×
Ad

ಅಧಿಕಾರಿಗಳಿಗೆ ರಜೆ ಇಲ್ಲ, ಲಾಡ್ಜ್‌ಗಳಲ್ಲಿ ಪ್ರವಾಸಿಗರ ಮಾಹಿತಿ ಕಡ್ಡಾಯ

Update: 2020-03-17 20:49 IST

ಉಡುಪಿ, ಮಾ.17: ಜಿಲ್ಲೆಯಲ್ಲಿ ಕೊರೋನ ನಿಯಂತ್ರಣಕ್ಕೆ ರಾಜ್ಯ ಸರಕಾರದ ಸೂಚನೆಯಂತೆ ಹಲವು ಕ್ರಮಗಳನ್ನು ಕೈಗೊಂಡಿದ್ದು, ಜಿಲ್ಲೆಯ ಯಾವುದೇ ಅಧಿಕಾರಿ/ಸಿಬ್ಬಂದಿಗಳಿಗೆ ಈ ಅವಧಿಯಲ್ಲಿ ರಜೆ ಮಂಜೂರು ಮಾಡದಂತೆ ಮತ್ತು ಜಿಲ್ಲಾಧಿಕಾರಿ, ಎಸ್ಪಿ, ಸಿಇಓ ಇವರ ಅನುಮತಿ ಇಲ್ಲದೇ ಕೇಂದ್ರಸ್ಥಾನ ಬಿಟ್ಟು ತೆರಳದಂತೆ ಹಾಗೂ ತಪ್ಪಿದಲ್ಲಿ ವಿಪತ್ತು ನಿರ್ವಹಣಾ ಕಾಯ್ದೆ ಪ್ರಕಾರ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಜಿ.ಜಗದೀಶ್ ಸರಕಾರಿ ನೌಕರರಿಗೆ ಎಚ್ಚರಿಸಿದ್ದಾರೆ.

ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಕೊರೋನ ನಿಯಂತ್ರಣ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.

ಜಿಲ್ಲೆಯ ನಗರ ಮತ್ತು ಗ್ರಾಮೀಣ ಪ್ರದೇಶಗಳ ಲಾಡ್ಜ್‌ಗಳಲ್ಲಿರುವ ಪ್ರವಾಸಿಗರ ವಿವರಗಳನ್ನು ಪಡೆಯುವಂತೆ ಮತ್ತು ಪ್ಲಾಟ್‌ಗಳಿಗೆ ಹೊಸದಾಗಿ ಬರುವವರ ಮಾಹಿತಿ ಪಡೆದು ಅವರ ಸ್ವ-ಹೇಳಿಕೆ ಪಡೆಯುವಂತೆ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರಿಗೆ ಮತ್ತು ತಾಲೂಕು ಪಂಚಾಯತ್ ಕಾರ್ಯನಿರ್ವಹಾಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.

ಜಿಲ್ಲೆಯಲ್ಲಿ ಮಾಸ್ಕ್‌ಗಳ ಕೊರತೆ ಸೃಷ್ಠಿಸುವುದು ಮತ್ತು ಅವುಗಳನ್ನು ಹೆಚ್ಚು ಬೆಲೆಗೆ ಮಾರಾಟ ಮಾಡುವುದು ಕಂಡುಬಂದಲ್ಲಿ ಅಂತಹವರ ವಿರುದ್ದ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ ಡಿಸಿ, ಎಲ್ಲಾ ಖಾಸಗಿ ಆಸ್ಪತ್ರೆಗಳಲ್ಲಿ ಹಾಗೂ ತಾಲೂಕು ಸರಕಾರಿ ಆಸ್ಪತ್ರೆಗಳಲ್ಲಿ ಕೊರೋನ ರೋಗಿಗಳಿಗಾಗಿ 2 ಬೆಡ್‌ಗಳನ್ನು ಕಾಯ್ದಿರಿಸುವಂತೆ ಹಾಗೂ ಜಿಲ್ಲೆಯ ಖಾಸಗಿ ವೈದ್ಯರು, ಖಾಸಗಿ ಆಸ್ಪತ್ರೆಗಳು, ನರ್ಸಿಂಗ್‌ಹೋಂಗಳು, ವಿದೇಶದಿಂದ ಬಂದು ರೋಗ ಲಕ್ಷಣಗಳಿರುವ ರೋಗಿಗಳಿದ್ದಲ್ಲಿ ಕೂಡಲೇ ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿ ಗಳಿಗೆ ಮಾಹಿತಿ ನೀಡುವಂತೆ ತಿಳಿಸಿದರು.

