ಅಕ್ರಮ ಪಡಿತರ ಚೀಟಿ ಹಿಂತಿರುಗಿಸಲು ಅವಕಾಶ
ಮಂಗಳೂರು, ಮಾ.9: ದ.ಕ. ಜಿಲ್ಲಾದ್ಯಂತ ಎಲ್ಲಾ ಆದ್ಯತಾ (ಬಿಪಿಎಲ್) ಪಡಿತರ ಚೀಟಿ ಹೊಂದಿರುವವರು ಕೆಲವು ಮಾನದಂಡಗಳನ್ನು ಅನುಸರಿಸಬೇಕಿದೆ. ಅದರಂತೆ ಸರಕಾರಿ ನೌಕರು/ವೇತನವನ್ನು ಗಣನೆಗೆ ತೆಗೆದುಕೊಳ್ಳದೆ ಎಲ್ಲಾ ಖಾಸಗಿ ನೌಕರರು/ಸರಕಾರಿ ಅನುದಾನಿತ ನೌಕರರು/ನಿಗಮಗಳು/ಮಂಡಳಿಗಳು/ಸರಕಾರಿ ಸ್ವಾಮ್ಯದ ಸಂಸ್ಥೆಗಳು ಇತ್ಯಾದಿ ಒಳಗೊಂಡಂತೆ ಆದಾಯ ತೆರಿಗೆ/ಸೇವಾ ತೆರಿಗೆ/ವ್ಯಾಟ್/ವೃತ್ತಿ ತೆರಿಗೆ ಪಾವತಿಸುವ ಕುಟುಂಬಗಳು, ಗ್ರಾಮೀಣ ಪ್ರದೇಶದಲ್ಲಿ 3 ಹೆಕ್ಟೇರ್ ಒಣಭೂಮಿ ಅಥವಾ ತತ್ಸಮಾನ ನೀರಾವರಿ ಭೂಮಿ ಹೊಂದಿರುವ ಕುಟುಂಬಗಳು, ನಗರ ಪ್ರದೇಶದಲ್ಲಿ 1000 ಚದರ ಅಡಿಗಿಂತಲೂ ಹೆಚ್ಚಿನ ವಿಸ್ತೀರ್ಣದ ಪಕ್ಕಾ ಮನೆಯನ್ನು ಸ್ವಂತವಾಗಿ ಹೊಂದಿರುವ ಕುಟುಂಬಗಳು, ಜೀವನೋಪಯಕ್ಕಾಗಿ ಸ್ವತಃ ಓಡಿಸುವ ಒಂದು ವಾಣಿಜ್ಯ ವಾಹನವನ್ನು ಅಂದರೆ ಟ್ರಾಕ್ಟರ್, ಮ್ಯಾಕ್ಸಿಕ್ಯಾಬ್,ಟ್ಯಾಕ್ಸಿ ಇತ್ಯಾದಿಗಳನ್ನು ಹೊಂದಿರುವ ಕುಟುಂಬಗಳು, ಕುಟುಂಬದ ವಾರ್ಷಿಕ ಆದಾಯವು 1.20 ಲಕ್ಷಗಳಿಗಿಂತಲೂ ಹೆಚ್ಚಿರುವ ಕುಟುಂಬಗಳು, ಒಂದೇ ಕುಟುಂಬದಲ್ಲಿದ್ದರೂ/ಒಟ್ಟಿಗೆ ವಾಸಿಸುತ್ತಿದ್ದರೂ ಪ್ರತ್ಯೇಕ ಪಡಿತರ ಚೀಟಿ ಹೊಂದಿರುವವರು ಬಿಪಿಎಲ್ ಪಡಿತರ ಚೀಟಿ ಹೊಂದಲು ಅರ್ಹರಿರು ವುದಿಲ್ಲ. ಹಾಗಾಗಿ ಇಂತಹವರು 2020ರ ಎಪ್ರಿಲ್ನೊಳಗೆ ಮರಳಿಸಲು ಸರಕಾರ ಮತ್ತೊಂದು ಅವಕಾಶ ನೀಡಿದೆ ಎಂದು ದ.ಕ. ಜಿಲ್ಲಾಧಿಕಾರಿಯ ಪ್ರಕಟನೆ ತಿಳಿಸಿದೆ.
ಅನರ್ಹರು ನಿಗದಿತ ದಿನಾಂಕದೊಳಗೆ ತಾವು ಹೊಂದಿರುವ ಬಿಪಿಎಲ್ ವರ್ಗದ ಪಡಿತರ ಚೀಟಿಗಳನ್ನು ತಾಲೂಕು ಕಚೇರಿಯಲ್ಲಿರುವ ಆಹಾರ ಶಿರಸ್ತೆದಾರ್/ಆಹಾರ ನಿರೀಕ್ಷಕರುಗಳನ್ನು ಸಂಪರ್ಕಿಸಿ ತಾವು ಹೊಂದಿರುವ ಬಿಪಿಎಲ್ ವರ್ಗದ ಪಡಿತರ ಚೀಟಿಗಳನ್ನು ಎಪಿಎಲ್ಗೆ ಬದಲಾವಣೆ ಅಥವಾ ರದ್ದುಪಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ತಾವೇ ಸ್ವತಃ ಪಡಿತರ ಚೀಟಿಗಳನ್ನು ಹಿಂತಿರುಗಿಸಿದವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಾಗುವುದಿಲ್ಲ.
ಅವಧಿ ಮುಗಿದ ನಂತರ ಇಲಾಖೆಯ ಕಾರ್ಯಾಚರಣೆ ನಡೆಸಿ ಅನರ್ಹರು ಹೊಂದಿರುವ ಬಿಪಿಎಲ್ ವರ್ಗದ ಪಡಿತರ ಚೀಡಿಗಳನ್ನು ಹೊಂದಿದ ದಿನಾಂಕದಿಂದ ಪತ್ತೆ ಹಚ್ಚಿದ ದಿನಾಂಕದವರೆಗೆ ತಾವು ಪಡೆದ ಪಡಿತರ ಪದಾರ್ಥಗಳವಾರು ಪ್ರತಿ ಕೆ.ಜಿ.ಗೆ ಮುಕ್ತ ಮಾರುಕಟ್ಟೆಯ ಬೆಲೆಯ ಅನುಸಾರ ಹಣವನ್ನು ದಂಡವನ್ನಾಗಿ ವಸೂಲಿ ಮಾಡಲಾಗುವುದು. ಜೊತೆಗೆ ದಿ ಕರ್ನಾಟಕ ಪ್ರಿವೆನ್ಷನ್ ಆಫ್ ಅನ್ ಅಥರೈಜ್ಡ್ ಪೊಸಿಷಿನ್ ಆಫ್ ರೇಷನ್ ಕಾಡ್ ಆರ್ಡರ್ 1977ರ ಅನ್ವಯ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುತ್ತದೆ ಎಂದು ಡಿಸಿ ಎಚ್ಚರಿಸಿದ್ದಾರೆ.