×
Ad

ಉಡುಪಿ ಜಿಲ್ಲೆಯಾದ್ಯಂತ ಸಿಆರ್‌ಪಿಸಿ ಸೆಕ್ಷನ್ 144(3) ಜಾರಿ: ಜಿಲ್ಲಾಧಿಕಾರಿ

Update: 2020-03-18 21:27 IST

ಉಡುಪಿ, ಮಾ.18: ಕೋವಿಡ್-19 (ಕೊರೋನ ವೈರಾಣು ಕಾಯಿಲೆ 2019) ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರಕಾರದ ಆದೇಶದಂತೆ ಈಗಾಗಲೇ ಹಲವಾರು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳ ಲಾಗಿದ್ದು, ಜಿಲ್ಲಾಡಳಿತದ ಆದೇಶವನ್ನು ಜಿಲ್ಲೆಯಾದ್ಯಂತ ಕಟ್ಟುನಿಟ್ಟಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಜಿ.ಜಗದೀಶ್ ಜಿಲ್ಲೆಯಾದ್ಯಂತ ಸಿಆರ್‌ಪಿಸಿ ಸೆಕ್ಷನ್ 144(3)ನ್ನು ಜಾರಿಗೊಳಿಸಿದ್ದಾರೆ.

ಜಿಲ್ಲೆಯಲ್ಲಿ ನಡೆಯುವ ಎಲ್ಲಾ ಧಾರ್ಮಿಕ ಸಂಸ್ಥೆಗಳಿಗೆ ಸೇರಿದ ಜಾತ್ರೆಗಳು, ಸಭೆ ಸಮಾರಂಭಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ಸಂತೆ/ ಜಾತ್ರೆ/ ಉತ್ಸವ/ ಸಾಮೂಹಿಕ ವಿವಾಹಗಳು ಹಾಗೂ ಇನ್ನಿತರ ಜನಸಂದಣಿ ಸೇರುವ ಕಾರ್ಯಕ್ರಮಗಳಿಂದ ಸೋಂಕು ಹರಡುವ ಸಾಧ್ಯತೆ ಹೆಚ್ಚು ಇರುವ ಹಿನ್ನೆಲೆಯಲ್ಲಿ ಸಾರ್ವಜನಿಕರ ಹಿತದೃಷ್ಟಿಯಿಂದ ಜಿಲ್ಲೆಯಾದ್ಯಂತ ಸೆಕ್ಷನ್ 144(3)ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಮಾ.18ರಿಂದ ಮುಂದಿನ ಆದೇಶದವರೆಗೆ ಇದು ಜಾರಿಯಲ್ಲಿರುತ್ತದೆ ಎಂದವರು ಹೇಳಿದ್ದಾರೆ.

ಈ ಅವಧಿಯಲ್ಲಿ ಜಿಲ್ಲೆಯಾದ್ಯಂತ ಧಾರ್ಮಿಕ ಕೇಂದ್ರಗಳಲ್ಲಿ ನಡೆಯುವ ಉತ್ಸವ/ಜಾತ್ರೆಗಳಲ್ಲಿ ಅರ್ಚಕರು ಸೇರಿದಂತೆ ಕೇವಲ ಧಾರ್ಮಿಕ ಕೇಂದ್ರಗಳ ಸಿಬ್ಬಂದಿ ಮಾತ್ರ ಭಾಗವಹಿಸಬೇಕು, ಉತ್ಸವಗಳಲ್ಲಿ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ದೇವಸ್ಥಾನಗಳಲ್ಲಿ ಕೇವಲ ದೇವರ ದರ್ಶನವನ್ನು ಹೊರತುಪಡಿಸಿ ಉಳಿದ ಎಲ್ಲಾ ಸೇವೆಗಳನ್ನು ರದ್ದುಪಡಿಸಲಾಗಿದೆ. ಅಲ್ಲದೇ ದೇವಸ್ಥಾನಗಳಿಗೆ ಬರುವ ಸಾರ್ವಜನಿಕರಿಗೆ ತಂಗಲು ಅವಕಾಶ ಇರುವುದಿಲ್ಲ.

ದೇವಸ್ಥಾನ, ಮಸೀದಿ, ಚರ್ಚ್ ಒಳಗೊಂಡಂತೆ ಎಲ್ಲಾ ಧಾರ್ಮಿಕ ಕೇಂದ್ರಗಳಲ್ಲಿ ಗುಂಪು ಗುಂಪಾಗಿ ಸಾರ್ವಜನಿಕರು ಪ್ರವೇಶಿಸಬಾರದು. ಬೇಸಿಗೆ ಶಿಬಿರ, ಸಮಾರಂಭಗಳು, ವಿಚಾರಸಂಕಿರಣಗಳು, ಕ್ರೀಡಾಕೂಟ ಮತ್ತಿತರ ಒಂದೆಡೆ ಜನ ಸೇರುವ ಯಾವುದೇ ಕಾರ್ಯಕ್ರಮವನ್ನು ಆಯೋಜಿಸಬಾರದು.

ವಾರದ ಸಂತೆ ಇಲ್ಲ:  ವಾರದ ಸಂತೆಯನ್ನು ನಿರ್ಬಂಧಿಸಲಾಗಿದೆ. ಬೀಚ್/ ಪ್ರವಾಸಿ ತಾಣಗಳಿಗೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಮದುವೆ / ನಿಶ್ಚಿತಾರ್ಥ ಸಮಾರಂಭಗಳನ್ನು ಹೆಚ್ಚಿನ ಜನಸಂದಣಿ ಸೇರದಂತೆ ಸರಳವಾಗಿ ಆಯೋಜಿಸಬೇಕು. ಹೆಚ್ಚು ಜನ ಸೇರುವಂತಹ ಕುಟುಂಬದ ಧಾರ್ಮಿಕ ಕಾರ್ಯಕ್ರಮಗಳನ್ನು ತಮ್ಮ ಸ್ವಂತ ಸ್ಥಳಗಳಲ್ಲಿ ಸರಳವಾಗಿ ಆಚರಿಸ ಬೇಕು. ಅನಗತ್ಯವಾಗಿ ಹೊರಗಿನವರು ಸೇರದಂತೆ ಎಚ್ಚರಿಕೆ ವಹಿಸಬೇಕು.

