×
Ad

ಕ್ರೀಡಾಸ್ಪೂರ್ತಿಯನ್ನು ವಕೀಲ ವೃತ್ತಿ ಜೀವನದಲ್ಲೂ ಅಳವಡಿಸಿ: ನ್ಯಾ.ಅಬ್ದುಲ್ ನಝೀರ್

Update: 2020-03-14 20:41 IST

ಉಡುಪಿ, ಮಾ.14: ವಕೀಲರು ತಮ್ಮಲ್ಲಿ ಕ್ರೀಡಾಸ್ಪೂರ್ತಿಯನ್ನು ಬೆಳೆಸಿಕೊಳ್ಳ ಬೇಕು. ಅದು ಕೇವಲ ಮೈದಾನಕ್ಕೆ ಸೀಮಿತವಾಗಿರದೆ, ತಮ್ಮ ವೃತ್ತಿ ಜೀವನ ದಲ್ಲಿಯೂ ಆಳವಡಿಸಿಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ನ್ಯಾಯ ಮೂರ್ತಿ ಎಸ್.ಅಬ್ದುಲ್ ನಝೀರ್ ಹೇಳಿದ್ದಾರೆ.

ಉಡುಪಿ ವಕೀಲರ ಸಂಘದ ಆಶ್ರಯದಲ್ಲಿ ಉಡುಪಿ ಕೋರ್ಟ್ ಆವರಣ ದಲ್ಲಿ ಏರ್ಪಡಿಸಲಾದ ಎರಡು ದಿನಗಳ ರಾಜ್ಯಮಟ್ಟದ ವಕೀಲರ ಹೊನಲು ಬೆಳಕಿನ ವಾಲಿಬಾಲ್ ಮತ್ತು ಥ್ರೋಬಾಲ್ ಪಂದ್ಯಾಕೂಟವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡುತಿದ್ದರು.

ವಕೀಲರು ವಾದ ಮಾಡುವುದು ತಮ್ಮ ವೈಯಕ್ತಿಕ ದಾವೆಗಾಗಿ ಅಲ್ಲ. ಆದುದರಿಂದ ವಕೀಲರು ಶುಲ್ಕವನ್ನು ಪ್ರಕರಣದಲ್ಲಿ ಗೆಲುವು ಅಥವಾ ಸೋಲು ಅನುಭವಿಸುವುದಕ್ಕಾಗಿ ಪಡೆದುಕೊಳ್ಳಬಾರದು. ವಕೀಲರು ಜನರಿಂದ ಅವರ ಪರವಾಗಿ ವಾದ ಮಾಡಿರುವುದಕ್ಕಾಗಿ ಶುಲ್ಕ ಪಡೆದು ಕೊಳ್ಳಬೇಕೆ ಹೊರತು ಸೋಲು ಗೆಲುವಿಗಾಗಿ ಅಲ್ಲ ಎಂದು ಅವರು ಅಭಿಪ್ರಾಯ ಪಟ್ಟರು.

ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸಿ.ಎಂ.ಜೋಶಿ ಮಾತನಾಡಿ, ಜನರು ನ್ಯಾಯಾಲಯಗಳಲ್ಲಿ ಇರುವ ಪ್ರಕರಣಗಳ ಶೀಘ್ರ ಇತ್ಯರ್ಥ ಆಗಬೇಕೆಂದು ಬಯಸುತ್ತಿದ್ದಾರೆ. ಹಾಗಾಗಿ ನ್ಯಾಯಾಲಯಗಳು ಪ್ರಕರಣಗಳ ಇತ್ಯರ್ಥಕ್ಕೆ ಕ್ರಿಕೆಟ್‌ನಲ್ಲಿರುವ 20-20 ಮಾದರಿಯನ್ನು ಅನುಸರಿಸಬೇಕು. ಇದರಿಂದ ಪ್ರಕರಣಗಳ ಶೀಘ್ರ ಇತ್ಯರ್ಥ ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ವಿಧಾನ ಪರಿಷತ್ ಸದಸ್ಯ ಹಾಗೂ ಕರ್ನಾಟಕ ರಾಜ್ಯ ವಕೀಲರ ಪರಿಷತ್ ಸದಸ್ಯ ಎಸ್.ಎಲ್.ಬೋಜೆಗೌಡ ಮಾತನಾಡಿ, ತನ್ನ ವಿಧಾನ ಪರಿಷತ್ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ, ಕೊಡಗು ಜಿಲ್ಲೆಗಳ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿರುವ ವಕೀಲರ ಸಂಘದ ಗ್ರಂಥಾಲಯಕ್ಕೆ ತಲಾ ಎರಡು ಲಕ್ಷ ರೂ. ಮತ್ತು ತಾಲೂಕು ವಕೀಲರ ಸಂಘದ ಗ್ರಂಥಾಲಯಕ್ಕೆ ತಲಾ ಒಂದು ಲಕ್ಷ ರೂ. ಅನುದಾನ ನೀಡಲಾಗುವುದು ಎಂದರು.

ಸಮಾಜ ಇಂದು ಎಲ್ಲರನ್ನೂ ಅನುಮಾನದಿಂದ ನೋಡುವ ಪರಿಸ್ಥಿತಿ ಉದ್ಭವಿಸಿದೆ. ಸಂವಿಧಾನಕ್ಕೆ ಹಲವು ತಿದ್ದುಪಡಿ ತಂದರೂ ಜನರ ಆಶಯಕ್ಕೆ ತಕ್ಕಂತೆ ಕೆಲಸ ಆಗುತ್ತಿಲ್ಲ. ಇದಕ್ಕೆ ನ್ಯಾಯಾಲಯ ಅವಕಾಶ ಮಾಡಿಕೊಡದೆ, ಜನರ ನಂಬಿಕೆಯನ್ನು ಉಳಿಸುವ ಕೆಲಸ ಮಾಡ ಬೇಕೆಂದು ಅವರು ಹೇಳಿದರು.

