ಮಾ. 24ರಂದು ಬೆಳ್ತಂಗಡಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ

Update: 2020-03-11 14:53 GMT

ಬೆಳ್ತಂಗಡಿ: ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಬೆಳ್ತಂಗಡಿ ತಾಲೂಕು ಘಟಕದ ವತಿಯಿಂದ 17ನೆಯ ಕನ್ನಡ ಸಾಹಿತ್ಯ ಸಮ್ಮೇಳನವು ಮಾ.24ದಂದು ಬೆಳ್ತಂಗಡಿ ತಾಲೂಕಿನ ಹೊಸಂಗಡಿ ಗ್ರಾಮದ  ಪರಿಂಜೆಯ ಪಡ್ಯಾರಬೆಟ್ಟ ಸಂತೃಪ್ತಿ ಸಭಾಭವನದಲ್ಲಿ ನಡೆಯಲಿದೆ.

ಸಮ್ಮೇಳನದ ಸರ್ವಾಧ್ಯಕ್ಷತೆಯನ್ನು ಜಿ.ರಾಮನಾಥ್ ಭಟ್ ವಹಿಸಲಿದ್ದಾರೆ. ಸಮಾರೋಪ ಸಮಾರಂಭದಲ್ಲಿ 12ಮಂದಿ ಸಾಧಕರಿಗೆ ಸನ್ಮಾನ ಹಾಗೂ ಇಬ್ಬರು ಉದಯೋನ್ಮುಖ ಪ್ರತಿಭೆಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಗುವುದು ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಬಿ ಯಶೋವರ್ಮ ತಿಳಿಸಿದ್ದಾರೆ.

ಹೊಸಂಗಡಿ ಗ್ರಾ.ಪಂ. ಅಧ್ಯಕ್ಷೆ ಹೇಮಾವಸಂತ್ ಅವರು ಬೆಳಗ್ಗೆ 9.15ಕ್ಕೆ ರಾಷ್ಟ್ರಧ್ವಜಾರೋಹಣ ಗೈಯುವರು. ದ.ಕ. ಜಿಲ್ಲೆ ಕ.ಸಾ.ಪ. ಅಧ್ಯಕ್ಷ ಎಸ್ ಪ್ರದೀಪ ಕುಮಾರ ಕಲ್ಕೂರ ಪರಿಷತ್ತು ಧ್ವಜ ಹಾಗೂ ಕ.ಸಾ.ಪ.ಬೆಳ್ತಂಗಡಿ ತಾಲೂಕು ಘಟಕದ ಅಧ್ಯಕ್ಷ ಡಾ.ಬಿ.ಯಶೋವರ್ಮ ಸಮ್ಮೇಳನ ಧ್ವಜಾರೋಹಣ ಗೈಯುವರು. ಉದ್ಘಾಟನಾ ಸಮಾರಂಭ 9.30ಕ್ಕೆ ಸರಿಯಾಗಿ ಪ್ರಾರಂಭಗೊಂಡು 11.30ರೊಳಗೆ ಮುಕ್ತಾಯಗೊಳ್ಳಲಿದೆ. 

 ಸಮ್ಮೇಳನಾಧ್ಯಕ್ಷ ಜಿ ರಾಮನಾಥ ಭಟ್, ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಹಿರಿಯ ಸಾಹಿತಿ ಪ.ರಾಮಕೃಷ್ಣ ಶಾಸ್ತ್ರಿ ಮಚ್ಚಿನ ಹಾಗೂ  ಸಮ್ಮೇಳನ ಸಂಯೋಜನಾ ಸಮಿತಿಯ ಎ.ಜೀವಂಧರ ಕುಮಾರ ಪಡ್ಯೋಡಿಗುತ್ತು  ಉಪಸ್ಥಿತಿಯಲ್ಲಿ  ಶ್ರೀಕ್ಷೇತ್ರ ಧರ್ಮಸ್ಥಳದ ಹೇಮಾವತಿ ವೀ.ಹೆಗ್ಗಡೆ ಯವರು ಉದ್ಘಾಟಿಸಲಿದ್ದಾರೆ.  ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಶಾಸಕ ಹರೀಶ್ ಪೂಂಜ `ಚಾರುಮುಡಿ' ಸ್ಮರಣ  ಸಂಚಿಕೆಯನ್ನು ಬಿಡುಗಡೆ ಮಾಡಲಿದ್ದಾರೆ. ಬೆಳ್ತಂಗಡಿ ತಾಲೂಕು ಪಂಚಾಯತ್ ಅಧ್ಯಕ್ಷೆ ದಿವ್ಯಜ್ಯೋತಿ ಹಾಗೂ ಹೊಸಂಗಡಿ ತಾಲೂಕು ಪಂಚಾಯತ್ ಸದಸ್ಯ ಓಬಯ್ಯ ಮುಖ್ಯ ಅಭ್ಯಾಗತರಾಗಿ ಭಾಗವಹಿಸಲಿದ್ದಾರೆ.

ಸಮ್ಮೇಳನ ಸಂಯೋಜನಾ ಸಮಿತಿಯ ಕಾರ್ಯಾಧ್ಯಕ್ಷ ಪಿ.ಧರಣೀಂದ್ರ ಕುಮಾರ್ ಸ್ವಾಗತಿಸಲಿದ್ದು, ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಅವರು ಕಾರ್ಯಕ್ರಮದ ಆಶಯ ನುಡಿ ನುಡಿಯಲಿದ್ದಾರೆ.  ಬೆಳ್ತಂಗಡಿ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ.ಬಿ.ಯಶೋವರ್ಮ ಪ್ರಾಸ್ತಾವಿಕ ಮಾತುಗಳನ್ನಾಡುವರು.

