​ಇನ್ಫೋಸಿಸ್‌ನಿಂದ ದ.ಕ.ಜಿಲ್ಲೆಗೆ ವೈದ್ಯಕೀಯ ಸಾಮಗ್ರಿಗಳ ಪೂರೈಕೆ

Update: 2020-03-28 16:51 GMT

ಮಂಗಳೂರು, ಮಾ.28: ದ.ಕ. ಜಿಲ್ಲೆಯಲ್ಲಿ ಕೊರೋನ ವೈರಸ್‌ನ 7 ಪ್ರಕರಣಗಳು ದೃಢಗೊಳ್ಳುವುದರೊಂದಿಗೆ ಭೀತಿಯ ವಾತಾವರಣ ಸೃಷ್ಟಿಸಿದೆ. ಇದನ್ನು ಮನಗಂಡ ಇನ್ಪೋಸಿಸ್ ಫೌಂಡೇಶನ್ ಅಧ್ಯಕ್ಷೆ ಡಾ. ಸುಧಾಮೂರ್ತಿ ಜಿಲ್ಲೆಗೆ 28 ಲಕ್ಷ ರೂ. ಮೌಲ್ಯದ ವೈದ್ಯಕೀಯ ಸಾಮಗ್ರಿಗಳನ್ನು ಒದಗಿಸಿ ನೆರವಿನ ಹಸ್ತ ಚಾಚಿದ್ದಾರೆ.

ರಾಜ್ಯದಲ್ಲಿ ಉಂಟಾದ ನೆರೆ ಪ್ರವಾಹ ಹಾಗೂ ಇನ್ನಿತರ ಸಂದರ್ಭಗಳಲ್ಲಿ ಇನ್ಫೋಸಿಸ್ ಸಂಸ್ಥೆ ಸಮಾಜಕ್ಕೆ ನೆರವಿನ ಹಸ್ತ ಚಾಚುತ್ತಾ ಬಂದಿದೆ. ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆಯು ಇದೀಗ ಕೊರೋನ ಚಿಕಿತ್ಸೆ ನಿರ್ವಹಣೆಗೆ ರಾಜ್ಯದ ಒಂದು ಆಸ್ಪತ್ರೆಯನ್ನು ತಮಗೆ ವಹಿಸಿ ಕೊಡುವಂತೆ ರಾಜ್ಯ ಸರಕಾರಕ್ಕೆ ಮನವಿ ಮಾಡಿದ್ದರು.

ದ.ಕ.ಜಿಲ್ಲೆಯಲ್ಲಿ ಕೊರೋನ ಪಾಸಿಟಿವ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ತುರ್ತು ವೈದ್ಯಕೀಯ ಸಾಮಾಗ್ರಿಗಳ ನೆರವಿಗಾಗಿ ದ.ಕ. ಜಿಲ್ಲಾಡಳಿತದ ಪರವಾಗಿ ನಗರದ ಪೊಲೀಸ್ ಆಯುಕ್ತರು ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಡಾ. ಸುಧಾಮೂರ್ತಿ ಬಳಿ ನೆರವು ನೀಡುವಂತೆ ವಿನಂತಿಸಿಕೊಂಡಿದ್ದರು. ಅದರಂತೆ ಡಾ.ಸುಧಾಮೂರ್ತಿ ಪೊಲೀಸ್ ಇಲಾಖೆಯ ಕೋರಿಕೆಗೆ ಕೇವಲ 36 ಗಂಟೆಯೊಳಗೆ 28 ಲಕ್ಷ ರೂ. ಗಳ ತುರ್ತು ವೈದ್ಯಕೀಯ ಸಾಮಾಗ್ರಿಗಳನ್ನು ಜಿಲ್ಲೆಯ ಜನತೆಯ ನೆರವಿಗಾಗಿ ಕಳುಹಿಸಿದ್ದಾರೆ. ಇನ್ಫೋಸಿಸ್ ಫೌಂಡೇಶನ್‌ನ ರಾಮದಾಸ್ ಕಾಮತ್ ಹಾಗೂ ಅವರ ತಂಡ ಈ ನಿಟ್ಟಿನಲ್ಲಿ ಶ್ರಮಿಸಿದೆ ಎಂದು ಪೊಲೀಸ್ ಆಯುಕ್ತ ಹರ್ಷ ತಿಳಿಸಿದ್ದಾರೆ.

1,65,000 ಮಾಸ್ಕ್, 5,000 ಬಾಟಲ್ ಸ್ಯಾನಿಟೈಸರ್, 85 ಗಾಗಲ್ಸ್, 3 ಬ್ಲಾಕ್ ಸರ್ಜಿಕಲ್ ಗ್ಲೌಸ್, 50 ಕ್ಯಾಪ್‌ಗಳು, 30 ಪೂರ್ತಿ ಕಾಲು ಮುಚ್ಚುವಂತ ವೈದ್ಯಕೀಯ ವಸ್ತುಗಳು, 2,000 ಎನ್ 95 ಮಾಸ್ಕ್, 300 ಫಾಗ್ ಫ್ರೀ ಮಾಸ್ಕ್, 60 ವಿಶೇಷ ಮಾದರಿಯ ಸರ್ಜಿಕಲ್ ಗ್ಲೌಸ್ ಮೊದಲಾದ ವಸ್ತುಗಳನ್ನು ಕಳುಹಿಸಿದ್ದಾರೆ. ಕೊರೋನ ವಿರುದ್ಧ ಶ್ರಮಿಸುತ್ತಿರುವ ವೈದ್ಯರು, ನರ್ಸ್‌ಗಳು, ಪೊಲೀಸರು, ಆಶಾ ಕಾರ್ಯಕರ್ತೆ ಯರು ಹಾಗೂ ಸ್ವಯಂ ಸೇವಕರು ಈ ವಸ್ತುಗಳನ್ನು ಬಳಸಿಕೊಳ್ಳಲಿದ್ದಾರೆ. ಮೆಡಿಕಲ್‌ಗಳಲ್ಲಿ ಮಾಸ್ಕ್ ಹಾಗೂ ಸ್ಯಾನಿಟೈಸರ್ ಸ್ಟಾಕ್ ಇಲ್ಲದೆ ಸಮಸ್ಯೆಯಾಗಿತ್ತು.

ಸಚಿವ, ಸಂಸದರಿಂದ ಕೃತಜ್ಞತೆ: ಜಿಲ್ಲೆಯ ಜನರಿಗೆ ತುರ್ತು ಸ್ಪಂದನೆ ನೀಡಿದ ಡಾ.ಸುಧಾಮೂರ್ತಿಹಾಗೂ ರಾಮದಾಸ್ ಕಾಮತ್ ಮತ್ತು ತಂಡಕ್ಕೆ ದ.ಕ.ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಂಸದ ನಳಿನ್ ಕುಮಾರ್ ಕಟೀಲು ಹಾಗೂ ಪೊಲೀಸ್ ಆಯುಕ್ತ ಡಾ.ಹರ್ಷ ಪಿ.ಎಸ್. ಕೃತಜ್ಞತೆ ಸಲ್ಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News