕಳೆದ ಅಕ್ಟೋಬರ್ನಲ್ಲಿ ಹಣ ವಾಪಾಸು ಪಡೆದಿದ್ದು, ಈಗ ಉದ್ಭವಿಸಿರುವ ಯೆಸ್ ಬ್ಯಾಂಕ್ ಬಿಕ್ಕಟ್ಟಿಗೂ ಹಣ ವಾಪಾಸು ಪಡೆದಿದ್ದಕ್ಕೂ ಯಾವ ಸಂಬಂಧ ಇಲ್ಲ ಎಂದು ಹೇಳಿದೆ.
ಎ. 3ರವರೆಗೆ ಯೆಸ್ ಬ್ಯಾಂಕ್ನಿಂದ ಹಣ ಪಡೆಯದಂತೆ ಆರ್ಬಿಐ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಲಕ್ಷಾಂತರ ಗ್ರಾಹಕರು ಇಕ್ಕಟ್ಟಿಗ ಸಿಲುಕಿದ್ದಾರೆ. ಯೆಸ್ ಬ್ಯಾಂಕ್ನಲ್ಲಿ ಇರಿಸಿದ್ದ ಠೇವಣಿ ಪರಿಪಕ್ವವಾದ ಹಿನ್ನೆಲೆಯಲ್ಲಿ ಮೊತ್ತ ವಾಪಾಸು ಪಡೆಯಲಾಗಿದೆ ಎಂದು ಅಧಿಕೃತ ವಕ್ತಾರರು ಹೇಳಿದ್ದಾರೆ.
ಆಡಳಿತ ಮಂಡಳಿಯ ಆದೇಶದ ಮೇರೆಗೆ ಠೇವಣಿ ಹಣ ವಾಪಾಸು ಪಡೆಯಲಾಗಿದೆ. ಠೇವಣಿಯನ್ನು ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿ ಇಡಬೇಕು ಎಂದು ನವೆಂಬರ್ನಲ್ಲಿ ಟ್ರಸ್ಟ್ ನಿರ್ಣಯ ಕೈಗೊಂಡಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಟಿಟಿಡಿ ಕಳೆದ ವರ್ಷ ವಿವಿಧ ಬ್ಯಾಂಕ್ಗಳಲ್ಲಿ 12 ಸಾವಿರ ಕೋಟಿ ರೂ. ಠೇವಣಿ ಇರಿಸಿತ್ತು. 2020-21ರಲ್ಲಿ 706 ಕೋಟಿ ರೂ. ಬಡ್ಡಿ ಆದಾಯ ನಿರೀಕ್ಷಿಸಲಾಗಿದೆ.