ಬಂಟ್ವಾಳ: ಎಸ್ಡಿಎಸಿಯು ವತಿಯಿಂದ ಸ್ನೇಹ ಸಮ್ಮಿಲನ ಕೂಟ, ಸದಸ್ಯತ್ವ ಅಭಿಯಾನ
ಬಂಟ್ವಾಳ : ಎಸ್ಡಿಟಿಯು ನೇತೃತ್ವದ ಸೋಷಿಯಲ್ ಡೆಮಾಕ್ರೆಟಿಕ್ ಆಟೋ ಚಾಲಕರ ಯೂನಿಯನ್ ಬಂಟ್ವಾಳ ತಾಲೂಕು ಸಮಿತಿ ವತಿಯಿಂದ ಶನಿವಾರ ಅಕ್ಕರಂಗಡಿ ಕಚೇರಿಯಲ್ಲಿ ಸ್ನೇಹ ಸಮ್ಮಿಲನ ಕೂಟ ಮತ್ತು ಸದಸ್ಯತ್ವ ಅಭಿಯಾನ ಕಾರ್ಯಕ್ರಮ ನಡೆಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಾಹಿಸಿ ಮಾತಾಡಿದ ಎಸ್ಡಿಪಿಐ ಜಿಲ್ಲಾ ಕಾರ್ಯದರ್ಶಿ ಅಶ್ರಫ್ ಮಂಚಿ ದೇಶದಲ್ಲಿ ಶೇ 70 ರಷ್ಟು ಇರುವ ಅಸಂಘಟಿತ ಕಾರ್ಮಿಕರ ಶ್ರಮದಿಂದ ದೇಶ ಮುನ್ನಡೆಯುತ್ತಿದೆ ಆದರೆ ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ಆಳುವ ವರ್ಗದವರಲ್ಲಿ ಯಾವುದೇ ಯೋಜನೆಗಳಿಲ್ಲ, ಕಾರ್ಮಿಕರಾದ ಆಟೋ ರಿಕ್ಷಾ ಚಾಲಕರ ಜೀವನ ಭದ್ರತೆಗಾಗಿ ಸಂಘಟಿತವಾಗಿ ಹೋರಾಟ ನಡೆಸಿದರೆ ಮಾತ್ರ ಸರ್ಕಾರದ ಗಮನ ಸೆಳೆಯಲು ಸಾಧ್ಯವಿದೆ ಎಂದು ಹೇಳಿದರು.
ಎಸ್ಡಿಪಿಐ ಜಿಲ್ಲಾ ಸಮಿತಿ ಸದಸ್ಯ ಶಾಫಿ ಬಬ್ಬುಕಟ್ಟೆ, ಪುರಸಭಾ ಸದಸ್ಯ ಮುನೀಶ್ ಅಲಿ, ನ್ಯಾಯವಾದಿ ಕಬೀರ್, ಆಟೋ ಯೂನಿಯನ್ ಜಿಲ್ಲಾಧ್ಯಕ್ಷ ಖಾದರ್ ಫರಂಗಿಪೇಟೆ ಈ ಸಂದರ್ಭದಲ್ಲಿ ಮಾತನಾಡಿದರು.
ಎಸ್ಡಿಎಸಿಯು ಬಂಟ್ವಾಳ ತಾಲೂಕು ಸಮಿತಿ ಅಧ್ಯಕ್ಷ ಸಂಶುದ್ದೀನ್ ಅಧ್ಯಕ್ಷತೆ ವಹಿಸಿದರು. ಎಸ್ಡಿಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಾಲಿಕ್ ಕೊಲಕೆ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಮುಸ್ತಫಾ ಪರ್ಲಿಯಾ ವಂದಿಸಿದರು, ಇಲ್ಯಾಸ್ ವಗ್ಗ ಕಾರ್ಯಕ್ರಮ ನಿರೂಪಿಸಿದರು.