ಸನ್ಮಾನ ಮತ್ತು ಸಮಾರೋಪ ಸಮಾರಂಭ

ದ.ಕ.ಜಿಲ್ಲೆ ಕ.ಸಾ.ಪ. ಅಧ್ಯಕ್ಷ ಎಸ್ ಪ್ರದೀಪ ಕುಮಾರ ಕಲ್ಕೂರ  ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದು, ಕರ್ನಾಟಕ ವಿಧಾನ ಪರಿಷತ್ ಶಾಸಕ ಕೆ.ಹರೀಶ್ ಕುಮಾರ್ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ(ರಿ) ಅಧ್ಯಕ್ಷ ಡಾ. ಎಂ ಮೋಹನ ಆಳ್ವ ಅವರು ಸನ್ಮಾನಿತರನ್ನು ಗೌರವಿಸಲಿದ್ದಾರೆ.

ಕಾಂತಾವರ ಕನ್ನಡ ಸಂಘ ಅಧ್ಯಕ್ಷ ಡಾ.ನಾ.ಮೊಗಸಾಲೆ ಸಮಾರೋಪ ಭಾಷಣ ಮಾಡಲಿದ್ದು, ಜಿ.ರಾಮನಾಥ ಭಟ್ ಸಮ್ಮೇಳನಾಧ್ಯಕ್ಷರ ನುಡಿ ನುಡಿಯುವರು. ಸಮ್ಮೇಳನ ಸಂಯೋಜನಾ ಸಮಿತಿ ಅಧ್ಯಕ್ಷ ಹಾಗೂ ಪರಿಂಜೆ ಗುತ್ತು ಪಿ.ಜಯರಾಮ ಕಂಬಳಿ ಸ್ವಾಗತಿಸಲಿದ್ದಾರೆ. 

ಸನ್ಮಾನಿತರು : ಪತ್ರಿಕೋದ್ಯಮ-  ದೇವಿಪ್ರಸಾದ್, ಜೈಕನ್ನಡಮ್ಮ ವಾರಪತ್ರಿಕೆ, ವೈದ್ಯಕೀಯ- ಬೆದ್ರಡ್ಕ ಡಾ.ರಾಮಕೃಷ್ಣ ಭಟ್, ಸಮಾಜಸೇವೆ-ಬಿ.ರಾಮಚಂದ್ರ ಶೆಟ್ಟಿ, ಶಿಕ್ಷಣ-ಬಜಿರೆ ಮುಖ್ಯ ಶಿಕ್ಷಕಿ ಎಂ.ಕಮಲಾಜಿ ಎಸ್ ಜೈನ್, ಯಕ್ಷಗಾನ-ನಿಡ್ಲೆ ಗೋವಿಂದ ಭಟ್, ಸಾಮಾಜಿಕ ಜಾಗೃತಿ-ತೋಟತ್ತಾಡಿ ಡಿ.ಎ.ರಹಿಮಾನ್, ಕಂಬಳ-ಅಳದಂಗಡಿ ರವಿ, ಜಾನಪದ-ಮರೋಡಿ ದೇವು, ಉದ್ಯಮ-ಪೆರಿಂಜೆ ಮದಕುಡೆ ಕೊರಗಪ್ಪ ಶೆಟ್ಟಿ, ಹೈನುಗಾರಿಕೆ-ಪೆರಿಂಜೆ ಜೆರೋಮಿ ಎಸ್.ಮೊರಾಸ್, ಕೃಷಿ-ಬಳಂಜ ಅನಿಲ್, ಸೇವೆ-ಉಜಿರೆ ಬದುಕು ಕಟ್ಟೋಣ ಬನ್ನಿ ಸಂಘಟನೆ, ಪ್ರತಿಭಾ ಪುರಸ್ಕಾರ-ಪೆರಿಂಜೆ ಪ್ರವೀಣ್ ಜೈನ್ ಹಾಗೂ ಗುಂಡೂರಿ ದಿವ್ಯ ಅಂಚನ್. ಅವರನ್ನು ಸನ್ಮಾನಿಸಲಾಗುವುದು ಎಂದು ತಿಳಿಸಿದರು.

ಪತ್ರಿಕಾಗೋಷ್ಟಿಯಲ್ಲಿ ಗೋಷ್ಠಿಯಲ್ಲಿ ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಡಾ.ಎಂ.ಪಿ.ಶ್ರೀನಾಥ್, ಸಮ್ಮೇಳನ ಸಂಯೋಜನ ಸಮಿತಿ ಕಾರ್ಯಾಧ್ಯಕ್ಷ ಪಿ.ದರಣೇಂದ್ರ ಕುಮಾರ್, ಅಧ್ಯಕ್ಷ ಪಿ.ಜಯರಾಜ್ ಕಂಬಳಿ, ಪ್ರ.ಕಾರ್ಯದರ್ಶಿ ವಿದ್ಯಾನಂದ ಜೈನ್, ಕೋಶಾಧಿಕಾರಿ ಎಚ್.ಆಲಿಯಬ್ಬ, ಪ್ರ.ಸಂಚಾಲಕ ಇಸ್ಮಾಯಿಲ್ ಕೆ., ಉಪಾಧ್ಯಕ್ಷೆ ಹೇಮಾವಸಂತ್, ಪ್ರಚಾರ ಸಮಿತಿಯ ಹರೀಶ್ ಆದೂರು, ಹೊಸಂಗಡಿ ಗ್ರಾಪಂ ಕಾರ್ಯದರ್ಶಿ ಜಯಲಕ್ಷ್ಮೀ, ಸೋಮಶೇಖರ ಶೆಟ್ಟಿ, ಜಿನೇಶ್ಚಂದ್ರ ಬಲ್ಲಾಳ್ ಇದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News