ಟಾಸ್ಕ್ ಪೋರ್ಸ್ ಕ್ರಿಯಾಶೀಲಗೊಳಿಸಿ: ಸಚಿವ ಕೋಟ

Update: 2020-03-30 16:16 GMT

ಬಂಟ್ವಾಳ, ಮಾ.30: ಸರಕಾರ ಸೂಚಿಸಿದ ಪ್ರತಿ ಗ್ರಾಪಂ ಮತ್ತು ಸ್ಥಳೀಯಾಡಳಿತ ಮಟ್ಟದ ಟಾಸ್ಕ್ ಫೋರ್ಸ್ ಅನ್ನು ಕ್ರಿಯಾಶೀಲಗೊಳಿಸಬೇಕು, ಸಮರೋಪಾದಿಯಲ್ಲಿ ಲಾಕ್ ಡೌನ್ ಸಂದರ್ಭ ಜನರಿಗೆ ಸಂಕಷ್ಟಗಳು ಬಾರದಂತೆ ಕ್ರಮ ವಹಿಸಬೇಕು ಎಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಸೋಮವಾರ ಬೆಳಗ್ಗೆ ಬಂಟ್ವಾಳ ಶಾಸಕರ ಕಚೇರಿಯಲ್ಲಿ ಕೋರೋನ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ತಾಲೂಕು ಮಟ್ಟದ ಅಧಿಕಾರಿಗಳ ಸಿದ್ಧತಾ ಸಭೆಯಲ್ಲಿ ಅವರು ಮಾತನಾಡಿ, ತುರ್ತು ಅಗತ್ಯವುಳ್ಳ ಅವಶ್ಯಕ ಸೇವೆಯವರಿಗೆ ಪಂಚಾಯತ್ ಮಟ್ಟದಲ್ಲಿ ಅನುಮತಿ ಪತ್ರ ನೀಡಲು ಸೂಚಿಸಲಾಗಿದ್ದು, ಪ್ರತಿಯೊಂದು ಗ್ರಾಮ ಪಂಚಾಯಿತಿಗಳಲ್ಲಿ ರಚನೆಯಾಗಿರುವ ಟಾಸ್ಕ್ ಫೋರ್ಸ್ ಜವಾಬ್ದಾರಿಯುತವಾಗಿ ಕೆಲಸ ನಿರ್ವಹಿಸ ಬೇಕು ಎಂದರು. ಕೇವಲ ಗ್ರಾಪಂ ಅಷ್ಟೇ ಅಲ್ಲ, ಪುರಸಭೆಯಲ್ಲೂ ಟಾಸ್ಕ್ ಫೋರ್ಸ್ ರಚನೆ ಆಗಬೇಕು, ಯಾವುದೇ ಎನ್.ಜಿ.ಒ.ಗಳಿಗೆ ಜವಾಬ್ದಾರಿ ವಹಿಸಬೇಡಿ. ಸರಕಾರದ ಪ್ರತಿನಿಧಿಗಳಷ್ಟೇ ಕೆಲಸ ನಿರ್ವಹಿಸತಕ್ಕದ್ದು ಎಂದು ಕೋಟ ಹೇಳಿದರು.

ಕಾರ್ಮಿಕರನ್ನು ಕರೆದುಕೊಂಡು ಬಂದ ಗುತ್ತಿಗೆದಾರರು ಅವರ ಸುರಕ್ಷತೆ ಹಾಗೂ ಉಳಿದುಕೊಳ್ಳುವ ವ್ಯವಸ್ಥೆಯ ಜವಾಬ್ದಾರರಾಗುತ್ತಾರೆ. ಯಾವುದೇ ಗುತ್ತಿಗೆದಾರನಿಲ್ಲದೆ ಸ್ವತಂತ್ರವಾಗಿರುವ ಕಾರ್ಮಿಕ ತೊಂದರೆಗೊಳಗಾದರೆ ಆತನಿಗೂ ಪೂರಕ ವ್ಯವಸ್ಥೆ ಕಲ್ಪಿಸುವ ಜವಾಬ್ದಾರಿ ಟಾಸ್ಕ್ ಫೋರ್ಸ್ ಗಿದೆ ಎಂದು ಹೇಳಿದ ಕೋಟ, ಈ ಕುರಿತು ಕೂಡಲೇ ಸರ್ವೆ ನಡೆಸಿ, ಎಲ್ಲೆಲ್ಲಿ ಅವಶ್ಯಕ ಜಾಗವಿದೆಯೋ ಅಲ್ಲಿ ವ್ಯವಸ್ಥೆ ಕಲ್ಪಿಸುವಂತೆ ಸಲಹೆ ನೀಡಿದರು.

ಸಂಸದ ನಳಿನ್ ಕುಮಾರ್ ಕಟೀಲ್, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್, ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಬಿ.ಎಂ.ಅಬ್ಬಾಸ್ ಆಲಿ, ಬುಡಾ ಅಧ್ಯಕ್ಷ ಬಿ.ದೇವದಾಸ ಶೆಟ್ಟಿ, ತಹಶೀಲ್ದಾರ್ ರಶ್ಮಿ ಎಸ್.ಆರ್, ತಾಪಂ ಇಒ ರಾಜಣ್ಣ, ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಾ ಪ್ರಭು, ಪೊಲೀಸ್ ಡಿವೈಎಸ್ಪಿ ವೆಲಂಟೈನ್ ಡಿಸೋಜ, ಸರ್ಕಲ್ ಇನ್ಸ್ ಪೆಕ್ಟರ್ ಸಿ.ಡಿ. ನಾಗರಾಜ್, ಪುರಸಭೆ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೊ, ಆಹಾರ ಇಲಾಖೆ ಅಧಿಕಾರಿ ಶ್ರೀನಿವಾಸ್ ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News