ಪಿಲಿಕುಳ ನಿಸರ್ಗಧಾಮ ಒಂದು ವಾರ ಬಂದ್
ಮಂಗಳೂರು, ಮಾ.15: ಕೊರೋನ ವೈರಸ್ ಭೀತಿಯ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಮತ್ತು ಜಿಲ್ಲಾಡಳಿತದ ಸೂಚನೆಯ ಮೇರೆಗೆ ಮಾ.14ರಿಂದ ಅನ್ವಯಗೊಂಡಂತೆ 1 ವಾರಗಳ ಕಾಲ ಪಿಲಿಕುಳ ನಿಸರ್ಗಧಾಮ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ.
ಇಲ್ಲಿ ಜೈವಿಕ ಉದ್ಯಾನವನ, ವಿಜ್ಞಾನ ಕೇಂದ್ರ, ಸರೋವರ ಉದ್ಯಾನ, ಬೋಟಿಂಗ್, ವಾಟರ್ ಅಮ್ಯೂಸ್ಮೆಂಟ್, ಗಾಲ್ಫ್ ಎಂದೆಲ್ಲಾ ದಿನಂಪ್ರತಿ ಸಾವಿರಾರು ಮಂದಿ ಆಗಮಿಸುತ್ತಿದ್ದಾರೆ. ಅಲ್ಲದೆ, 1300ಕ್ಕೂ ಅಧಿಕ ಪ್ರಭೇದಗಳ ಪ್ರಾಣಿ, ಪಕ್ಷಿ, ಸಸ್ತನಿಗಳಿವೆ. ಇದನ್ನು ವೀಕ್ಷಿಸಲು ಸಾವಿರಾರು ಮಂದಿ ಪಾಲ್ಗೊಳ್ಳುತ್ತಿದ್ದು, ಕೊರೋನ ಭೀತಿಯಿಂದ ದೂರವಾಗಿಸುವ ಸಲುವಾಗಿ ಒಂದು ವಾರ ಪ್ರವೇಶ ನಿರ್ಬಂಧ ಹೇರಲಾಗಿದೆ ಎಂದು ನಿಸರ್ಗಧಾಮದ ನಿರ್ದೇಶಕ ಎಚ್. ಜಯಪ್ರಕಾಶ್ ಭಂಡಾರಿ ತಿಳಿಸಿದ್ದಾರೆ.
ಬೀಚ್ಗಳಲ್ಲೂ ಪ್ರವಾಸಿಗರ ಸಂಖ್ಯೆಯಲ್ಲಿ ಇಳಿಮುಖ
ಸಾಮಾನ್ಯವಾಗಿ ಕರಾವಳಿಯ ಸೋಮೇಶ್ವರ, ತಣ್ಣೀರುಬಾವಿ, ಸುರತ್ಕಲ್-ಇಡ್ಯಾ ಬೀಚ್ಗಳಿಗೆ ದಿನನಿತ್ಯ ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಾರೆ. ಅದರಲ್ಲೂ ರವಿವಾರ ಪ್ರವಾಸಿಗರು ಅತ್ಯಧಿಕ ಸಂಖ್ಯೆಯಲ್ಲಿ ಜಮಾಯಿಸುತ್ತಾರೆ. ಕೊರೋನ ವೈರಸ್ ಹಿನ್ನಲೆಯಲ್ಲಿ ಈ ಬೀಚ್ಗಳಲ್ಲಿ ರವಿವಾರ ಪ್ರವಾಸಿಗರ ಸಂಖ್ಯೆ ಕಡಿಮೆಯಿತ್ತು.