ಉಡುಪಿ: ಸೋಮವಾರ 36 ಮಂದಿಯ ಸ್ಯಾಂಪಲ್ ಪರೀಕ್ಷೆಗೆ

Update: 2020-04-06 15:06 GMT

ಉಡುಪಿ, ಎ.6: ಶಂಕಿತ ನೋವೆಲ್ ಕೊರೋನ ವೈರಸ್ (ಕೋವಿಡ್-19) ಸೋಂಕಿಗಾಗಿ ಇಂದು ಒಟ್ಟು 36 ಮಂದಿಯ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ಶಿವಮೊಗ್ಗದ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುಧೀರ್‌ ಚಂದ್ರ ಸೂಡ ತಿಳಿಸಿದ್ದಾರೆ.

ಇಂದು ಶಂಕಿತ ಕೋವಿಡ್-19ರ ಸೋಂಕಿಗಾಗಿ ಒಬ್ಬರು ಹಾಗೂ ಶಂಕಿತ ರ ಸಂಪರ್ಕಕ್ಕಾಗಿ 32 ಮಂದಿ ಅಲ್ಲದೇ ಉಸಿರಾಟದ ತೊಂದರೆ ಎದುರಿಸು ತ್ತಿರುವ ಮೂವರ ಗಂಟಲು ದ್ರವವನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ. ಈ ವರದಿ ಒಂದೆರಡು ದಿನಗಳಲ್ಲಿ ಕೈಸೇರುವ ನಿರೀಕ್ಷೆ ಇದೆ ಎಂದರು.

ಸೋಮವಾರ ಒಟ್ಟು ನಾಲ್ವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಇವರೆ ಲ್ಲರೂ ಉಸಿರಾಟದ ತೊಂದರೆಗಾಗಿ ಆಸ್ಪತ್ರೆಗೆ ಬಂದಿದ್ದಾರೆ. ಇವರಲ್ಲಿ ಮೂವರು ಪುರುಷರು ಹಾಗೂ ಓರ್ವ ಮಹಿಳೆ ಇದ್ದಾರೆ. ಇಂದು ಸ್ಯಾಂಪಲ್ ಪರೀಕ್ಷೆಗಾಗಿ ಕಳುಹಿಸಿದ 32 ಮಂದಿ ಈಗಾಗಲೇ ಆಸ್ಪತ್ರೆ ಕ್ವಾರಂಟೈನ್‌ ನಲ್ಲಿದ್ದು, ಸೋಂಕಿತರ ಸಂಪರ್ಕಕ್ಕೆ ಬಂದವದ್ದಾಗಿದೆ ಎಂದು ಡಿಎಚ್‌ಓ ವಿವರಿಸಿದರು.

ನಿನ್ನೆಯವರೆಗೆ ಬರಬೇಕಾಗಿದ್ದ 40 ಮಂದಿಯ ಸ್ಯಾಂಪಲ್‌ಗಳ ಪರೀಕ್ಷೆಯಲ್ಲಿ 31 ವರದಿ ತಮ್ಮ ಕೈಸೇರಿದ್ದು, ಇವೆಲ್ಲವೂ ಸೋಂಕಿಗೆ ನೆಗೆಟಿವ್ ಆಗಿವೆ ಎಂದು ಡಾ. ಸೂಡ ತಿಳಿಸಿದರು. ಹೀಗಾಗಿ ಉಳಿದ 9 ಮಂದಿ ಹಾಗೂ ಇಂದಿನ 36 ಸೇರಿದಂತೆ ಒಟ್ಟು 45 ಮಂದಿಯ ಸ್ಯಾಂಪಲ್ ವರದಿ ಇನ್ನು ಬರಬೇಕಾಗಿದೆ. ಈ ಮೂಲಕ ಇದುವರೆಗೆ ಜಿಲ್ಲೆಯಿಂದ ಕಳುಹಿಸಿದ 269 ಮಂದಿಯ ಸ್ಯಾಂಪಲ್‌ಗಳಲ್ಲಿ 221 ಮಂದಿಯ ವರದಿ ನೆಗೆಟಿವ್ ಆಗಿ ಬಂದಿದ್ದರೆ, ಮೂವರದ್ದು ಮಾತ್ರ ಪಾಸಿಟಿವ್ ಆಗಿದೆ ಎಂದವರು ವಿವರಿಸಿದರು.