ಸಿನಿಮಾ ಮಂದಿರ, ಮಲ್ಟಿಪ್ಲೆಕ್ಸ್, ನಾಟಕಗಳು, ಯಕ್ಷಗಾನ, ರಂಗಮಂದಿರ, ಪಬ್‌ಗಳು, ಕ್ಲಬ್‌ಗಳು ಹಾಗೂ ನೈಟ್‌ಕ್ಲಬ್‌ಗಳನ್ನು ಸಂಪೂರ್ಣವಾಗಿ ಮುಚ್ಚುವ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ ಜಿಲ್ಲಾಧಿಕಾರಿ ಜಿ.ಜಗದೀಶ್, ಉಡುಪಿ ನಗರದ 3 ಮಾಲ್‌ಗಳನ್ನು ಮುಚ್ಚುವಂತೆ ಸೂಚಿಸಿ, ಈ ಪೈಕಿ ಬಿಗ್ ಬಝಾರ್‌ನ ದಿನಸಿ ಮತ್ತು ತರಕಾರಿ ವಿಭಾಗ, ಹಾಗೂ ಸಿಟಿ ಸೆಂಟರ್‌ನ ದಿನಸಿ ಮಳಿಗೆ ಹಾಗೂ ಕೆಳಗಿನ ಮಹಡಿಯಲ್ಲಿನ ಗ್ಯಾಸ್ ಏಜೆನ್ಸಿ ಹಾಗೂ ಅದರೊಂದಿಗಿನ 5 ಪ್ರತ್ಯೇಕ ಅಂಗಡಿಗಳನ್ನು ಮಾತ್ರ ತೆರೆಯುವಂತೆ ಸೂಚಿಸಿದರು.

ಮದುವೆ, ನಿಶ್ಚಿತಾರ್ಥ ಇತ್ಯಾದಿ ಕಾರ್ಯಕ್ರಮಗಳು ಪೂರ್ವ ನಿಗದಿ ಯಾಗಿದ್ದಲ್ಲಿ ಅಂತಹ ಕಾರ್ಯಕ್ರಮಗಳಲ್ಲಿ 100ಕ್ಕಿಂತ ಹೆಚ್ಚು ಜನರು ಸೇರದಂತೆ ಅಗತ್ಯ ಕ್ರಮ ವಹಿಸಲು ಮತ್ತು ಹೊಸದಾಗಿ ಮದುವೆ ನಿಶ್ಚಿತಾರ್ಥ ಇತ್ಯಾದಿ ಕಾರ್ಯಕ್ರಮಗಳಿಗೆ ಹಾಲ್‌ಗಳನ್ನು ಕಾಯ್ದಿರಿಸದಂತೆ ಸಂಬಂದಪಟ್ಟ ಅಧಿಕಾರಿ ಗಳಿಗೆ ತಿಳಿಸಿದರು.

ಧಾರ್ಮಿಕ ಕೇಂದ್ರಗಳಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಮಾತ್ರ ನಡೆಯ ಬೇಕು. ಜಾತ್ರೆ, ಉತ್ಸವ ಇತ್ಯಾದಿ ಜನ ಸೇರುವ ಕಾರ್ಯಕ್ರಮಗಳನ್ನು ನಡೆಸದಂತೆ ಹಾಗೂ ಈಗಾಗಲೇ ನಿಗದಿಯಾದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಆದಷ್ಟು ಕಡಿಮೆ ಸಂಖ್ಯೆಯ ಜನರು ಭಾಗವಹಿಸುವಂತೆ ತಿಳಿಸಿದರು.

