×
Ad

ಮಂಗಳೂರು: ಸರಕಾರಿ ಸೇವೆ ಸ್ಥಗಿತ-ಜನಸಂಚಾರ ವಿರಳ

Update: 2020-03-20 20:41 IST

ಮಂಗಳೂರು, ಮಾ.20: ಕೊರೋನ ವೈರಸ್ ಭೀತಿಯಿಂದ ತತ್ತರಿಸಿರುವ ಜನತೆಯ ಸುರಕ್ಷತೆಯ ಹಿನ್ನಲೆಯಲ್ಲಿ ಜಿಲ್ಲಾಡಳಿತ ತೆಗೆದುಕೊಂಡ ಮುನ್ನೆಚ್ಚರಿಕೆಗೆ ಅನುಗುಣವಾಗಿ ಶುಕ್ರವಾರ ನಗರದಲ್ಲಿರುವ ಬಹುತೇಕ ಸರಕಾರಿ ಕಚೇರಿಗಳ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಈ ಬಗ್ಗೆ ಇದರ ಅರಿವಿಲ್ಲದೆ ಕಚೇರಿಗಳಿಗೆ ತೆರಳಿದ ಸಾರ್ವಜನಿಕರು ವಾಪಸ್ ಆಗುತ್ತಿದ್ದ ದೃಶ್ಯ ಕಂಡುಬಂತು.

ನಗರದ ಜಿಲ್ಲಾಧಿಕಾರಿ ಕಚೇರಿ, ಮಂಗಳೂರು ಮನಪಾ, ಜಿಪಂ ಕಚೇರಿಗಳು ಎಂದಿನಂತೆ ತೆರೆದಿದ್ದರೂ ಕೂಡ ಭೂಮಿ ನೋಂದಣಿ, ಆಧಾರ್ ಇತ್ಯಾದಿ ಅನೇಕ ಸೇವೆಗಳನ್ನು ಕೊರೋನ ಮುನ್ನೆಚ್ಚರಿಕೆ ಕ್ರಮವಾಗಿ ಸ್ಥಗಿತಗೊಳಿಸಲಾಗಿದೆ. ತುರ್ತು ಸೇವೆಗಳನ್ನು ಮಾತ್ರ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.

ಪಾಲಿಕೆ ಪ್ರವೇಶ ನಿರ್ಬಂಧ: ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ‘ಕೊರೋನ ವೈರಸ್ ಹರಡುವಿಕೆಯನ್ನು ತಡೆಗಟ್ಟುವ ಬಗ್ಗೆ ಜಿಲ್ಲಾಧಿಕಾರಿ ಆದೇಶದಂತೆ ಮಾ.31ರವರೆಗೆ ಪ್ರವೇಶ ನಿಷೇಧಿಸಲಾಗಿದೆ’ ಎಂಬ ಫಲಕವನ್ನು ಪಾಲಿಕೆ ಪ್ರವೇಶದ್ವಾರದಲ್ಲಿ ಅಳವಡಿಸಲಾಗಿದೆ.

ಜನನ ಮರಣ ನೋಂದಣಿ, ಉದ್ದಿಮೆ ಪರವಾನಗಿ ಅರ್ಜಿಗಳನ್ನು ಹಾಕಲು ಹೊರಭಾಗದಲ್ಲಿ ಡಬ್ಬಗಳನ್ನು ಇಡಲಾಗಿದೆ. ಉಳಿದ ತುರ್ತು ಸೇವೆ ಒದಗಿಸಲು ಪಾಲಿಕೆ ಸಿಬ್ಬಂದಿ ಹೊರಗಡೆ ಮೇಜು- ಕುರ್ಚಿಯನ್ನಿಟ್ಟು ಕಾರ್ಯನಿರ್ವಹಿಸುತ್ತಿದ್ದರು.

ಜನಸಂಚಾರ ವಿರಳ: ನಗರದ ವಿವಿಧ ಮಾಲ್, ಶಾಲೆ ಮತ್ತು ಕಾಲೇಜುಗಳು, ಮದುವೆ ಮತ್ತಿತರ ಖಾಸಗಿ ಕಾರ್ಯಕ್ರಮಗಳೆಲ್ಲವೂ ಬಂದ್ ಆಗಿದೆ. ಜನಸಂಚಾರ ಕೂಡ ವಿರಳವಾಗಿದೆ. ಬ್ಯಾಂಕ್‌ಗಳು, ಬಸ್ಸು-ರೈಲು ನಿಲ್ದಾಣಗಳು, ಮಾರುಕಟ್ಟೆ ಪ್ರದೇಶಗಳಲ್ಲಿ ಜನರ ಸಂಖ್ಯೆ ಎಂದಿನಂತಿರಲಿಲ್ಲ. ಗ್ರಾಮಾಂತರ ಪ್ರದೇಶದ ಕೆಲವು ಖಾಸಗಿ ಬಸ್‌ಗಳ ಸಂಚಾರವೂ ಸ್ಥಗಿತಗೊಳಿಸಲಾಗಿದೆ.

