ಕೊರೋನ ಸಂಕಷ್ಟದ ಮಧ್ಯೆ ಕೋಮುದ್ವೇಷ: ತೊಕ್ಕೊಟ್ಟು, ಪಡೀಲ್ ಸಮೀಪ ಭಿತ್ತಿಪತ್ರ

Update: 2020-04-06 16:23 GMT

ಮಂಗಳೂರು, ಎ. 6: ಮಂಗಳೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ರಾ.ಹೆ.66ರ ಸೋಮೇಶ್ವರ ಸಮೀಪದ 2ನೆ ಕೊಲ್ಯ ಪರಿಸರದಲ್ಲಿ ಕಾಣಿಸಿಕೊಂಡಿದ್ದ ಭಿತ್ತಿಪತ್ರವು ರವಿವಾರ ತೆರವಾದ ಬೆನ್ನಿಗೆ ತೊಕ್ಕೊಟ್ಟು ಸಮೀಪದ ಕೃಷ್ಣನಗರದಲ್ಲಿ ಸೋಮವಾರ ಮತ್ತೊಂದು ಭಿತ್ತಿಪತ್ರ ಪ್ರತ್ಯಕ್ಷಗೊಂಡಿದೆ.

‘ಸೂಚನೆ....ಕೃಷ್ಣನಗರ ತೊಕ್ಕೊಟ್ಟು ನಾಗರಿಕರ ಹಿತದೃಷ್ಟಿಯಿಂದ ಕೊರೋನ ವೈರಸ್ ಸಂಪೂರ್ಣವಾಗಿ ಹೋಗುವವರೆಗೆ ನಮ್ಮ ಊರಿಗೆ ಯಾವುದೇ ಮುಸಲ್ಮಾನ ವ್ಯಾಪಾರಿಗೆ ಪ್ರವೇಶವಿಲ್ಲ -ಹಿಂದೂ ಬಾಂಧವರು, ಕೃಷ್ಣ ನಗರ ತೊಕ್ಕೊಟ್ಟು’

ಎಂದು ಬರೆಯಲಾರದ ಭಿತ್ತಿಪತ್ರವೊಂದು ತೊಕ್ಕೊಟ್ಟು ಪೆರ್ಮನ್ನೂರು ಚರ್ಚ್ ಮುಂದಿನ ಉಳ್ಳಾಲ-ಮೇಲಂಗಡಿ ರಸ್ತೆಯಲ್ಲಿ ಸೋಮವಾರ ಬೆಳಗ್ಗೆ ಸುಮಾರು 10 ಗಂಟೆಯ ವೇಳೆಗೆ ಕಂಡು ಬಂದಿದೆ. ಅಲ್ಲದೆ ಸಾಮಾಜಿಕ ಜಾಲತಾಣದಲ್ಲೂ ಹರಿದಾಡುತ್ತಿದೆ. ಈ ಬಗ್ಗೆ ಸ್ಥಳೀಯ ನಿವಾಸಿಗಳು ಜನಪ್ರತಿನಿಧಿಗಳು ಮತ್ತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ರಾ.ಹೆ 66ರ ಸೋಮೇಶ್ವರ ಸಮೀಪದ 2ನೆ ಕೊಲ್ಯ ಅಡ್ಡ ರಸ್ತೆಯುದ್ದಕ್ಕೂ ಇಂಥದ್ದೇ ಭಿತ್ತಿಪತ್ರವೊಂದು ಶನಿವಾರ ಕಂಡು ಬಂದಿತ್ತು. ರವಿವಾರ ಸಂಜೆ ವೇಳೆಗೆ ಅದು ತೆರವಾಗಿತ್ತು. ಇದೀಗ ತೊಕ್ಕೊಟ್ಟು ಕೃಷ್ಣನಗರದಲ್ಲಿ ಇಂಥದ್ದೇ ಭಿತ್ತಿಪತ್ರ ಕಾಣಿಸಿಕೊಂಡಿರುವುದು ತೀವ್ರ ಚರ್ಚೆಗೆ ಕಾರಣವಾಗಿದೆ.

ಇಂತಹದ್ದೇ ಭಿತ್ತಿಪತ್ರವು ನಗರದ ಪಡೀಲ್ ಸಮೀಪದ ಅಳಪೆಯಲ್ಲೂ ಕಂಡು ಬಂದಿದ್ದು, ಇದು ಕೂಡ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಕೊರೋನ ಹೆಸರಿನಲ್ಲಿ ಸಮಾಜದಲ್ಲಿ ಅಶಾಂತಿ ಸೃಷ್ಟಿಸುವವರ ಮತ್ತು ನಿರ್ದಿಷ್ಟ ಸಮುದಾಯದ ವಿರುದ್ಧ ದ್ವೇಷ ಹರಡಲು ಯತ್ನಿಸುವವರ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿ ಹಿರಿಯ ಪೊಲೀಸ್ ಅಧಿಕಾರಿಗಳು ಎಚ್ಚರಿಸುತ್ತಿದ್ದರೂ ಕೂಡ ನಗರ ಮತ್ತು ಹೊರವಲಯದ ಕಾಲನಿಗಳಲ್ಲಿ ಇಂತಹ ಭಿತ್ತಿಪತ್ರ ಕಾಣಿಸುತ್ತಿರುವುದು ವಿಪರ್ಯಾಸವಾಗಿದೆ. ಇದು ಪೊಲೀಸರಿಗೆ ಸವಾಲಾಗಿಯೂ ಪರಿಣಮಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News