ಶುಕ್ರವಾರ ಜುಮಾ ಬದಲು ಮನೆಯಲ್ಲೇ ನಮಾಝ್ ನಿರ್ವಹಿಸಲು ಖಾಝಿ ತ್ವಾಕ ಅಹ್ಮದ್, ಬೇಕಲ ಇಬ್ರಾಹೀಂ ಮುಸ್ಲಿಯಾರ್ ಕರೆ

Update: 2020-03-26 12:40 GMT

ಮಂಗಳೂರು, ಮಾ. 26: ಕೊರೋನ ವೈರಸ್ ತಡೆಗಟ್ಟುವುದಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರಕಾರ ನಡೆಸುತ್ತಿರುವ ಮುಂಜಾಗ್ರತಾ ಕ್ರಮಕ್ಕೆ ಪೂರಕವಾಗಿ ಮತ್ತು ದೇಶದ, ಸಮಾಜದ ಹಿತದೃಷ್ಟಿಯಿಂದ ದಿನದ ಐದು ಬಾರಿಯ ನಮಾಝ್ ಅಲ್ಲದೆ ಶುಕ್ರವಾರದ ಜುಮಾ ನಮಾಝನ್ನು ಕೂಡ ಮನೆಯಲ್ಲೇ ನಿರ್ವಹಿಸುವಂತೆ ಖಾಝಿಗಳಾದ ತ್ವಾಕ ಅಹ್ಮದ್ ಮುಸ್ಲಿಯಾರ್ ಮತ್ತು ಬೇಕಲ ಇಬ್ರಾಹೀಂ ಮುಸ್ಲಿಯಾರ್ ಕರೆ ನೀಡಿದ್ದಾರೆ.

ಜನಸಂದಣಿಯಿರುವ ಕಡೆ ರೋಗ ಹರಡುವ ಸಾಧ್ಯತೆ ಇದೆ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ. ಈ ನಿಟ್ಟಿನಲ್ಲಿ ಆಡಳಿತ ವ್ಯವಸ್ಥೆಯು ಮಸೀದಿಗಳಲ್ಲೂ ಕೂಡ ಹೆಚ್ಚಿನ ಜನರು ಸೇರದಂತೆ ಸೂಚಿಸಿದೆ. ಸಮಾಜದ ಹಿತದೃಷ್ಟಿಯಿಂದ ಇದನ್ನು ಎಲ್ಲರೂ ಪಾಲಿಸುವ ಅಗತ್ಯವಿದೆ. ಹಾಗಾಗಿ ಮಸೀದಿಯಲ್ಲಿ ಶುಕ್ರವಾರದ ಜುಮಾ ನಮಾಝ್‌ನ ಬದಲು ತಮ್ಮ ಮನೆಗಳಲ್ಲೇ ಳುಹ್‌ರ್ ನಮಾಝ್ ನಿರ್ವಹಿಸಲು ಮನವಿ ಮಾಡಿದ್ದಾರೆ.

ಕೊರೋನ ತಡೆಗಟ್ಟಲು ಕೇಂದ್ರ ಮತ್ತು ರಾಜ್ಯ ಸರಕಾರಗಳ ಮುಂಜಾಗ್ರತಾ ಕ್ರಮಗಳಿಗೆ ಸಂಪೂರ್ಣವಾಗಿ ಸಹಕರಿಸುವುದು ಎಲ್ಲರ ಕರ್ತವ್ಯವಾಗಿದೆ. ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಶುಕ್ರವಾರದ ಕಡ್ಡಾಯ ಜುಮಾ ನಮಾಝ್ ಬದಲು ಎಲ್ಲರೂ ತಮ್ಮ ಮನೆಯಲ್ಲೇ ಳುಹರ್ ನಮಾಝ್ ನಿರ್ವಹಿಸಬೇಕು ಎಂದು ಸಮಸ್ತ ಅಧ್ಯಕ್ಷ ಸೈಯದ್ ಮುಹಮ್ಮದ್ ಜಿಫ್ರಿ ಮುತ್ತು ಕೋಯ ತಂಙಳ್, ಉಪಾಧ್ಯಕ್ಷ ಹೈದರಲಿ ಶಿಹಾಬ್ ತಂಙಳ್ ಪಾಣಕ್ಕಾಡ್, ಕಾರ್ಯದರ್ಶಿ ಪ್ರೊ.ಕೆ. ಆಲಿಕುಟ್ಟಿ ಮುಸ್ಲಿಯಾರ್ ಕರೆ ನೀಡಿದ್ದಾರೆ.

ಕೊರೋನ ಹಿನ್ನೆಲೆಯಲ್ಲಿ ಶುಕ್ರವಾರ ಜುಮಾ ನಮಾಝನ್ನು ಮನೆಯಲ್ಲೆ ನಿರ್ವಹಿಸುವಂತೆ ಸಮಸ್ತ ಕೇರಳ ಜಂ-ಇಯ್ಯತುಲ್ ಉಲಮಾ ಕೇಂದ್ರ ಮುಶಾವರ ಸದಸ್ಯ ಹಾಗೂ ಸಮಸ್ತ ಕರ್ನಾಟಕ ಮುಶಾವರ ಪ್ರಧಾನ ಕಾರ್ಯದರ್ಶಿ ಶೈಖುನಾ ಬಂಬ್ರಾಣ ಉಸ್ತಾದ್ ಕರೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News