×
Ad

ಕಾಪು: ಸುಗ್ಗಿ ಮಾರಿಪೂಜೆ ಜಾತ್ರೆ ರದ್ದು

Update: 2020-03-23 20:17 IST

ಉಡುಪಿ, ಮಾ. 23: ಉಡುಪಿ ಜಿಲ್ಲೆಯಲ್ಲಿ ಕೊರೋನ (ಕೋವಿಡ್-19) ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮದ ಬಗ್ಗೆ ಜಿಲ್ಲೆಯಾದ್ಯಂತ ಸಿಆರ್‌ಪಿಸಿ 144(3) ಸೆಕ್ಷನ್‌ನ್ನು ಜಿಲ್ಲಾಧಿಕಾರಿ ಜಾರಿಗೊಳಿಸಿದ್ದು, ಇದರಿಂದ ಕಾಪು ತಾಲೂಕಿನ ಪಡು ಹಾಗೂ ಉಳಿಯಾರಗೋಳಿ ಗ್ರಾಮ ದಲ್ಲಿರುವ ಹಳೆ ಮಾರಿಗುಡಿ, ಹೊಸ ಮಾರಿಗುಡಿ ಹಾಗೂ ಮೂರನೇ ಮಾರಿಗುಡಿ ದೇವಸ್ಥಾನದಲ್ಲಿ ಮಾ.24 ಹಾಗೂ 25ರಂದು ನಡೆಯಬೇಕಿದ್ದ ಸುಗ್ಗಿ ಮಾರಿಪೂಜೆ ಯನ್ನು ರದ್ದುಪಡಿಸಲಾಗಿದೆ.

ಉಡುಪಿ ಮತ್ತು ಕಾಪು ತಾಲೂಕುಗಳಲ್ಲಿ ಭಾರೀ ಜನರನ್ನು ಸೆಳೆಯುವ ಮಾರಿಪೂಜೆ ಜಾತ್ರೆಗೆ ಸುತ್ತಮುತ್ತಲಿನ ಗ್ರಾಮಸ್ಥರಲ್ಲದೇ ಹೊರ ಜಿಲ್ಲೆಯ ಭಕ್ತಾದಿಗಳು ಸೇರಿದಂತೆ ಲಕ್ಷಾಂತರ ಜನ ಬರುವ ಸಂಪ್ರದಾಯ ಇದ್ದು, ಜಾತ್ರೆ ಯಲ್ಲಿ ಭಕ್ತಾದಿಗಳು ಕೋಳಿ, ಕುರಿ, ಆಡು ಇತರ ಹರಕೆ ಸೇವೆ ನೀಡುವ ಸಂಪ್ರದಾಯವಿದೆ.

ಈ ವರ್ಷ ಕೊರೋನ ವೈರಸ್ ವ್ಯಾಪಿಸಿರುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಸಾರ್ವಜನಿಕ ಹಿತದೃಷ್ಟಿಯಿಂದ ಜಾತ್ರೆ ನಡೆಯುವುದನ್ನು ನಿಷೇಧಿಸಲಾಗಿದೆ. ಈ ದಿನಗಳಂದು ಸುಗ್ಗಿ ಮಾರಿಪೂಜೆಯನ್ನು ದೇವಳ ಸಮಿತಿ ಸದಸ್ಯರು, ಅರ್ಚಕರು ಮತ್ತು ಸಿಬ್ಬಂದಿ ವರ್ಗದವರು ಮಾತ್ರ ಸರಳವಾಗಿ ಆಚರಿಸುವಂತೆ ಈಗಾಗಲೇ ನಿರ್ದೇಶನ ನೀಡಲಾಗಿದೆ.

ಸುಗ್ಗಿ ಮಾರಿಪೂಜೆ ಜಾತ್ರಾ ದಿನದಂದು ಯಾವುದೇ ಬಲಿ ಅರ್ಪಿಸುವ ಹರಕೆ ಸೇವೆಯನ್ನು ಹಾಗೂ ಕೋಳಿ, ಕುರಿ, ಆಡು ಇತರೆ ಮಾರಾಟವನ್ನು ನಿರ್ಬಂಧಿಸಲಾಗಿದೆ. ಜಾತ್ರೆಯ ಎರಡು ದಿನಗಳಲ್ಲಿ ಕಾಪು ಪುರಸಭೆ ವ್ಯಾಪ್ತಿಯ ಎಲ್ಲಾ ಮಾಂಸದಂಗಡಿ, ಚಿಕನ್‌ಸ್ಟಾಲ್, ಕೋಳಿ ಫಾರ್ಮ್ ಮುಚ್ಚುವಂತೆ ಹಾಗೂ ಕಾಪು ಪುರಸಭೆ ಪ್ರವೇಶಿಸುವ ಎಲ್ಲಾ ಮಾರ್ಗಗಳಲ್ಲಿ ಕೋಳಿ, ಆಡು, ಕುರಿ ಸಾಗಾಟ ವಾಹನಗಳು ಪ್ರವೇಶಿಸುವುದನ್ನು ಜಿಲ್ಲಾಧಿಕಾರಿ ಜಿ. ಜಗದೀಶ್ ತಮ್ಮ ಆದೇಶದಲ್ಲಿ ನಿರ್ಬಂಧಿಸಿದ್ದಾರೆ.

ದೇವಸ್ಥಾನದ ಆಡಳಿತ ಸಮಿತಿಯವರು ಮುಂದಿನ ದಿನಗಳಲ್ಲಿ ಸುಗ್ಗಿ ಮಾರಿಪೂಜೆ ಆಚರಣೆ ಬಗ್ಗೆ ನಿರ್ಧರಿಸಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಕಾಪು ತಹಶೀಲ್ದಾರರ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News