ಟ್ರೀಪಾರ್ಕ್ ಪ್ರವೇಶ ಶುಲ್ಕ ಪರಿಷ್ಕರಣೆ: ಡಾ.ಕರಿಕಾಲನ್
ಮಂಗಳೂರು, ಮಾ.13: ನಗರದ ತಣ್ಣೀರುಬಾವಿಯ ಟ್ರೀಪಾರ್ಕ್ನ ನಿರ್ವಹಣೆಗಾಗಿ ಸರಕಾರದಿಂದ ಅನುದಾನ ಬಾರದೇ ಇರುವುದರಿಂದ ಟ್ರೀಪಾರ್ಕ್ನ ಪ್ರವೇಶ ಶುಲ್ಕವನ್ನು ಪರಿಷ್ಕರಿಸಲಾಗುವುದು ಎಂದು ಮಂಗಳೂರು ವಿಭಾಗ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಕರಿಕಾಲನ್ ತಿಳಿಸಿದ್ದಾರೆ.
ಮಂಗಳೂರು ಉಪ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ತಣ್ಣೀರುಬಾವಿ ಟ್ರೀಪಾರ್ಕ್ನ ನಿರ್ವಹಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಟ್ರೀಪಾರ್ಕ್ನ ಪ್ರವೇಶ ಶುಲ್ಕ ಆರು ವರ್ಷದೊಳಗಿನ ಮಕ್ಕಳಿಗೆ ವಿನಾಯಿತಿ ಇದ್ದು, 6 ರಿಂದ 14 ವರ್ಷ ಪ್ರಾಯದವರಿಗೆ 10 ರೂ. ಮತ್ತು 14 ವರ್ಷ ಮೇಲ್ಪಟ್ಟವರಿಗೆ 20 ರೂ. ಹಾಗೂ ಸಾಮಾನ್ಯ ಕ್ಯಾಮೆರಾ ಉಪಯೋಗಕ್ಕೆ 25 ರೂ., ಝೂಂ ಕ್ಯಾಮೆರಾ/ ಹ್ಯಾಂಡಿ ಕ್ಯಾಮೆರಾ ಬಳಸುವು ದಕ್ಕೆ 50 ರೂ., ಸ್ಟಾಂಡ್ ಕ್ಯಾಮೆರಾ ಬಳಸುವುದಕ್ಕೆ ರೂ.100 ಮತ್ತು ಫೋಟೊಶೂಟ್ಗೆ 200 ರೂ.ಯಂತೆ ಪರಿಷ್ಕರಿಸಲು ಸಭೆಯಲ್ಲಿ ತೀರ್ಮಾನಿಸಿದೆ.
ಪರಿಷ್ಕತ ಶುಲ್ಕವು ಎಪ್ರಿಲ್ 1ರಿಂದ ಜಾರಿಗೆ ಬರಲಿದೆ. ಈವರೆಗೆ ಟ್ರೀಪಾರ್ಕ್ನಿಂದ 26.26 ಲಕ್ಷ ರೂ. ಆದಾಯ ಬಂದಿದೆ. ಅದರಲ್ಲಿ 2018-19ನೇ ಸಾಲಿನಲ್ಲಿ ಟ್ರೀ ಪಾರ್ಕ್ನ ವಿದ್ಯುತ್ ವೆಚ್ಚದ ಬಿಲ್ಲು, ನೀರಿನ ವೆಚ್ಚದ ಬಿಲ್ಲು ಮತ್ತು ಟ್ರೀಪಾರ್ಕ್ ಸ್ವಚ್ಛಗೊಳಿಸುವವರ ವೇತನ ಬಾಕಿ ಪಾವತಿಸಲು ಸಭೆಯಲ್ಲಿ ತಿಳಿಸಲಾಯಿತು.
ಸಮಿತಿ ಸಭೆಯಲ್ಲಿ ಮಂಗಳೂರು ವಲಯ ಅರಣ್ಯಾಧಿಕಾರಿ ಶ್ರೀಧರ್, ಸಂಬಂಧಪಟ್ಟ ಇಲಾಖಾಧಿಕಾರಿಗಳು, ಪ್ರತಿನಿಧಿಗಳು ಉಪಸ್ಥಿತರಿದ್ದರು.