×
Ad

13 ಕಳವು ಪ್ರಕರಣಗಳನ್ನು ಭೇದಿಸಿದ ಉಪ್ಪಿನಂಗಡಿ ಪೊಲೀಸರು: ಆರೋಪಿಯ ಸೆರೆ

Update: 2020-03-13 14:39 IST

ಉಪ್ಪಿನಂಗಡಿ, ಮಾ.13: ಶಂಕದಾಸ್ಪದವಾಗಿ ತಿರುಗಾಡುತ್ತಿದ್ದ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದ ಉಪ್ಪಿನಂಗಡಿ ಪೊಲೀಸರು ಪುತ್ತೂರು, ಉಪ್ಪಿನಂಗಡಿ ಹಾಗೂ ಬಂಟ್ವಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ 13 ಕಳ್ಳತನ ಪ್ರಕರಣಗಳನ್ನು ಬೇಧಿಸಿದ್ದಾರೆ. ಆರೋಪಿಯಿಂದ 18 ಲಕ್ಷ ರೂ. ಮೊತ್ತದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಮೂಲತಃ ಚಿಕಮಗಳೂರು ಜಿಲ್ಲೆಯ ಶಂಕರಪುರ 3ನೇ ಕ್ರಾಸ್ ನಿವಾಸಿ, ಪ್ರಸಕ್ತ ಮಾಣಿ ಗ್ರಾಮದ ಅಳಿರಾ ಎಂಬಲ್ಲಿ ವಾಸ್ತವ್ಯವಿದ್ದ ಶೌಕತ್ ಅಲಿ (56) ಬಂಧಿತ ಆರೋಪಿ. ಮಾ.5ರಂದು ರಾತ್ರಿ ಶಂಕದಾಸ್ಪದವಾಗಿ ತಿರುಗಾಡುತ್ತಿದ್ದ ಈತನನ್ನು ಉಪ್ಪಿನಂಗಡಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಕಳವು ಕೃತ್ಯಗಳು ಬೆಳಕಿಗೆ ಬಂದಿದೆ.

ಮಾ.6ರಂದು ಈತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಪೊಲೀಸರು, ವಾಪಸ್ ಈತನನ್ನು ಕಸ್ಟಡಿಗೆ ತೆಗೆದುಕೊಂಡು ಹೆಚ್ಚಿನ ವಿಚಾರಣೆ ನಡೆಸಿದ್ದು, ಆ ಸಂದರ್ಭ ಒಂದೊಂದೇ ಪ್ರಕರಣಗಳು ಬಯಲಾಯಿತು. 2017ರ ಬಳಿಕ ಉಪ್ಪಿನಂಗಡಿ ವ್ಯಾಪ್ತಿಯಲ್ಲಿ ನಡೆದ ಹೆಚ್ಚಿನ ಮನೆಕಳವು ಪ್ರಕರಣಗಳಲ್ಲಿ ಈತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.

ಈತನಿಂದ ವಿವಿಧೆಡೆಯಿಂದ ಕಳವುಗೈದ ಒಟ್ಟು 18 ಪವನ್ ಚಿನ್ನಾಭರಣಗಳನ್ನು ವಶಕ್ಕೆ ಪಡೆಯಲಾಗಿದೆ.

ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಾರ್ಗದರ್ಶನದಲ್ಲಿ ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕ ಈರಯ್ಯ ಡಿ.ಎನ್., ಕ್ರೈಂ ಎಸ್ಸೈ ಭರತ್, ಎಎಸ್ಸೈ ಚೋಮ, ಹೆಡ್ ಕಾನ್‌ಸ್ಟೇಬಲ್‌ಗಳಾದ ದೇವದಾಸ್, ಶೇಖರ್, ಕಾನ್‌ಸ್ಟೇಬಲ್‌ಗಳಾದ ಇರ್ಷಾದ್, ಪುತ್ತೂರು ಗ್ರಾಮಾಂತರ ಠಾಣಾ ಹೆಡ್‌ಕಾನ್‌ಸ್ಟೇಬಲ್ ಅದ್ರಾಮ ಪುಣಚ, ಧರ್ನಪ್ಪ, ವಿನಯಕುಮಾರ್ ಏನೇಕಲ್, ಪುತ್ತೂರು ಗ್ರಾಮಾಂತರ ವೃತ್ತ ಕಚೇರಿಯ ಎೆಚ್.ಸಿ. ಅಬ್ದುಲ್ ಸಲೀಂ, ಶಿವರಾಮ, ಜಗದೀಶ್, ವಾಹನ ಚಾಲಕ ನವಾಝ್ ಬುಡ್ಕಿ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News