ದೇವಸ್ಥಾನಗಳ ಯಕ್ಷಗಾನ ಮೇಳಗಳು ಹರಕೆ ಆಟಗಳನ್ನು ನಡೆಸುವಂತಿಲ್ಲ. ಈ ಬಗ್ಗೆ ಸಂಬಂಧಿಸಿದ ದೇವಾಲಯಗಳಿಗೆ ಪತ್ರ ಬರೆಯುವಂತೆ ಧಾರ್ಮಿಕ ದತ್ತಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ ಜಿಲ್ಲಾಧಿಕಾರಿ, ಕೊಲ್ಲೂರು ದೇವಸ್ಥಾನದ ಜಾತ್ರೆಯಲ್ಲಿ ಧಾರ್ಮಿಕ ಕಾರ್ಯಕ್ರಮ ಮಾತ್ರ ನಡೆಸಲು ಹಾಗೂ ಹೊರಗಿನ ಜನ ಭಾಗವಹಿಸದಂತೆ ಎಚ್ಚರ ವಹಿಸಲಾಗಿದೆ ಎಂದರು.

ಹೆಚ್ಚಿನ ಸಂಖ್ಯೆಯ ಜನ ಸೇರುವ ಕ್ರಿಕೆಟ್, ಪುಟ್‌ಬಾಲ್, ವಾಲಿಬಾಲ್, ಹಾಕಿ, ಬ್ಯಾಡ್ಮಿಂಟನ್, ಬಾಸ್ಕೆಟ್‌ಬಾಲ್ ಪಂದ್ಯಾಟಗಳನ್ನು ಆಯೋಜಿಸ ದಂತೆ ಮತ್ತು ಇವುಗಳ ಆಯೋಜನೆಗೆ ಅನುಮತಿ ನೀಡದಂತೆ ಕ್ರೀಡಾ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಈಗಾಗಲೇ ಶಾಲೆ ಕಾಲೇಜುಗಳಿಗೆ ರಜೆ ನೀಡಿದ್ದು, ಯಾವುದೇ ಬೇಸಿಗೆ ಶಿಬಿರಗಳನ್ನು ಆಯೋಜಿಸದಂತೆ ಮತ್ತು ಶಾಲೆಗಳು, ಕಾಲೇಜುಗಳು, ವಿಶ್ವವಿದ್ಯಾಲಯಗಳು, ವಾಣಿಜ್ಯ ಶಾಲೆಗಳು, ಟ್ಯುಟೋರಿಯಲ್ಸ್ ಮತ್ತು ಕೋಚಿಂಗ್ ಕ್ಲಾಸ್‌ಗಳನ್ನು ಕಡ್ಡಾಯವಾಗಿ ಮುಚ್ಚುವಂತೆ ಹಾಗೂ ಜನರು ಹೆಚ್ಚಾಗಿ ಬಳಸುವ ಸ್ವಿಮ್ಮಿಂಗ್‌ಪೂಲ್, ಜಿಮ್, ಫಿಟ್‌ನೆಸ್ ಸೆಂಟರ್ ಇತ್ಯಾದಿ ಗಳನ್ನು ಮುಚ್ಚುವಂತೆ ಜಿ.ಜಗದೀಶ್ ಸೂಚಿಸಿದರು.

ಕೊರೋನ ನಿಯಂತ್ರಣ ಕುರಿತಂತೆ, ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳು ಮತ್ತು ಪಂಚಾಯತ್‌ಮಟ್ಟದಲ್ಲಿ ಸಭೆಗಳನ್ನು ನಡೆಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಹಾಗೂ ಕೊರೋನ ಕಾಯಿಲೆಗೆ ಸಂಬಂಧಿಸಿದಂತೆ ಸಾರ್ವನಿಕರಿಗೆ ಅರಿವು ಮೂಡಿಸಲು ವ್ಯಾಪಕ ಪ್ರಚಾರ ಕಾರ್ಯಕ್ರಮ ಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಸೂಚಿಸಿದರು.

ಸಭೆಯಲ್ಲಿ ಸಿಇಒ ಪ್ರೀತಿ ಗೆಹ್ಲೋಟ್, ಎಸ್ಪಿ ಎನ್.ವಿಷ್ಣುವರ್ಧನ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಡಿಎಚ್‌ಒ ಡಾ. ಸುಧೀರ್‌ ಚಂದ್ರ ಸೂಡ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News