ರಾಜ್ಯದಲ್ಲಿ ನಿರ್ಬಂಧ ಹೇರಿ ಒಂದು ವಾರ ಕಳೆದಿದೆ. ಜನ ಸಂಚಾರ ಮತ್ತು ವಾಹನ ಸಂಚಾರ ವಿರಳವಾದ ಕಾರಣ ಮಂಗಳೂರು ಟ್ರಾಫಿಕ್ ಜಾಮ್‌ನಿಂದ ಮುಕ್ತವಾಗಿದೆ. ಈ ಮಧ್ಯೆ ಅಂಗಡಿ-ಮಳಿಗೆಗಳು, ಬೀದಿ ಬದಿಯ ವ್ಯಾಪಾರದಲ್ಲಿ ಕುಸಿತ ಕಂಡು ಬಂದಿದೆ. ಇನ್ನೊಂದೆಡೆ ಜನಸಾಮಾನ್ಯರು ಆಹಾರ ಸಾಮಗ್ರಿಗಳನ್ನು ಅಧಿಕ ಪ್ರಮಾಣದಲ್ಲಿ ಖರೀದಿಸುವ ಭರಾಟೆಯೂ ಹೆಚ್ಚುತ್ತಿವೆ. ಆಹಾರ ಸಾಮಗ್ರಿಗಳಲ್ಲದೆ ಅಡುಗೆ ಅನಿಲ, ಡೀಸೆಲ್-ಪೆಟ್ರೋಲ್ ಇತ್ಯಾದಿಯ ಕೊರತೆಯಾದೀತು ಎಂಬ ಆತಂಕದಲ್ಲಿ ಗ್ರಾಹಕರು ಅವುಗಳನ್ನು ಖರೀದಿಸುತ್ತಿದ್ದಾರೆ.

ಗಡಿಭಾಗದಲ್ಲಿ ನಿರ್ಲಕ್ಷ ? : ಕಾಸರಗೋಡಿನಲ್ಲಿ ಕೊರೋನ ಸೋಂಕು ಪ್ರಕರಣ ಕಂಡು ಬಂದ ಹಿನ್ನಲೆಯಲ್ಲಿ ಗಡಿಭಾಗದಲ್ಲಿ ಅದರಲ್ಲೂ ರಾ.ಹೆ.66ರ ತಲಪಾಡಿಯಲ್ಲಿ ವಾಹನಗಳ ತಪಾಸಣೆ ನಡೆಸಲಾಗುತ್ತದೆ. ಅನಗತ್ಯವಾಗಿ ಗಡಿದಾಟಿ ಹೋಗದಂತೆ ಮುನ್ಸೂಚನೆ ನೀಡಲಾಗುತ್ತದೆ ಎಂದು ತಿಳಿದು ಬಂದಿದೆ.

ಈ ಮಧ್ಯೆ ಗಡಿಭಾಗದಲ್ಲಿ ಉಭಯ ಜಿಲ್ಲೆಗಳ ಜಿಲ್ಲಾಡಳಿತ ವಹಿಸಿಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಅಸಮಾಧಾನ ವ್ಯಕ್ತವಾಗಿದೆ. ಅತ್ತಿಂದಿತ್ತ ಪ್ರಯಾಣಿಸುವ ಪ್ರತಿಯೊಬ್ಬ ಪ್ರಯಾಣಿಕನ ಸ್ಕ್ರೀನಿಂಗ್ ಮಾಡಬೇಕು. ಆದರೆ, ಜಿಲ್ಲಾಡಳಿತ ಇನ್ನೂ ಆ ಕ್ರಮ ಕೈಗೊಂಡಿಲ್ಲ. ಮಂಗಳೂರು ವಿಮಾನ ನಿಲ್ದಾಣದಲ್ಲಿ ಮಾತ್ರ ಸ್ಕ್ರೀನಿಂಗ್ ಮಾಡಿದರೆ ಸಾಲದು. ಕಾಸರಗೋಡಿನಲ್ಲಿ ಕೊರೋನ ವೈರಸ್ ಪತ್ತೆ ಪ್ರಕರಣ ದೃಢಗೊಂಡ ಕಾರಣ ಗಡಿಭಾಗದಲ್ಲಿ ಕೂಡ ಸ್ಕ್ರೀನಿಂಗ್ ಮಾಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News