×
Ad

ಉಡುಪಿ: ಕೊರೋನ ವೈರಸ್ ಕುರಿತ ಎಲ್ಲಾ ಸಂಶಯ ನಿವಾರಣೆಗೆ ಸಹಾಯವಾಣಿ

Update: 2020-03-20 17:50 IST

ಉಡುಪಿ, ಮಾ.20: ಉಡುಪಿ ಜಿಲ್ಲೆಯಲ್ಲಿ ಕರೋನ ವೈರಸ್ ಕುರಿತ ನಾಗರಿಕರ ಎಲ್ಲಾ ಸಂದೇಹಗಳನ್ನು ಪರಿಹರಿಸಲು, ರೋಗದ ಬಗ್ಗೆ ಮಾಹಿತಿ ನೀಡಲು, ಸಂಶಯಾಸ್ಪದ ರೋಗಿಗಳ ಚಲನಗಳ ಮಾಹಿತಿ ಸಂಗ್ರಹಿಸಲು, ಐಸೊಲೇಟೆಡ್ ಬೆಡ್‌ಗಳ ನಿರ್ವಹಣೆ ಕುರಿತಂತೆ ಸಮಗ್ರ ಮಾಹಿತಿ ಸಂಗ್ರಹಿಸಲು ಸಹಾಯವಾಣಿಯೊಂದನ್ನು ಪ್ರಾರಂಭಿಸಲಾಗಿದ್ದು, ಇದಕ್ಕಾಗಿ ದೂರವಾಣಿಗೆ ಸಂಖ್ಯೆ: 9663957222 ಅಥವಾ 9663950222ಕ್ಕೆ ಕರೆ ಮಾಡಬಹುದಾಗಿದೆ.

ಕೊರೋನ ಸಹಾಯವಾಣಿ ಪ್ರಾರಂಭವಾದ ಒಂದೇ ದಿನದಲ್ಲಿ 20ಕ್ಕೂ ಅಧಿಕ ಕರೆಗಳನ್ನು ಸ್ವೀಕರಿಸಲಾಗಿದ್ದು, ಜಿಲ್ಲೆ ಮಾತ್ರವಲ್ಲದೇ ಹೊರ ರಾಜ್ಯದ ಸಾರ್ವಜನಿಕರೂ ಮಾಹಿತಿ ಕೋರಿ ಸಹಾಯವಾಣಿಯನ್ನು ಸಂಪರ್ಕಿಸಿದ್ದಾರೆ.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿಯಲ್ಲಿ ಡಿಎಚ್‌ಓ ಡಾ. ಸುಧೀರ್‌ ಚಂದ್ರ ಸೂಡ ಈ ಬಗ್ಗೆ ಮಾಹಿತಿಗಳನ್ನು ನೀಡಿದರು.

ಈ ಸಹಾಯವಾಣಿ ದಿನದ 24 ಗಂಟೆಗಳ ಕಾಲ ಕಾರ್ಯ ನಿರ್ವಹಿಸಲಿದೆ. ಇದಕ್ಕಾಗಿ 3 ಪಾಳಿಯಲ್ಲಿ ಕಾರ್ಯನಿರ್ವಹಿಸಲು ಒಟ್ಟು 13 ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಕೊರೋನ ಕುರಿತು ಸಂದೇಹ ಬಗೆಹರಿಸಲು ಕೌನ್ಸಿಲರ್ ಸಹ ಇದ್ದು, ಮಾಹಿತಿ ಸಂಗ್ರಹಣೆ, ವಿದೇಶಗಳಿಂದ ಬಂದವರು ಅನುಸರಿಸ ಬೇಕಾದ ಕ್ರಮಗಳು, ಹೋಂ ಕ್ವಾರಂಟೈನ್ ಕುರಿತು ಮಾಹಿತಿ, ಜಿಲ್ಲೆಯ ವಿವಿಧ ಸರಕಾರಿ ಹಾಗೂ ಖಾಸಗಿ ಆರೋಗ್ಯ ಕೇಂದ್ರಗಳ ನಡುವಿನ ಮಾಹಿತಿ ವಿನಿಮಯ ಹಾಗೂ ದಾಖಲೆಗಳ ಕ್ರೂಢೀಕರಣವನ್ನು ಇಲ್ಲಿ ಮಾಡಲಾಗುತ್ತಿದೆ.

ಅಲ್ಲದೇ ಜಿಲ್ಲಾ ಮಟ್ಟದಲ್ಲಿ ಕೊರೋನ ನಿಯಂತ್ರಣ ಕುರಿತಂತೆ ಎಂಟು ತಂಡಗಳನ್ನು ರಚಿಸಲಾಗಿದ್ದು, ತಾಲೂಕು ಹಂತದಲ್ಲಿಯೂ ಸಹ ತಂಡಗಳನ್ನು ರಚಿಸಲಾಗಿದೆ ಎಂದು ಡಾ. ಸುಧೀರ್‌ಚಂದ್ರ ಸೂಡ ಮಾಹಿತಿ ನೀಡಿದರು.

