​ಭಾರತದಲ್ಲಿ ಸಾವಿರದ ಗಡಿ ದಾಟಿದ ಕೊರೋನ ಸೋಂಕಿತರ ಸಂಖ್ಯೆ

Update: 2020-03-29 03:56 GMT

ಹೊಸದಿಲ್ಲಿ : ದೇಶದಲ್ಲಿ ಕೋವಿಡ್-19 ವೈರಸ್ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 27ಕ್ಕೇರಿದ್ದು, ದೆಹಲಿ, ಕೇರಳ, ತೆಲಂಗಾಣ, ಗುಜರಾತ್ ಹಾಗೂ ಮಹಾರಾಷ್ಟ್ರದಲ್ಲಿ ತಲಾ ಒಂದು ಸಾವು ಸಂಭವಿಸಿರುವುದನ್ನು ರಾಜ್ಯಗಳು ದೃಢಪಡಿಸಿವೆ.

ಈ ಮಧ್ಯೆ ದೇಶದಲ್ಲಿ ಸೋಂಕಿತರ ಸಂಖ್ಯೆ ಸಾವಿರದ ಗಡಿ ದಾಟಿದೆ. ವಿಶ್ವಾದ್ಯಂತ 30 ಸಾವಿರಕ್ಕೂ ಅಧಿಕ ಮಂದಿಯ ಜೀವ ಬಲಿ ಪಡೆದಿರುವ ಕೊರೋನ ವೈರಸ್ ನಿಯಂತ್ರಣ ಭಾರತಕ್ಕೆ ಸವಾಲುದಾಯಕವಾಗಿದೆ.

ಮಹಾರಾಷ್ಟ್ರದಲ್ಲಿ ಒಂದೇ ದಿನ 33 ಪ್ರಕರಣಗಳು ಬೆಳಕಿಗೆ ಬಂದಿದ್ದು, ಒಟ್ಟು 186 ಹೊಸ ಪ್ರಕರಣಗಳು ದೃಢಪಟ್ಟಿವೆ. ಸೋಂಕಿತರ ಸಂಖ್ಯೆಯಲ್ಲಿ ಮಹಾರಾಷ್ಟ್ರ ದೇಶದಲ್ಲೇ ಅಗ್ರಸ್ಥಾನದಲ್ಲಿದೆ. ಉಳಿದಂತೆ ಕೇರಳದಲ್ಲಿ 182, ತೆಲಂಗಾಣದಲ್ಲಿ 67 ಹಾಗೂ ಕರ್ನಾಟಕದಲ್ಲಿ 76 ಪ್ರಕರಣಗಳು ದೃಢಪಟ್ಟಿವೆ. ರಾಜ್ಯಗಳಿಂದ ಪಡೆದ ಅಂಕಿ ಅಂಶಗಳ ಪ್ರಕಾರ ದೇಶದಲ್ಲಿ 135 ಹೊಸ ಪ್ರಕರಣಗಳು ಶನಿವಾರ ವರದಿಯಾಗಿದ್ದು, ಈ ಪೈಕಿ 918 ಪ್ರಕರಣಗಳನ್ನು ಆರೋಗ್ಯ ಸಚಿವಾಲಯ ದೃಢಪಡಿಸಿದೆ. ಈವರೆಗೆ ವರದಿಯಾದ ಪ್ರಕರಣಗಳ ಪೈಕಿ ಶೇಕಡ 10ರಷ್ಟು ಮಂದಿ ಅಂದರೆ 94 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ಮಾ. 16ರಂದು ದುಬೈನಿಂದ ಬಂದಿದ್ದ ವ್ಯಕ್ತಿ ಕೇರಳದಲ್ಲಿ, ಯೆಮನ್ ಪ್ರಜೆ ದೆಹಲಿಯ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿರುವುದನ್ನು ಸಚಿವಾಲಯ ಕೊರೋನ ಸಾವಿನ ಪ್ರಕರಣ ಎಂದು ದೃಢಪಡಿಸಿದೆ. ಮಹಾರಾಷ್ಟ್ರದಲ್ಲಿ ಒಟ್ಟು ಆರು ಮಂದಿ ಬಲಿಯಾಗಿದ್ದು, ನಾಲ್ಕು ಸಾವುಗಳು ಗುಜರಾತ್‌ನಲ್ಲಿ ಸಂಭವಿಸಿವೆ. ಶನಿವಾರ 46 ವರ್ಷ ವಯಸ್ಸಿನ ಮಹಿಳೆಯೊಬ್ಬರು ಗುಜರಾತ್‌ನಲ್ಲಿ ಸೋಂಕಿನ ಕಾರಣದಿಂದ ಮೃತಪಟ್ಟಿದ್ದಾರೆ.

ತೆಲಂಗಾಣದಲ್ಲಿ 74 ವರ್ಷದ ವ್ಯಕ್ತಿಯೊಬ್ಬರು ಕೋವಿಡ್-19ಗೆ ಬಲಿಯಾಗಿದ್ದು, ರಾಜ್ಯದ ಮೊಟ್ಟಮೊದಲ ಕೊರೋನಾ ಸಾವು ದಾಖಲಾದಂತಾಗಿದೆ. ರಾಜ್ಯದಲ್ಲಿ ಶನಿವಾರ ಆರು ಹೊಸ ಪ್ರಕರಣಗಳು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 65ಕ್ಕೇರಿದೆ. ಉತ್ತರ ಪ್ರದೇಶದಲ್ಲಿ 11 ಪ್ರಕರಣ ದೃಢಪಟ್ಟಿದ್ದು, ರಾಜ್ಯದ ಒಟ್ಟು ಸೋಂಕಿರ ಸಂಖ್ಯೆ 27ಕ್ಕೆ ತಲುಪಿದೆ. ಕಾಶ್ಮೀರದಲ್ಲಿ ಒಂದೇ ದಿನ 13 ಪ್ರಕರಣ ಬೆಳಕಿಗೆ ಬಂದಿದ್ದು, ಒಟ್ಟು ಸೋಂಕಿತ ಸಂಖ್ಯೆ 33ಕ್ಕೇರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News