ಕೊರೋನ ವೈರಸ್: ದ.ಕ.ಜಿಲ್ಲೆಯಲ್ಲಿ ಶುಕ್ರವಾರ 16 ಮಂದಿಯ ವರದಿ ನೆಗೆಟಿವ್

Update: 2020-04-03 14:34 GMT

ಮಂಗಳೂರು, ಎ.3: ಕೊರೋನ ವೈರಸ್ ತಡೆಯುವ ನಿಟ್ಟಿನಲ್ಲಿ ದ.ಕ.ಜಿಲ್ಲಾಡಳಿತದ ನಿರ್ದೇಶನದ ಮೇರೆಗೆ ವೈದ್ಯಕೀಯ ತಂಡವು ಕಟ್ಟುನಿಟ್ಟಿನ ಆರೋಗ್ಯ ತಪಾಸಣೆ ಮುಂದುವರಿಸಿದೆ. ಈ ಮಧ್ಯೆ ಶುಕ್ರವಾರ ಸ್ವೀಕರಿಸಲ್ಪಟ್ಟ 16 ಮಂದಿಯ ವರದಿಯು ನೆಗೆಟಿವ್ ಆಗಿದೆ. ಇದು ದ.ಕ.ಜಿಲ್ಲೆಯ ಮಟ್ಟಿಗೆ ಸಮಾಧಾನಕರ ಅಂಶವಾಗಿದೆ.

ಈ ಮಧ್ಯೆ ಶುಕ್ರವಾರ ಮತ್ತೆ 43 ಮಂದಿಯ ಗಂಟಲಿನ ದ್ರವವನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ರವಾನೆ ಮಾಡಲಾಗಿದೆ. ಶುಕ್ರವಾರ 72 ಮಂದಿಯ ಸ್ಕ್ರೀನಿಂಗ್ ಮಾಡಲಾಗಿದೆ. ಇದರೊಂದಿಗೆ ಈವರೆಗೆ 38,518 ಮಂದಿಯ ಸ್ಕ್ರೀನಿಂಗ್ ಮಾಡಿದಂತಾಗಿದೆ. ಹೋಂ ಕ್ವಾರಂಟೈನ್‌ನಲ್ಲಿರುವವ ಸಂಖ್ಯೆಯಲ್ಲಿ ಇಳಿಮುಖ ಕಂಡು ಬಂದಿದೆ. ಗುರುವಾರ 5,875 ಮಂದಿ ಹೋಂ ಕ್ವಾರಂಟೈನ್‌ನಲ್ಲಿದ್ದರೆ, ಶುಕ್ರವಾರ ಆ ಸಂಖ್ಯೆಯು 4,727ಕ್ಕೆ ಇಳಿದಿದೆ. ಗುರುವಾರದವರೆಗೆ ಇಎಸ್‌ಐ ಆಸ್ಪತ್ರೆಯಲ್ಲಿ 30 ಮಂದಿ ಚಿಕಿತ್ಸೆ ಪಡೆಯುತ್ತಿದ್ದರೆ, ಶುಕ್ರವಾರ ಅದರ ಸಂಖ್ಯೆ 21ಕ್ಕೆ ಇಳಿದಿದೆ. 28 ದಿನದ ನಿಗಾ ಅವಧಿಯನ್ನು ಗುರುವಾರದವರೆಗೆ 300 ಮಂದಿ ಪೂರೈಸಿದ್ದರೆ, ಅದೀಗ 630 ಮಂದಿಯರೆಗೆ ತಲುಪಿದೆ.

ಈವರೆಗೆ 282 ಮಂದಿಯ ಗಂಟಲಿನ ದ್ರವ ಪರೀಕ್ಷೆಗಾಗಿ ಕಳುಹಿಸಲಾಗಿತ್ತು. ಆ ಪೈಕಿ 9 ಪಾಸಿಟಿವ್ ಮತ್ತು 230 ನೆಗೆಟಿವ್ ಬಂದಿದೆ. ಇನ್ನೂ 43 ಮಂದಿಯ ವರದಿಗಾಗಿ ನಿರೀಕ್ಷಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ದಿಲ್ಲಿಯ ಮರ್ಕಝ್ ನಿಝಾಮುದ್ದೀನ್‌ನ ಧಾರ್ಮಿಕ ಕಾರ್ಯಕ್ರಮದಲ್ಲಿ ದ.ಕ.ಜಿಲ್ಲೆಯಿಂದ ಪಾಲ್ಗೊಂಡ 21 ಮಂದಿಯ ಪೈಕಿ ತೊಕ್ಕೊಟ್ಟು ಸಮೀಪದ ಇಬ್ಬರು ವ್ಯಕ್ತಿಗಳ ವರದಿಯು ನೆಗೆಟಿವ್ ಬಂದಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖಾಧಿಕಾರಿಗಳು ತಿಳಿಸಿದ್ದಾರೆ. ಉಳಿದ 19 ಮಂದಿಯ ವರದಿಯ ನಿರೀಕ್ಷೆಯಲ್ಲಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News