ಉಡುಪಿ: ಚರ್ಚ್ಗಳಲ್ಲಿ ಕೊರೋನ ಜಾಗೃತಿಗೆ ಬಿಷಪ್ ಸೂಚನೆ
ಉಡುಪಿ, ಮಾ.15: ಉಡುಪಿ ಧರ್ಮಪ್ರಾಂತ್ಯ ವ್ಯಾಪ್ತಿಯ ಎಲ್ಲ ಚರ್ಚ್ ಗಳಲ್ಲಿ ಕೊರೋನ ವೈರಸ್ಗೆ ಸಂಬಂಧಿಸಿ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿ ಕೊಳ್ಳುವಂತೆ ಧರ್ಮಾಧ್ಯಕ್ಷ ಅತಿ ವಂ.ಡಾ.ಜೆರಾಲ್ಡ್ ಐಸಾಕ್ ಲೋಬೋ ಸೂಚನೆ ನೀಡಿದ್ದು, ಈ ಕುರಿತು ಎಲ್ಲ ಚರ್ಚ್ಗಳಿಗೆ ಸುತ್ತೋಲೆ ಕಳುಹಿಸ ಲಾಗಿದೆ.
ರವಿವಾರದ ಪ್ರಾರ್ಥನೆಯ ವೇಳೆ ಧರ್ಮಗುರುಗಳಿಂದ ಕೊರೋನಾ ಬಗ್ಗೆ ಮಾಹಿತಿ ನೀಡಬೇಕು. ವಿದೇಶದಲ್ಲಿರುವ ಸಂಬಂಧಿಕರು ಭಾರತಕ್ಕೆ ಬಾರದೆ, ಕೊರೋನಾ ಆತಂಕ ದೂರವಾದ ಮೇಲೆ ಬರಲು ಸಂಬಂಧಪಟ್ಟವರು ತಿಳಿಸ ಬೇಕು. ಚರ್ಚುಗಳಲ್ಲಿ ಪವಿತ್ರ ತೀರ್ಥವನ್ನು ಇಡುವ ಪಾತ್ರೆಯನ್ನು ಸ್ವಲ್ಪ ದಿನಗಳ ಕಾಲ ಖಾಲಿಯಾಗಿರಿಸಬೇಕು. ಪವಿತ್ರ ಪರಮ ಪ್ರಸಾದವನ್ನು ನಾಲಿಗೆಯಲ್ಲಿ ಸ್ವೀಕರಿಸುವ ಬದಲು ಕೈಯಲ್ಲಿ ತೆಗೆದುಕೊಳ್ಳಬೇಕು ಎಂದು ಬಿಷಪ್ ಸೂಚನೆ ನೀಡಿದ್ದಾರೆ.
ಕೆಮ್ಮು, ಶೀತ, ಜ್ವರದ ಲಕ್ಷಣ ಇದ್ದವರು ಚರ್ಚಿನಲ್ಲಿ ರವಿವಾರದ ಪೂಜೆಯಲ್ಲಿ ಭಾಗವಹಿಸದೆ ಮನೆಯಲ್ಲೇ ಪ್ರಾರ್ಥನೆ ಮಾಡಬೇಕು. ಪಾಪ ನಿವೇದನೆ ಸಮಯದಲ್ಲಿ ಧರ್ಮಗುರುಗಳು ಮತ್ತು ಭಕ್ತಾದಿಗಳು ಮಾಸ್ಕ್ ಧರಿಸುವುದು ಉತ್ತಮ. ಗುಡ್ ಫ್ರೈಡೆವರೆಗೂ ಕೊರೋನಾ ಸಮಸ್ಯೆ ಪರಿಹಾರವಾಗದೆ ಇದಲ್ಲಿ ಪವಿತ್ರ ಶಿಲುಬೆಯ ಆರಾಧನೆಯ ಸಮಯದಲ್ಲಿ ಶಿಲುಬೆಗೆ ಮುತ್ತಿಕ್ಕುವ ಬದಲು ಕೇವಲ ತಲೆ ಬಾಗಿ ನಮಸ್ಕರಿಸಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.