ದ.ಕ. ಜಿಲ್ಲೆಯಲ್ಲಿರುವುದು ತುಘಲಕ್ ಆಡಳಿತವೇ?: ಮನಪಾ ಸದಸ್ಯ ವಿನಯ್ ರಾಜ್ ಪ್ರಶ್ನೆ

Update: 2020-04-03 10:36 GMT

ಮಂಗಳೂರು, ಎ.3: ಕೊರೋನಾ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ದೇಶದಲ್ಲಿ ಲಾಕ್‌ಡೌನ್ ಹೇರಲಾದ ಬಳಿಕ ದ.ಕ. ಜಿಲ್ಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತುಘಲಕ್ ಮಾದರಿ ಆಡಳಿತ ಇದೆಯೇ ಎಂಬ ಪ್ರಶ್ನೆ ಕಾಡುತ್ತಿದೆ ಎಂದು ಮನಪಾ ಸದಸ್ಯ ಹಾಗೂ ದ.ಕ. ಜಿಲ್ಲಾ ಕಾಂಗ್ರೆಸ್ ವಕ್ತಾರ ವಿನಯ್ ರಾಜ್ ಹೇಳಿದ್ದಾರೆ.

ಲಾಕ್ ಡೌನ್ ಆರಂಭವಾದಾಗ ಜಿಲ್ಲಾಡಳಿತ ದಿನಾಲೂ ಅಗತ್ಯ ವಸ್ತುಗಳ ಅಂಗಡಿ ತೆರೆದಿರುವುದಾಗಿ ಹೇಳಿಕೆ ನೀಡಿತು. ಬಳಿಕ ಮಾರ್ಚ್ 28 ರಿಂದ 30 ರವರೆಗೆ ಮೂರು ದಿನ ಜನತಾ ಕರ್ಫ್ಯೂವನ್ನು ಯಾವುದೇ ಮುನ್ಸೂಚನೆ ನೀಡದೆ, ಪ್ರತಿಪಕ್ಷದ ಜನಪ್ರತಿನಿಧಿಗಳು ವಿರೋಧವನ್ನೂ ಲೆಕ್ಕಿಸದೆ ಹೇರಲಾಯಿತು. 31ರಂದು ಕಿಲೋಮೀಟರ್ ಉದ್ದದ ಸರದಿಯಲ್ಲಿ ನಿಂತು ದಿನಸಿ ಖರೀದಿಸಲು ಜನ ತೊಂದರೆ ಅನುಭವಿಸಿದರು. ಎ.1 ರಿಂದ ಎಲ್ಲ ದಿನ ಬೆಳಗ್ಗೆ 7 ರಿಂದ ಮಧಾಹ್ನ 12 ರವರೆಗೆ ಅಂಗಡಿ ತೆರೆದಿರುತ್ತದೆ ಎಂದು ಜಿಲ್ಲಾಡಳಿತ ಆದೇಶ ಹೊರಡಿಸಿತು.

ಆದರೆ ನಿನ್ನೆ ಮತ್ತೆ ಎ.3ರಿಂದ ರಸ್ತೆಗೆ ಯಾವುದೇ ಖಾಸಗಿ ವಾಹನಗಳು ಬರಬಾರದು, ಜನ ಸಮೀಪದ ಅಂಗಡಿಯಿಂದ ದಿನಸಿ ಸಾಮಾನು ಖರೀದಿಸಬೇಕು ಎಂದು ಜಿಲ್ಲಾಡಳಿತ ಒತ್ತಡ ಹಾಕುವುದರ ಮೂಲಕ ಆದೇಶ ಹೊರಡಿಸುವಲ್ಲಿ ಯಶಸ್ಸು ಕಂಡಿದೆ. ಅಂದರೆ ನಡೆದುಕೊಂಡು ಹೋಗಿ ಖರೀದಿ ಮಾಡಬೇಕು. ಇದರಿಂದ ಜನ ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಆಡಳಿತ ಪಕ್ಷದ ಸಂಸದರು, ಶಾಸಕರು ಹಾಗು ಉಸ್ತುವಾರಿ ಸಚಿವರು ಯಾಕೆ ಈ ರೀತಿ ಜನರನ್ನು ಸಂಕಷ್ಟಕ್ಕೆ ಹಾಕುತ್ತಿದ್ದಾರೆ? ಅಂಗಡಿ ಮನೆಯ ಅಂಗಳದಲ್ಲಿ ಇರುತ್ತದೆಯೇ? ಗ್ರಾಮಾಂತರ ಪ್ರದೇಶಗಳಲ್ಲಿ ಕಿಲೋಮೀಟರು ಲೆಕ್ಕದಲ್ಲಿ ನಡೆದು ಹೋಗುವ ಪರಿಸ್ಥಿತಿ ಇದೆ. ಪಟ್ಟಣ, ನಗರಗಳಲ್ಲಿ ಕೂಡ ಅಂಗಡಿಗಳು ಹತ್ತಿರ ಇರುವುದಿಲ್ಲ. ಕಡಿಮೆ ಅಂದರೂ ಅರ್ಧ ಕಿ.ಮೀ.ದೂರವಿರುತ್ತದೆ. ಒಂದೇ ಅಂಗಡಿಯಲ್ಲಿ ಎಲ್ಲ ಸಾಮಾನುಗಳು, ತರಕಾರಿ, ಕೋಳಿ ಮಾಂಸ, ಹಾಲು ಹಾಗು ಇತರ ಅಗತ್ಯ ವಸ್ತುಗಳು ಲಭ್ಯವಿರುತ್ತದೆಯೇ? ಎಂದು ಅವರು ಪ್ರಶ್ನಿಸಿದ್ದಾರೆ.

