ಉಡುಪಿ: ತೂಕ-ಅಳತೆ ಅಧಿಕಾರಿಗಳಿಂದ ದಿಢೀರ್ ತಪಾಸಣೆ; ಮೂವರ ವಿರುದ್ದ ಮೊಕದ್ದಮೆ ದಾಖಲು

Update: 2020-04-03 13:19 GMT

ಉಡುಪಿ, ಎ.3: ಜಿಲ್ಲಾಧಿಕಾರಿ ಜಿ.ಜಗದೀಶ್ ಅವರ ಸೂಚನೆ ಮೇರೆಗೆ ಉಡುಪಿ ನಗರದ ತರಕಾರಿ ಮಾರುಕಟ್ಟೆಯ ಅಂಗಡಿಗಳು, ಕೋಳಿ ಮತ್ತು ಕುರಿ ಮಾಂಸದ ಅಂಗಡಿ ಹಾಗೂ ದಿನಸಿ ಅಂಗಡಿಗಳಿಗೆ ಶುಕ್ರವಾರ ದಿಢೀರ್ ಭೇಟಿ ನೀಡಿದ ಜಿಲ್ಲಾ ಕಾನೂನು ಮಾಪನ ಶಾಸ್ತ್ರ ಇಲಾಖೆ ಅಧಿಕಾರಿಗಳು, ನಿಗದಿಗಿಂತ ಕಡಿಮೆ ತೂಕ ನೀಡುತ್ತಿದ್ದವರ ಮೇಲೆ ಎರಡು ಮೊಕದ್ದಮೆ ಹಾಗೂ ದಿನಸಿ ಅಂಗಡಿಗಳ ತಪಾಸಣೆ ಮಾಡಿ ಎಂಆರ್‌ಪಿ ದರದ ಬಗ್ಗೆ ಒಂದು ಮೊಕದ್ದಮೆ ದಾಖಲಿಸಿದರು.

ಅಧಿಕಾರಿಗಳು ಮೊಕದ್ದಮೆ ದಾಖಲಿಸಿದ್ದು ಮಾತ್ರವಲ್ಲದೇ, ಒಟ್ಟು ಮೂರು ಪ್ರಕರಣಗಳಲ್ಲಿ 8000ರೂ. ದಂಡವನ್ನು ಸಹ ವಸೂಲಿ ಮಾಡಿದ್ದಾರೆ. ತರಕಾರಿ ಅಂಗಡಿಗಳು ತಮ್ಮ ಅಂಗಡಿಯ ಮುಂದೆ ತರಕಾರಿಗಳ ದರಪಟ್ಟಿಯನ್ನು ಪ್ರದರ್ಶಿಸಲು ಅಧಿಕಾರಿಗಳು ಸೂಚಿಸಿದರು.

ಎಲ್ಲಾ ವರ್ತಕರು ಗ್ರಾಹಕರಿಗೆ ಸರಿಯಾದ ತೂಕ ನೀಡುವಂತೆ ಹಾಗೂ ಅಕ್ಕಿ, ಬೇಳೆ, ಸಕ್ಕರೆ ಇತ್ಯಾದಿ ಅಗತ್ಯ ವಸ್ತುಗಳನ್ನು ಹೆಚ್ಚಿನ ದರಕ್ಕೆ ಮಾರಾಟ ಮಾಡಿದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ಇದೇ ರೀತಿಯ ತಪಾಸಣೆಯನ್ನು ಜಿಲ್ಲೆಯಾದ್ಯಂತ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.

ಈ ತಪಾಸಣೆ ಕಾರ್ಯದಲ್ಲಿ ಕಾನೂನು ಮಾಪನ ಶಾಸ್ತ್ರ ಇಲಾಖೆ (ತೂಕ ಮತ್ತು ಅಳತೆ) ಸಹಾಯಕ ನಿಯಂತ್ರಕ ಗಜೇಂದ್ರ, ಉಡುಪಿಯ ನಿರೀಕ್ಷಕ ರಾಗ್ಯಾ ನಾಯಕ್ ಉಡುಪಿ ಮತ್ತು ಮೂಡಬಿದ್ರೆಯ ನಿರೀಕ್ಷಕ ಮಂಜಪ್ಪ ಬಿ. ಎಸ್. ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News