ದ.ಕ.ಜಿಲ್ಲೆಯ ತಾತ್ಕಾಲಿಕ ಪುನರ್ವಸತಿ ಕೇಂದ್ರಗಳಿಗೆ ಹಾಲು ಹಂಚಿಕೆ
ಮಂಗಳೂರು, ಎ.3: ಕೊರೋನ ವೈರಸ್ ತಡೆಯುವ ನಿಟ್ಟಿನಲ್ಲಿ ದ.ಕ.ಜಿಲ್ಲೆಯ ಅಧಿಸೂಚಿತ ಕೊಳಗೇರಿಗಳು, ಅಧಿಸೂಚಿತವಲ್ಲದ ಕೊಳಗೇರಿಗಳು, ಕಟ್ಟಡ ಕಾರ್ಮಿಕರ ವಸತಿ ತಾಣಗಳು ಮತ್ತು ವಲಸೆ ಕಾರ್ಮಿಕರಿಗೆ ನಿರ್ಮಿಸಲಾದ ತಾತ್ಕಾಲಿಕ ಪುನರ್ವಸತಿ ಕೇಂದ್ರಗಳಿಗೆ ಹಾಲು ನೀಡುವ ಸಲುವಾಗಿ ದ.ಕ.ಜಿಲ್ಲೆಗೆ ದಿನಂಪ್ರತಿ 5 ಸಾವಿರ ಲೀಟರ್ ಹಾಲನ್ನು ಎ.14ರವರೆಗೆ ಸರಬರಾಜು ಮಾಡಲು ಮುಖ್ಯಮಂತ್ರಿಯ ಅಧ್ಯಕ್ಷತೆಯಲ್ಲಿ ಬುಧವಾರ ಜರುಗಿದ ಸಭೆಯಲ್ಲಿ ನಿರ್ಧರಿಸಲಾಗಿದೆ. ಅದರಂತೆ ದ.ಕ.ಜಿಲ್ಲಾಡಳಿತವು ಈ ಪುನರ್ವಸತಿ ಕೇಂದ್ರಗಳಿಗೆ ಹಾಲನ್ನು ಹಂಚಿಕೆಗೊಳಿಸಿ ದ.ಕ. ಕೋ ಆಪರೇಟಿವ್ ಹಾಲು ಉತ್ಪಾದಕರ ಸಂಘ ಮುಖ್ಯಾಧಿಕಾರಿಗೆ ಸೂಕ್ತ ಕ್ರಮ ಕೈಗೊಳ್ಳಲು ಸೂಚನೆ ನೀಡಿದೆ.
ದ.ಕ.ಜಿಲ್ಲೆಯ ಮಹಾನಗರ ಪಾಲಿಕೆ, ಉಳ್ಳಾಲ ಮತ್ತು ಪುತ್ತೂರು ನಗರಸಭೆ, ಬಂಟ್ವಾಳ ಮತ್ತು ಮೂಡುಬಿದಿರೆ ಹಾಗೂ ಸೋಮೇಶ್ವರ ಪುರಸಭೆ, ಮೂಲ್ಕಿ, ಕೋಟೆಕಾರ್, ವಿಟ್ಲ, ಸುಳ್ಯ ಪಟ್ಟಣ ಪಂಚಾಯತ್, ಮಂಗಳೂರು, ಬಂಟ್ವಾಳ, ಪುತ್ತೂರು, ಸುಳ್ಯ, ಬೆಳ್ತಂಗಡಿ ತಾಲೂಕಿನ ಕೊಳಗೇರಿಯಲ್ಲಿರುವ ಕುಟುಂಬಗಳಿಗೆ 1,590 ಲೀ. ವಸತಿ ತಾಣದಲ್ಲಿರುವ ಕಟ್ಟಡ ಕಾರ್ಮಿಕರಿಗೆ 1,311 ಲೀ., ಆಶ್ರಯ ಕೇಂದ್ರದಲ್ಲಿರುವವರಿಗೆ 131 ಲೀ. ಹಾಲು ಪೂರೈಸಲು ಸೂಚಿಸಲಾಗಿದೆ.