ಕಡೇಶಿವಾಲಯ: ದೀಪ ಹಚ್ಚುವ ಕಾರ್ಯಕ್ರಮದ ಬಳಿಕ ಅಲ್ಪಸಂಖ್ಯಾತರ ಮನೆಗಳಿಗೆ ಕಲ್ಲು ತೂರಾಟ

Update: 2020-04-06 04:56 GMT

ಬಂಟ್ವಾಳ, ಎ.6: ರವಿವಾರ ರಾತ್ರಿ ದೀಪ ಹಚ್ಚುವ ಕಾರ್ಯಕ್ರಮದ ಬಳಿಕ ಅಲ್ಪಸಂಖ್ಯಾತರ ಮನೆಗಳಿಗೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ ಎಂದು ತಾಲೂಕಿನ ಕಡೆಶಿವಾಲಯದ ಪೆರ್ಲಪು ಪ್ರತಾಪ್ ನಗರದ ನಿವಾಸಿಗಳು ಆರೋಪಿಸಿದ್ದಾರೆ.

ಕೊರೋನ ವೈರಸ್ ವಿರುದ್ಧದ ಹೋರಾಟದಲ್ಲಿ ಒಗ್ಗಟ್ಟು ಪ್ರದರ್ಶಿಸಲು ಪ್ರಧಾನಿ ನರೇಂದ್ರ ಮೋದಿಯವರು ಕರೆ ನೀಡಿರುವಂತೆ ಪೆರ್ಲಪು ಪರಿಸರದಲ್ಲೂ ಕೆಲವು ದೀಪ ಹಚ್ಚಿ ಒಗ್ಗಟ್ಟು ಪ್ರದರ್ಶಿಸಿದ್ದರು. ಸ್ವಲ್ಪ ಹೊತ್ತಿನ ಬಳಿಕ ಅಲ್ಪಸಂಖ್ಯಾತರ ಮನೆಗಳಿರುವ ಕಾಲನಿಗೆ ಯಾರೋ ಕಿಡಿಗೇಡಿಗಳು ಸಿಡಿಮದ್ದೊಂದನ್ನು ಎಸೆದಿದ್ದರು. ಆ ಬಳಿಕ 11 ಗಂಟೆಯ ಸುಮಾರಿಗೆ ಹಲವು ಮನೆಗಳಿಗೆ ಕಲ್ಲು ತೂರಾಟ ನಡೆಸಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಈ ಬಗ್ಗೆ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದು ಅದರಂತೆ ಸ್ಥಳಕ್ಕೆ ಬಂದ ಬಂಟ್ವಾಳ ಗ್ರಾಮಾಂತರ ಠಾಣೆಯ ಪೊಲೀಸರು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪರಿಶೀಲನೆ ನಡೆಸಿದ್ದಾರೆ. ಬೆಳಗ್ಗೆ ಠಾಣೆಗೆ ಬಂದು ದೂರು ನೀಡುವಂತೆ ತಿಳಿಸಿದ್ದಾರೆ ಎಂದು ಸ್ಥಳೀಯರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News