ಬೈಕ್ ಅಪಘಾತ: ಸವಾರ ಮೃತ್ಯು, ಪಾದಚಾರಿ ಗಂಭೀರ

Update: 2020-03-18 16:31 GMT

ಕೋಟ, ಮಾ.18: ವಡ್ಡರ್ಸೆ ಗ್ರಾಮದ ದೇವರ ಜಾತ್ರೆ ಪ್ರಯುಕ್ತ ದೇವರ ಪಲ್ಲಕ್ಕಿಯ ಕಟ್ಟೆ ಪೂಜೆಯ ಸಂದರ್ಭ ಮಾ.17ರ ಮಧ್ಯರಾತ್ರಿ ನಂತರ 12:15ರ ಸುಮಾರಿಗೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟು, ಮಹಿಳೆಯೊಬ್ಬರು ಗಂಭೀರವಾಗಿ ಗಾಯಗೊಂಡಿರುವ ಬಗ್ಗೆ ವರದಿಯಾಗಿದೆ.

ಮೃತರನ್ನು ಬೈಕ್ ಸವಾರ ಉದಯ ಪೂಜಾರಿ ಎಂದು ಗುರುತಿಸಲಾಗಿದೆ. ಗಂಭೀರವಾಗಿ ಗಾಯಗೊಂಡ ವಡ್ಡರ್ಸೆ ಗ್ರಾಮದ ಬನ್ನಾಡಿ ನಿವಾಸಿ ಸುನೀತಾ ಎಂಬವರ ಮಗಳು ಗೀತಾ(35) ಎಂಬವರು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಡೆಯುತ್ತಿದ್ದಾರೆ.

ಕೋಟ ಮೂರಕೈ ಕಡೆಯಿಂದ ಸಾಯಿಬ್ರಕಟ್ಟೆ ಕಡೆಗೆ ಬರುತ್ತಿದ್ದ ಪಲ್ಲಕ್ಕಿಗೆ ಪೂಜೆ ಸಲ್ಲಿಸಲು ಗೀತಾ ಮನೆಯ ಎದುರಿನ ರಸ್ತೆಯಲ್ಲಿ ರಂಗೋಲಿ ಬಿಡಿಸಿ ನಿಂತಿದ್ದರು. ಆ ವೇಳೆ ಕೋಟ ಮೂರಕೈ ಕಡೆಯಿಂದ ಬಂದ ಬೈಕ್, ಗೀತಾ ಅವರಿಗೆ ಡಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಬಳಿಕ ಬೈಕ್ ಸ್ವಲ್ಪ ಮುಂದೆ ಹೋಗಿ ಸವಾರ ಸಮೇತ ರಸ್ತೆಗೆ ಬಿತ್ತೆನ್ನಲಾಗಿದೆ.

ಇದರಿಂದ ಗಂಭೀರವಾಗಿ ಗಾಯಗೊಂಡ ಉದಯ ಪೂಜಾರಿ ಬ್ರಹ್ಮಾವರ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದ ದಾರಿ ಮಧ್ಯೆ ಮೃತಪಟ್ಟರು. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News