ಒಂದು ಅಂಗಡಿಯಿಂದ ಮತ್ತೊಂದು ಅಂಗಡಿಗೆ ಸಾಮಾನು ಹೊತ್ತುಕೊಂಡು ವಾಹನವಿಲ್ಲದೆ ಸಾಗುವುದು ಹೇಗೆ? ಮಹಿಳೆಯರು ಮಧ್ಯ ವಯಸ್ಕರು, ಹಿರಿಯ ನಾಗರಿಕರು, ಅಶಕ್ತರು, ಮಕ್ಕಳು ಏನು ಮಾಡಬೇಕು? ಜನರ ಹಿತ ಕಾಪಾಡಲು ಆಡಳಿತ ಇರಬೇಕೆ ಹೊರತು ಜನರನ್ನು ಸಂಕಷ್ಟಕ್ಕೆ ಸಿಲುಕಿಸಲು ಅಲ್ಲ. ಈ ಆದೇಶ ಬಂದ ನಂತರ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ. ಅಗತ್ಯ ವಸ್ತುಗಳನ್ನು ಮನೆಗೆ ತಲುಪಿಸಲು ಕೊಟ್ಟ ಪಾಸಿಗೂ ಬೆಲೆ ನೀಡುತ್ತಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೋರೋನ ಭೀತಿಗಿಂತ ಜಿಲ್ಲಾಡಳಿತ ದಿನಕ್ಕೊಂದರಂತೆ ಹೊರಡಿಸುವ ವಿಚಿತ್ರ ಆದೇಶದ ಭೀತಿಯಲ್ಲಿ ಜನ ಬದುಕುವಂತಾಗಿದೆ. ನಾಳೆ ಏನು ಆಗುವುದೊ ಎಂಬ ಆತಂಕ. ಆಡಳಿತ ಪಕ್ಷ ಯಾಕೆ ಇದರ ಬಗ್ಗೆ ಸರ್ವ ಪಕ್ಷ ಸಭೆ ಕರೆಯುತ್ತಿಲ್ಲ. ಜಿಲ್ಲೆಯಲ್ಲಿ ಯಾವುದೇ ತುರ್ತು ಸಂದರ್ಭಗಳಲ್ಲಿ ಸರ್ವ ಪಕ್ಷಗಳ ಸಭೆ ಕರೆದು ಸೂಕ್ತ ತೀರ್ಮಾನ ತೆದುಕೊಳ್ಳುವುದು ವಾಡಿಕೆ. ಆದರೆ ಈಗಿನ ಆಡಳಿತ ಪಕ್ಷದವರಿಗೆ ನಾವೆಲ್ಲ ತಿಳಿದವರು, ಪ್ರತಿಪಕ್ಷದ ಸಲಹೆ ಬೇಕಿಲ್ಲ ಎಂಬ ನಡೆಯಿಂದ ಈ ರೀತಿಯ ಸ್ಥಿತಿ ಜಿಲ್ಲೆಯಲ್ಲಿ ಇದೆ. ಕೂಡಲೇ ಈ ಆದೇಶವನ್ನು ಮರುಪರಿಶೀಲನೆ ಮಾಡಬೇಕು ಎಂಬುದು ಜಿಲ್ಲಾ ಕಾಂಗ್ರೆಸ್‌ನ ಆಗ್ರಹ. ಇಲ್ಲವಾದಲ್ಲಿ ಈ ಬಗ್ಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಪೊನ್ನುರಾಜ್ ರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಿದೆ ಎಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News