ದ.ಕ. ಜಿಲ್ಲೆಯಲ್ಲಿ ಶನಿವಾರವೂ ಖಾಸಗಿ ವಾಹನಗಳ ಸಂಚಾರಕ್ಕೆ ಸಂಪೂರ್ಣ ನಿಷೇಧ: ಸಚಿವ ಕೋಟ

Update: 2020-04-03 14:18 GMT

ಮಂಗಳೂರು,ಎ.3: ಕೊರೋನ ತಡೆಗಟ್ಟುವ ನಿಟ್ಟಿನಲ್ಲಿ ದ.ಕ.ಜಿಲ್ಲಾಡಳಿತವು ಎ.14ರವರೆಗೆ ವಿಧಿಸಿರುವ ಸೆ.144(3)ಕ್ಕೆ ಪೂರಕವಾಗಿ ಹೆಚ್ಚುವರಿ ಕೆಲವು ನಿರ್ಬಂಧವನ್ನು ವಿಧಿಸಿ ಗುರುವಾರ ಹೊರಡಿಸಿದ ಆದೇಶದಂತೆ ಜಿಲ್ಲೆಯಲ್ಲಿ ಖಾಸಗಿ ವಾಹನಗಳ ಸಂಚಾರವನ್ನು ಶನಿವಾರವೂ ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸ್ಪಷ್ಪಪಡಿಸಿದ್ದಾರೆ.

ಶುಕ್ರವಾರ ಮಂಗಳೂರಿನಲ್ಲಿ ವೀಡಿಯೋ ಸಂದೇಶ ನೀಡಿದ ಅವರು ಶುಕ್ರವಾರದಿಂದ ಖಾಸಗಿ ವಾಹನಗಳ ಸಂಚಾರವನ್ನು ಜಿಲ್ಲಾದ್ಯಂತ ಸಂಪೂರ್ಣ ನಿಷೇಧಿಸಲಾಗಿದೆ. ಅನುಮತಿ ಇಲ್ಲದಿರುವ ಎಲ್ಲಾ ವಾಹನಗಳ ತಿರುಗಾಟಕ್ಕೆ ನಿರ್ಬಂಧ ವಿಧಿಸಲಾಗಿದೆ. ದಿನಸಿ ಖರೀದಿಗಾಗಿ ಮೀಸಲಿಟ್ಟಿರುವ ಬೆಳಗ್ಗೆ 7ರಿಂದ 12ರವರೆಗಿನ ಸಮಯದಲ್ಲಿ ಯಾವುದೇ ಬದಲಾವಣೆ ಇಲ್ಲ. ಸಾಮಾಜಿಕ ಅಂತರವನ್ನು ಕಾಯ್ದುಕೊಂಡು, ತಮ್ಮ ಮನೆ ಸಮೀಪದ ಅಂಗಡಿಗಳಿಂದ ದಿನಸಿ ಖರೀದಿ ಮಾಡಬಹುದು ಎಂದರು.

ಅಕ್ಕಿ ಅಧಿಕವಿದ್ದರೆ ಪಡಿತರ ಅಂಗಡಿಯಿಂದಲೇ ವಾಹನ!
2.71ಲಕ್ಷ ಬಿಪಿಎಲ್ ಕುಟುಂಬಗಳಿಗೆ ಗುರುವಾರದಿಂದ ಪಡಿತರ ವಿತರಣೆ ಕಾರ್ಯ ನಡೆಯುತ್ತಿದೆ. ಪಡಿತರ ಕೇಂದ್ರದಿಂದ ದೂರವಾಣಿ ಕರೆ ಬರುವ ಗ್ರಾಹಕರು ನಿಯಮಿತ ಸಂಖ್ಯೆಯಲ್ಲಿ ಆಗಮಿಸಿ ಪಡಿತರ ಪಡೆಯಲು ಅವಕಾಶವಿದೆ. ಈ ಸಂದರ್ಭ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು. ಒಬ್ಬ ವ್ಯಕ್ತಿಗೆ 10 ಕೆಜಿಯಂತೆ ಅಕ್ಕಿ ವಿತರಿಸಲಾಗುತ್ತದೆ. ಸುಮಾರು 80 ಕೆಜಿಗಿಂತ ಅಧಿಕ ಅಕ್ಕಿ ಪಡೆಯುವವರಿಗೆ ಪಡಿತರ ಅಂಗಡಿಯವರಿಂದಲೇ ವಾಹನದ ವ್ಯವಸ್ಥೆ ಮಾಡುವಂತೆ ಸೂಚಿಸಲಾಗಿದೆ. ಈ ಬಗ್ಗೆ ಯಾವುದೇ ಗೊಂದಲಗಳಿದ್ದರೆ 1077 ನಂಬರಿಗೆ ಕರೆ ಮಾಡಿ ಸಂಪರ್ಕಿಸಬಹುದು ಎಂದು ಸಚಿವ ಕೋಟ ತಿಳಿಸಿದರು.