ಪಿ.ಜಿ. ಮತ್ತು ವಸತಿ ನಿಲಯಗಳಲ್ಲಿ ಕೈಗೊಳ್ಳಬೇಕಾದ ಮುಂಜಾಗೃತಾ ಕ್ರಮಗಳು:  ಪಿ.ಜಿ ಮತ್ತು ವಸತಿ ನಿಲಯಗಳಲ್ಲಿ ವಾಸಿಸುವ ವಿದ್ಯಾರ್ಥಿ/ ವಿದ್ಯಾರ್ಥಿನಿಯರು ತಮ್ಮ ಶಿಕ್ಷಣ ಸಂಸ್ಥೆಗಳು ಕೋವಿಡ್-19ರ ಹಿನ್ನೆಲೆಯಲ್ಲಿ ರಜೆ ಘೋಷಿಸಿದ್ದಲ್ಲಿ ತಮ್ಮ ತಮ್ಮ ಮನೆಗಳಿಗೆ ವಾಪಾಸು ಹೋಗಲು ಸಲಹೆ ನೀಡಬೇಕು. ಒಂದು ವೇಳೆ ಯಾರಾದರೂ ಪಿ.ಜಿ ಮತ್ತು ವಸತಿ ನಿಲಯಗಳಲ್ಲಿ ಉಳಿದುಕೊಳ್ಳಲು ಬಯಸಿದ್ದಲ್ಲಿ ಅಂತಹವರಿಗೆ ಪಿಜಿ ಹಾಗೂ ವಸತಿ ನಿಲಯಗಳ ಮಾಲಕರು/ವ್ಯವಸ್ಥಾಪಕರು ಕರ್ನಾಟಕ ಸರಕಾರವು ನೀಡಿರುವ ಸಲಹೆಗಳಂತೆ ವೈಯಕ್ತಿಕ ಸ್ಚಚ್ಛತೆಗಳ ಬಗ್ಗೆ ಮನವರಿಕೆ ಮಾಡಿಕೊಂಡು ಪಾಲಿಸಬೇಕು. ನಿಯತಕಾಲಿಕವಾಗಿ ಪಿ.ಜಿ ವಸತಿ ನಿಲಯಗಳಲ್ಲಿ ನೈರ್ಮಲ್ಯತೆ ಹಾಗೂ ಸ್ವಚ್ಛತೆಯನ್ನು ಕಾಪಾಡುವುದು ಪಿ.ಜಿ. ಮತ್ತು ವಸತಿ ನಿಲಯಗಳ ಮಾಲಕರ/ವ್ಯವಸ್ಥಾಪಕರ ಜವಾಬ್ದಾರಿಯಾಗಿದೆ.

ಪಿ.ಜಿ., ವಸತಿ ನಿಲಯಗಳಲ್ಲಿ ವಾಸಿಸುವವರಿಗೆ ಅನಾನುಕೂಲವಾಗದಂತೆ ಹಾಗೂ ಯಾವುದೇ ಸೋಂಕು ಹರಡದಂತೆ ಕೋಣೆಗಳಲ್ಲಿ ಜನದಟ್ಟಣೆಯನ್ನು ಕಡ್ಡಾಯವಾಗಿ ನಿರ್ಬಂಧಿಸಲಾಗಿದೆ. ಪಿ.ಜಿ/ವಸತಿ ನಿಲಯಗಳ ಆವರಣಗಳಲ್ಲಿ ನೈರ್ಮಲ್ಯತೆ ಹಾಗೂ ಸ್ವಚ್ಛತೆಯನ್ನು ಕಾಪಾಡಲು ನೀಡಲಾದ ನಿರ್ದೇಶನಗಳನ್ನು ಅನುಸರಿಸದೇ ಕೋವಿಡ್-19 ಹರಡಲು ಕಾರಣಕರ್ತರಾದವರ ವಿರುದ್ಧ ಕಠಿಣ ಕ್ರಮಗಳನ್ನು ಜರುಗಿಸಲಾಗುವುದು.

ಪಿ.ಜಿ ಮತ್ತು ವಸತಿ ನಿಲಯದ ಮೇಲ್ವಿಚಾರಕರು/ ಮಾಲಕರು ತಾವು ಈ ನಿಟ್ಟಿನಲ್ಲಿ ಕೈಗೊಂಡ ಕ್ರಮದ ವರದಿಯನ್ನು ತಮ್ಮ ವ್ಯಾಪ್ತಿಯ ಸ್ಥಳೀಯ ಸಂಸ್ಥೆಗಳ (ನಗರಸಭೆ/ ಪುರಸಭೆ/ ಪಟ್ಟಣ ಪಂಚಾಯತ್/ ಗ್ರಾಮ ಪಂಚಾಯತ್) ಮುಖ್ಯಸ್ಥರಿಗೆ ಪ್ರತಿ ಎರಡು ದಿನಕ್ಕೊಮ್ಮೆ ಕಡ್ಡಾಯವಾಗಿ ಒಪ್ಪಿಸುವಂತೆ ಜಿಲ್ಲಾಧಿಕಾರಿಗಳ ಆದೇಶದಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News