ಮನೆಯಲ್ಲೇ ‘ಶಬೇ ಬರಾಅತ್ ರಾತ್ರಿ’ ಆಚರಿಸಿ: ಖಾಝಿಗಳ ಕರೆ
ಮಂಗಳೂರು, ಎ.6: ಕೊರೋನ ಸೋಂಕು ಭೀತಿ ಹಿನ್ನೆಲೆಯಲ್ಲಿ ಬುಧವಾರ ಅಸ್ತಮಿಸಿದ ಗುರುವಾರ ರಾತ್ರಿ (ಎ.8) ಶಬೇ ಬರಾಅತ್ ಅನ್ನು ಮನೆಯಲ್ಲೇ ಆಚರಿಸಲು ಮತ್ತು ಗುರುವಾರ ಉಪವಾಸ ಆಚರಿಸಲು ಖಾಝಿಗಳಾದ ಶೈಖುನಾ ಅಲ್ಹಾಜ್ ತ್ವಾಖಾ ಅಹ್ಮದ್ ಅಲ್ಅಝ್ಹರಿ ಮತ್ತು ಅಲ್ಹಾಜ್ ಪಿಎಂ ಇಬ್ರಾಹೀಂ ಮುಸ್ಲಿಯಾರ್ ಬೇಕಲ್ ಕರೆ ನೀಡಿದ್ದಾರೆ.
ಪ್ರತೀ ವರ್ಷವೂ ಶಬೇ ಬರಾಅತ್ನ್ನು ಸಾಮೂಹಿಕವಾಗಿ ಮಸೀದಿಗಳಲ್ಲೇ ಆಚರಿಸುವುದು ಪರಿಪಾಠವಾಗಿದೆ. ಆದರೆ ಈ ಬಾರಿ ಜಗತ್ತಿನಾದ್ಯಂತ ಕೊರೋನ ಸೋಂಕು ಹರಡಿ ಸಾವಿರಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಭಾರತದಲ್ಲೂ ಲಾಕ್ಡೌನ್ ಜಾರಿಯಲ್ಲಿದೆ. ಅದಕ್ಕೆ ಪೂರಕವಾಗಿ ಈಗಾಗಲೆ ಮಸೀದಿಗಳಲ್ಲಿ ಸಾಮೂಹಿಕ ನಮಾಝ್ ಸಹಿತ ಮತ್ತಿತರ ಕಾರ್ಯಕ್ರಮಗಳಿಗೆ ಸಂಪೂರ್ಣ ನಿರ್ಬಂಧ ಹೇರಲಾಗಿದೆ. ಹಾಗಾಗಿ ‘ಶಬೇ ಬರಾಅತ್ ರಾತ್ರಿ’ಯನ್ನು ಕೂಡ ಎಲ್ಲರೂ ಮನೆಯಲ್ಲೇ ಆಚರಿಸಬೇಕು ಮತ್ತು ಈ ಸಂದರ್ಭ ಮಾರಕವಾದ ಕೊರೋನ ರೋಗದ ನಿಗ್ರಹಕ್ಕಾಗಿ ವಿಶೇಷವಾಗಿ ಪ್ರಾರ್ಥನೆ ಮಾಡಬೇಕು ಎಂದು ಖಾಝಿಗಳು ಮನವಿ ಮಾಡಿದ್ದಾರೆ.