'ಮೋದಿ ಕರೆಯನ್ನು ಬೆಂಬಲಿಸಿ'
ಕೊರೋನ ವಿರುದ್ಧ ಹೋರಾಟಕ್ಕಾಗಿ ಎ.5ರಂದು ರಾತ್ರಿ 9 ಗಂಟೆಗೆ 9 ನಿಮಿಷಗಳ ಕಾಲ ಮನೆಯಲ್ಲಿ ಮೊಂಬತ್ತಿ, ಹಣತೆ ಬೆಳಗುವಂತೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದು, ಇದಕ್ಕೆ ಜಿಲ್ಲೆಯ ಜನತೆ ಸಂಪೂರ್ಣ ಬೆಂಬಲ ನೀಡುವಂತೆ ಕೋಟ ಮನವಿ ಮಾಡಿದರು.

ತಲಪಾಡಿ ಗೇಟ್ ತೆರೆಯುವುದೇ ಇಲ್ಲ: ಕೋಟ ಸ್ಪಷ್ಟನೆ
ತಲಪಾಡಿ ಗೇಟ್ ಈಗಾಗಲೇ ಬಂದ್ ಮಾಡಲಾಗಿದೆ. ಇದನ್ನು ತೆರವು ಮಾಡುವಂತೆ ಕೇರಳದ ಕೆಲವು ಜನಪ್ರತಿನಿಧಿಗಳು ಸುಪ್ರಿಂಕೋರ್ಟ್‌ಗೆ ದಾವೆ ಹೂಡಿದ್ದಾರೆ. ದ.ಕ. ಜಿಲ್ಲಾಡಳಿತದ ಪರವಾಗಿಯೂ ಅನುಭವಿ ವಕೀಲರನ್ನು ಈ ಕುರಿತು ವಾದ ನಡೆಸಲು ನೇಮಿಸಲಾಗಿದೆ. ಸಂಸದ ನಳಿನ್ ಕುಮಾರ್ ಕಟೀಲ್ ಈಗಾಗಲೇ ಸಿಎಂ ಯಡಿಯೂರಪ್ಪ ಅವರಲ್ಲಿ ಈ ಬಗ್ಗೆ ಚರ್ಚಿಸಿದ್ದಾರೆ. ಜಿಲ್ಲೆಯ ಹಿತರಕ್ಷಣೆಯಿಂದ ಗಡಿ ತೆರೆಯುವುದಿಲ್ಲ ಎಂದು ಮುಖ್ಯಮಂತ್ರಿ ಕೂಡ ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ದ.ಕ. ಜಿಲ್ಲೆಯ ಜನರು ಆತಂಕ ಪಡುವ ಅಗತ್ಯವಿಲ್ಲ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ಆಶಾ ಕಾರ್ಯಕರ್ತೆಯರಿಗೆ ಸರಕಾರ ರಕ್ಷಣೆ
ಜನರ ಆರೋಗ್ಯದ ದೃಷ್ಟಿಯಿಂದ ಮನೆಮನೆಗೆ ಬರುವ ಆಶಾ ಕಾರ್ಯಕರ್ತೆಯರನ್ನು ಗೌರವದಿಂದ ಕಾಣಬೇಕು. ಆಶಾ ಕಾರ್ಯಕರ್ತೆಯರ ವಿರುದ್ಧ ಕಾನೂನು ಕೈಗೆತ್ತಿಕೊಳ್ಳುವ ಪ್ರಕರಣ ಎಲ್ಲಿಯಾದರು ಕಂಡುಬಂದರೆ, ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆಗೆ ಸೂಚಿಸಲಾಗಿದೆ. ಜನರ ಪ್ರಾಣ ರಕ್ಷಣೆಗಾಗಿ ಕಾರ್ಯನಿರ್ವಹಿಸುತ್ತಿರುವ ವೈದ್ಯರು, ನರ್ಸ್‌ಗಳು, ಅಂಗನವಾಡಿ ಕಾರ್ಯಕರ್ತೆಯರು, ಪೊಲೀಸರ ಬಗ್ಗೆ ಸಹಾನುಭೂತಿಯಿಂದ ವರ್ತಿಸಬೇಕು ಎಂದು ಕೋಟ ತಿಳಿಸಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News