ದ.ಕ.ಜಿಲ್ಲೆ: ಮತ್ತೆ 17 ಮಂದಿಯ ಗಂಟಲಿನ ದ್ರವ ಪ್ರಯೋಗಾಲಯಕ್ಕೆ ರವಾನೆ
Update: 2020-03-31 17:30 GMT
ಮಂಗಳೂರು, ಮಾ.31: ಕೊರೋನ ವೈರಸ್ ತಡೆಯುವ ನಿಟ್ಟಿನಲ್ಲಿ ದ.ಕ.ಜಿಲ್ಲಾಡಳಿತದ ನಿರ್ದೇಶನದ ಮೇರೆಗೆ ವೈದ್ಯಕೀಯ ತಂಡವು ಕಟ್ಟುನಿಟ್ಟಿನ ಆರೋಗ್ಯ ತಪಾಸಣೆ ಮಾಡುತ್ತಿದೆ. ಅದರಂತೆ ಮಂಗಳವಾರ 17 ಮಂದಿಯ ಗಂಟಲಿನ ದ್ರವವನ್ನು ಪರೀಕ್ಷೆಗಾಗಿ ಪ್ರಯೋಗಾ ಲಯಕ್ಕೆ ರವಾನೆ ಮಾಡಲಾಗಿದೆ.
ಮಂಗಳವಾರ ಸ್ವೀಕರಿಸಲ್ಪಟ್ಟ 9 ಮಂದಿಯ ವರದಿಯಲ್ಲಿ 8 ಮಂದಿಯ ವರದಿಯು ನೆಗೆಟಿವ್ ಮತ್ತು ಒಬ್ಬ ವ್ಯಕ್ತಿಯ ವರದಿಯು ಪೊಸಿಟಿವ್ ಆಗಿದೆ. ಮಂಗಳವಾರ 41 ಮಂದಿಯ ಸ್ಕ್ರೀನಿಂಗ್ ಮಾಡಲಾಗಿದ್ದು, ಇದರೊಂದಿಗೆ ಈವರೆಗೆ 38,320 ಮಂದಿಯ ಸ್ಕ್ರೀನಿಂಗ್ ಮಾಡಲಾಗಿದೆ. ಈವರೆಗೆ 5,875 ಮಂದಿ ಹೋಂ ಕ್ವಾರಂಟೈನ್ನಲ್ಲಿದ್ದಾರೆ. ಇಎಸ್ಐ ಆಸ್ಪತ್ರೆಯಲ್ಲಿ 28 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಂಗಳವಾರ ಮತ್ತೆ 5 ಮಂದಿಗೆ ನಿಗಾ ವಹಿಸಲು ಸೂಚಿಸಲಾಗಿದೆ. 28 ದಿನದ ನಿಗಾ ಅವಧಿಯನ್ನು 169 ಮಂದಿ ಪೂರೈಸಿದ್ದಾರೆ ಎಂದು ಜಿಲ್ಲಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.