ಈ ಸಹಾಯವಾಣಿ ಕೇಂದ್ರದಲ್ಲಿ ಯಾವುದೇ ಕೊರೋನ ಶಂಕಿತ ರೋಗಿಯ ತಪಾಸಣೆ ನಡೆಸುವುದಿಲ್ಲ. ಆದ್ದರಿಂದ ಸಾರ್ವಜನಿಕರು ಈ ಸಹಾಯವಾಣಿ ಕೇಂದ್ರಕ್ಕೆ ಆಗಮಿಸದಂತೆ ತಿಳಿಸಿದ ಡಿಹೆಚ್‌ಓ, ಕೊರೋನ ಶಂಕಿತ ರೋಗಿಗಳು ಪರೀಕ್ಷೆಗಾಗಿ ಆರೋಗ್ಯ ಇಲಾಖೆಯ ಆಡಳಿತಾತ್ಮಕ ಕಚೇರಿಗೆ ಆಗಮಿಸದೆ, ಸಮೀಪದ ಜಿಲ್ಲಾ ಆಸ್ಪತ್ರೆ, ತಾಲೂಕು ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಅಥವಾ ಸಮುದಾಯ ಆರೋಗ್ಯ ಕೇಂದ್ರಗಳಿಗೆ ತೆರಳಿ ಪರೀಕ್ಷೆ ಗೊಳಪಡಬೇಕು ಹಾಗೂ ಚಿಕಿತ್ಸೆ ಪಡೆಯಬೇಕು. ಆಡಳಿತ ಕಚೇರಿಯಲ್ಲಿ ಚಿಕಿತ್ಸೆ ನೀಡುವ ವೈದ್ಯರಾಗಲಿ, ಉಪಕರಣಗಳು ಇರುವುದಿಲ್ಲ ಎಂದು ತಿಳಿಸಿದರು.

ಕೊರೋನ ಕುರಿತ ಮಾಹಿತಿಯನ್ನು ಜಿಲ್ಲಾಧಿಕಾರಿ ಹಾಗೂ ಡಿಎಚ್‌ಓ ಅವರಿಗೆ ಮಾತ್ರ ನೀಡಲು ಸರಕಾರದ ಆದೇಶವಿರುವುದಿಂದ ಮಾಹಿತಿ ಕೋರಿ ಸಹಾಯವಾಣಿಯನ್ನು ಸಂಪರ್ಕಿಸುವಂತೆ ಡಿಹೆಚ್‌ಓ ಸ್ಪಷ್ಟಪಡಿಸಿದರು.

ಸಾಮಾಜಿಕ ಜಾಲತಾಣಗಳಲ್ಲಿ ಕೊರೋನ ಕುರಿತಂತೆ ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಸೈಬರ್ ಕ್ರೈಂ ಗೆ ದೂರು ನೀಡಲಾಗುವುದು ಎಂದು ಎಚ್ಚರಿಕೆ ನೀಡಿದ ಡಾ. ಸೂಡ ಅಂತಹವರ ವಿರುದ್ಧ ಕೋವಿಡ್ 19- 2020 ನಿಯಂತ್ರಣ ಕಾಯ್ದೆಯನ್ವಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರ ಣಾಧಿಕಾರಿ ಡಾ. ಪ್ರಶಾಂತ್ ಭಟ್, ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ. ಎಂ.ಜಿ.ರಾಮ, ಜಿಲ್ಲಾ ಹಿರಿಯ ಆರೋಗ್ಯ ಮೇಲ್ವಿಚಾರಕ ಸತೀಶ್, ಜಿಲ್ಲಾ ಕೊರೋನ ನಿಯಂತ್ರಣ ಕಾರ್ಯಪಡೆಯ ಸದಸ್ಯರಾದ ಪ್ರೀತಮ್, ಗಿರೀಶ್ ಕಡ್ಡೀಪುಡಿ ಉಪಸ್ಥಿತರಿದ್ದರು.

ಪ್ರಮಾಣ ಪತ್ರ ನೀಡುವುದಿಲ್ಲ

ಜಿಲ್ಲೆಯಿಂದ ವಿದೇಶಗಳಿಗೆ ತೆರಳುವವರು, ತಮಗೆ ಕೊರೋನ ಇಲ್ಲದ ಕುರಿತು ಪ್ರಮಾಣ ಪತ್ರ ನೀಡುವಂತೆ ಆಗಮಿಸುತ್ತಿದ್ದು, ಅಂತಹ ಯಾವುದೇ ಪ್ರಮಾಣಪತ್ರ ನೀಡಲು ಆದೇಶವಿಲ್ಲ ಹಾಗೂ ವಿದೇಶ ಪ್ರಯಾಣಕ್ಕೆ ಯಾವುದೇ ಅನುಮತಿ ಸಹ ನೀಡುವುದಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ವಿದೇಶ ಪ್ರಯಾಣವನ್ನು ಮುಂದೂಡುವುದು ಉತ್ತಮ ಎಂದು ಡಿಎಚ್‌ಓ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News