ಅಧ್ಯಕ್ಷತೆಯನ್ನು ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಹಾಗೂ ಉಡುಪಿ ಜಿಲ್ಲಾ ಆಡಳಿತಾತ್ಮಕ ನ್ಯಾಯಾಧೀಶ ನ್ಯಾ.ಅಶೋಕ್ ಜಿ. ನಿಜ ಗಣ್ಣವರ್ ವಹಿಸಿದ್ದರು. ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ(ಪೋಕ್ಸೋ ನ್ಯಾಯಾಲಯ) ವನಮಾಲ ಆನಂದ ರಾವ್, ವಕೀಲರ ಸಂಘದ ಕ್ರೀಡಾ ಕಾರ್ಯದರ್ಶಿ ಬಾಲಚಂದ್ರ ಬಿ. ಉಪಸ್ಥಿತರಿದ್ದರು.

ವಕೀಲರ ಸಂಘದ ಅಧ್ಯಕ್ಷ ದಿವಾಕರ ಎಂ.ಶೆಟ್ಟಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ರೆನೋಲ್ಡ್ ಪ್ರವೀಣ್ ಕುಮಾರ್ ವಂದಿಸಿದರು. ವಕೀಲೆ ಮೇರಿ ಶ್ರೇಷ್ಠ ಕಾರ್ಯಕ್ರಮ ನಿರೂಪಿಸಿದರು.

ನ್ಯಾಯಮೂರ್ತಿಗಳ ಕನ್ನಡ, ತುಳು ಭಾಷಣಕ್ಕೆ ಮೆಚ್ಚುಗೆ

ಮೂಲತ: ಮೂಡಬಿದರೆಯವರಾದ ನ್ಯಾ.ಅಬ್ದುಲ್ ನಝೀರ್ ತಮ್ಮ ಭಾಷಣವನ್ನು ಕನ್ನಡದಲ್ಲಿ ಆರಂಭಿಸುತ್ತಿದ್ದಂತೆ ವಕೀಲರಿಂದ ಜೋರಾದ ಕರತಾಡನ ಕೇಳಿಬಂತು. ಅವರು ಕನ್ನಡ, ತುಳು ಹಾಗೂ ಇಂಗ್ಲೀಷ್ ಭಾಷೆಯನ್ನು ಬಳಸಿ ತಮ್ಮ ಭಾಷಣವನ್ನು ಮಾಡಿದರು. ವಕೀಲರು ನೀಡುವ ಕಾನೂನು ಸಲಹೆಗೆ ಸಂಬಂಧಿಸಿ ಉದಾಹರಣೆ ನೀಡುವಾಗ ಅವರು ತುಳುವಿನಲ್ಲಿ ನಿರರ್ಗಳವಾಗಿ ಮಾತನಾಡಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

‘ಕೊರೊನ ಪಿಡುಗು ತೊಲಗಿಸಲು ಸಹಕರಿಸಿ’

ತಮ್ಮ ಭಾಷಣದ ಆರಂಭದಲ್ಲಿ ಕಾರ್ಯಕ್ರಮಕ್ಕೆ ವಿಳಂಬವಾಗಿ ಬಂದದಕ್ಕೆ ನ್ಯಾಯಮೂರ್ತಿ ಅಬ್ದುಲ್ ನಝೀರ್ ಸಭಿಕರಲ್ಲಿ ಕ್ಷಮೆಯಾಚಿಸಿದರು. ಅದೇ ರೀತಿ ಪುಷ್ಪ ನೀಡಿ ಸ್ವಾಗತಿಸುವ ಸಂದರ್ಭ ಶೇಕ್ ಹ್ಯಾಂಡ್ ಮಾಡುವ ಬದಲು ಕೈಮುಗಿದು ನಮಸ್ಕರಿಸಿದ ನ್ಯಾಯಮೂರ್ತಿಗಳು, ‘ನಾವು ಭಾರತೀಯ ಸಂಸ್ಕೃತಿ ಯನ್ನು ಪಾಲಿಸಬೇಕು’ ಎಂದರು.

‘ಇಂದು ನಾವು ಆರೋಗ್ಯಕ್ಕೆ ಸಂಬಂಧಿಸಿ ಬಹಳ ಕಷ್ಟದ ದಿನಗಳಲ್ಲಿ ಇದ್ದೇವೆ. ಇದರ ವಿರುದ್ಧ ಜಿಲ್ಲಾಡಳಿತ ಬಹಳಷ್ಟು ಕ್ರಮ ತೆಗೆದುಕೊಂಡಿದೆ. ಆದುದರಿಂದ ನಾವು ಈ ವಿಚಾರದಲ್ಲಿ ಜಿಲ್ಲಾಡಳಿತದೊಂದಿಗೆ ಕೈಜೋಡಿಸಿ ಸಹಕಾರ ನೀಡ ಬೇಕು. ಆ ಮೂಲಕ ಈ ಪಿಡುಗನ್ನು ನಿವಾರಿಸಬೇಕು ಎಂದು ನ್ಯಾ.ಅಬ್ದುಲ್ ನಝೀರ್ ಕರೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News