ಶಿರೂರು ಚೆಕ್ಪೋಸ್ಟ್ನಲ್ಲಿ ಕೊರೋನ ಸ್ಕ್ರೀನಿಂಗ್
ಬೈಂದೂರು, ಮಾ.22: ಮಹಾರಾಷ್ಟ್ರದಲ್ಲಿ ಹೆಚ್ಚುತ್ತಿರುವ ಕೊರೋನ ವೈರಸ್ ಭೀತಿಯಿಂದಾಗಿ ಮುಂಬೈಯಿಂದ ಖಾಸಗಿ ಬಸ್ಗಳಲ್ಲಿ ಊರಿಗೆ ಹೊರಟ ಪ್ರಯಾಣಿಕರನ್ನು ಜಿಲ್ಲೆಯ ಗಡಿ ಪ್ರದೇಶವಾಗಿರುವ ಶಿರೂರಿನಲ್ಲಿ ಚೆಕ್ಪೋಸ್ಟ್ ನಿರ್ಮಿಸಿ ಸ್ಕ್ರೀನಿಂಗ್ ಮಾಡಲಾಗಿದ್ದು, ಈ ವೇಳೆ ಪತ್ತೆಯಾದ ಮೂರು ಮಂದಿ ಶಂಕಿತರನ್ನು ಅಗತ್ಯ ಚಿಕಿತ್ಸೆಗಾಗಿ ಕುಂದಾಪುರ ಹಾಗೂ ಕಾರ್ಕಳ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಾ.22ರಂದು ಬೆಳಗ್ಗೆಯಿಂದ ಸಂಜೆಯವರೆಗೆ 14 ಮುಂಬೈ ಬಸ್ಗಳಲ್ಲಿ ಆಗಮಿಸಿದ ಎಲ್ಲ 568 ಪ್ರಯಾಣಿಕರನ್ನು ತಾಲೂಕು ಆರೋಗ್ಯಾಧಿಕಾರಿ ಡಾ. ನಾಗಭೂಷಣ್ ನೇತೃತ್ವದ ತಂಡ ತಪಾಸಣೆಗೆ ಒಳಪಡಿಸಿದ್ದು, ಇದರ ಉಸ್ತುವಾರಿಯನ್ನು ಕುಂದಾಪುರ ಎಸಿ ಹಾಗೂ ಬೈಂದೂರು ತಹಶೀಲ್ದಾರ್ ಇದರ ವಹಿಸಿದ್ದರು.
ಥರ್ಮಲ್ ಗನ್ ಮೂಲಕ ಪ್ರತಿಯೊಬ್ಬ ಪ್ರಯಾಣಿಕನ ಟೆಂಪರೇಚರ್ಗಳನ್ನು ಪರೀಕ್ಷಿಸಿದ್ದು, ಮಿತಿಗಿಂತ ಹೆಚ್ಚಿನ ಟೆಂಪರೇಚರ್, ಶೀತ, ಕೆಮ್ಮು ಇರುವ ಮೂವರು ಶಂಕಿತರನ್ನು ಗುರುತಿಸಲಾಗಿದೆ. ಇವರನ್ನು ಆರೋಗ್ಯಾಧಿಕಾರಿಗಳ ಸೂಚನೆಯಂತೆ ಕುಂದಾಪುರ ಹಾಗೂ ಕಾರ್ಕಳ ಆಸ್ಪತ್ರೆಯ ಐಸೋಲೆಟೆಡ್ ವಾರ್ಡ್ಗೆ ದಾಖಲಿಸಿ ಪರೀಕ್ಷೆಗೆ ಒಳಪಡಿಸಲಾಗಿದೆ. ಅದೇ ರೀತಿ ಬಸ್ಸಿನಲ್ಲಿದ್ದ ಉಳಿದ ಪ್ರಯಾಣಿಕರಿಂದ ಅಫಿದವಿತ್ ತೆಗೆದುಕೊಂಡು ವಿಳಾಸ, ಮೊಬೈಲ್ ನಂಬರ್ ಹಾಗೂ ಇತರ ಮಾಹಿತಿಗಳನ್ನು ಸಂಗ್ರಹಿಸಲಾಗಿದೆ. ಇವರಿಗೆಲ್ಲ ಮನೆಯಲ್ಲೇ ಉಳಿದುಕೊಳ್ಳುಂತೆ ನಿರ್ಬಂಧ ವಿಧಿಸಿ ನಿಗಾ ಇರಿಸಲಾಗಿದೆ.
‘ಮುಂಬೈಯಿಂದ ಆಗಮಿಸುತ್ತಿರುವ ಬಸ್ಗಳ ಬಗ್ಗೆ ಮಾಹಿತಿ ಪಡೆದು ಅವು ಗಳನ್ನು ಬೆಳಗಾಂನಲ್ಲಿಯೇ ತಡೆಯುವ ಪ್ರಯತ್ನ ಮಾಡಲಾಗಿತ್ತು. ಆದರೆ ಆಗಾಗಲೇ ಐದು ಬಸ್ಗಳು ನಮ್ಮ ಗಡಿಯವರೆಗೂ ಬಂದಿತ್ತು. ಆದುದರಿಂದ ತಕ್ಷಣ ಶಿರೂರು ಗಡಿ ಪ್ರದೇಶದಲ್ಲಿ ಚೆಕ್ಪೋಸ್ಟ್ ನಿರ್ಮಿಸಿ ಆ ಬಸ್ಸಿನಲ್ಲಿದ್ದವರನ್ನು ತಪಾಸಣೆಗೆ ಒಳಪಡಿಸಲಾಗಿದೆ. ಶಂಕಿತರನ್ನು ಅಗತ್ಯ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯ ತಂಡ ಗಡಿಯಲ್ಲಿ ಕಾರ್ಯೋನ್ಮುಖವಾಗಿದೆ’ ಎಂದು ಜಿಲ್ಲಾಧಿಕಾರಿ ಜಗದೀಶ್ ತಿಳಿಸಿದರು.
ಈ ಬಸ್ಗಳಲ್ಲಿ ಮುಂಬೈಯಿಂದ ಆಗಮಿಸಿದ ದ.ಕ. ಜಿಲ್ಲೆಯ ಪ್ರಯಾಣಿಕ ರಿದ್ದರೆ ನಮ್ಮ ಗಮನಕ್ಕೆ ತರುವಂತೆ ದ.ಕ. ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಇನ್ನೊಂದು ಚೆಕ್ಪೋಸ್ಟ್ನ್ನು ಟೋಲ್ಗೇಟ್ ಹೆಜಮಾಡಿ ಬಳಿ ಸ್ಥಾಪಿಸಿ ತಪಾ ಸಣೆ ನಡೆಸಲಾಗುತ್ತಿದೆ. ಇಲ್ಲಿ ಬೆಂಗಳೂರಿನಿಂದ ಆಗಮಿಸುವ ಬಸ್ಗಳನ್ನು ಸದ್ಯ ತಪಾಸಣೆ ಮಾಡುತ್ತಿಲ್ಲ. ದ.ಕ. ಜಿಲ್ಲೆಯಲ್ಲಿ ಗಡಿ ಬಂದ್ ಮಾಡಿರುವುದ ರಿಂದ ಕೇರಳದಿಂದ ಯಾರು ಜಿಲ್ಲೆಗೆ ಬರುತ್ತಿಲ್ಲ ಎಂದರು.