ಸೋಮವಾರ ಜಿಲ್ಲೆಯಲ್ಲಿ 20 ಮಂದಿ ಕೋವಿಡ್-19ರ ತಪಾಸಣೆಗಾಗಿ ನೋಂದಣಿಗೊಂಡಿದ್ದಾರೆ. ಈ ಮೂಲಕ ಇದುವರೆಗೆ ಒಟ್ಟು 1996 ಮಂದಿ ತಪಾಸಣೆಗಾಗಿ ನೋಂದಣಿ ಮಾಡಿಕೊಂಡಂತಾಗಿದೆ. ಇವರಲ್ಲಿ ಇಂದು 219 ಮಂದಿ 28 ದಿನಗಳ ನಿಗಾ ಪೂರೈಸಿದ್ದರೆ, 1580 (433) ಮಂದಿ 14 ದಿನಗಳ ನಿಗಾವನ್ನು ಪೂರ್ಣಗೊಳಿಸಿದ್ದಾರೆ. ಒಟ್ಟು 339 ಮಂದಿ ಹೋಮ್ ಕ್ವಾರಂಟೈನ್ ಹಾಗೂ 63 ಮಂದಿ ಆಸ್ಪತ್ರೆ ಕ್ವಾರಂಟೈನ್‌ ನಲ್ಲಿದ್ದಾರೆ. ಇಂದು 37 ಮಂದಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ ಎಂದು ಡಾ. ಸುಧೀರ್‌ಚಂದ್ರ ಸೂಡ ತಿಳಿಸಿದರು.

ಸೋಮವಾರ ಜಿಲ್ಲಾ ಆರೋಗ್ಯಾಧಿಕಾರಿಗಳ ಕಚೇರಿಯಲ್ಲಿ ಕೋವಿಡ್-19ರ ಕುರಿತು ಜಿಲ್ಲೆಯ ವೈದ್ಯಾಧಿಕಾರಿಗಳಿಗೆ ಝೂಮ್ ಆ್ಯಪ್ ಮೂಲಕ ತರಬೇತಿ ಕಾರ್ಯ ಕ್ರಮವನ್ನು ಆಯೋಜಿಸಲಾಗಿತ್ತು.

ಎಂದಿನಂತೆ ಜಿಲ್ಲೆಯ ಆರೋಗ್ಯ ಇಲಾಖೆಯ ಕಾರ್ಯಕರ್ತೆಯರು ಹಾಗೂ ಆಶಾ ಕಾರ್ಯಕರ್ತೆಯರು ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಕೋವಿಡ್-19 ಕುರಿತು ಜಾಗೃತಿ ಮತ್ತು ಮಾಹಿತಿಗಳನ್ನು ನೀಡಿದರು. ಇದಕ್ಕಾಗಿ ಅನುಕರಿಸ ಬೇಕಾದ ಎಚ್ಚರಿಕೆಯ ಕುರಿತು ತಿಳಿಸಿದರು. ಇವರು ಇಂದು ನಾಡ, ಪೆರ್ಣಂಕಿಲ, ಕಿರಿಮಂಜೇಶ್ವರ, ಪಳ್ಳಿ, ಬೆಳ್ಮಣ್ಣು, ದುರ್ಗಾ, ಕುಂಭಾಶಿ, ಇರ್ವತ್ತೂರು, ಸಿದ್ಧಾಪುರ ಗ್ರಾವುಗಳ ಮನೆಗಳಿಗೆ ಭೇಟಿ ನೀಡಿದರು.

ಮೊದಲ ಸೋಂಕಿತನ ಸ್ಯಾಂಪಲ್ ಮರು ಪರೀಕ್ಷೆಗೆ

ಜಿಲ್ಲೆಯಲ್ಲಿ ಮಾ.26ರಂದು ಕೋವಿಡ್-19 ಸೋಂಕು ಮೊತ್ತ ಮೊದಲನೇ ಯದಾಗಿ ಪತ್ತೆಯಾದ ಮಣಿಪಾಲದ 34ರ ಹರೆಯದ ಯುವಕನ ಗಂಟಲು ದ್ರವವನ್ನು ನಿನ್ನೆ ಮರು ಪರೀಕ್ಷೆಗಾಗಿ ಶಿವಮೊಗ್ಗಕ್ಕೆ ಕಳುಹಿಸಲಾಗಿದೆ ಎಂದು ಡಿಎಚ್‌ಓ ಡಾ.ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ.

ಇದೀಗ ಉಡುಪಿಯ ಡಾ.ಟಿಎಂಎ ಪೈ ಕೋವಿಡ್ ಆಸ್ಪತ್ರೆಯಲ್ಲಿ ಐಸೋಲೇಷನ್ ವಾರ್ಡಿನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಈ ಯುವಕ, ವೇಗವಾಗಿ ಗುಣಮುಖರಾಗುತಿದ್ದು, ಅವರ ಗಂಟಲು ದ್ರವವನ್ನು ಮೊದಲ ಪರೀಕ್ಷೆಗಾಗಿ ನಿನ್ನೆ ಕಳುಹಿಸಲಾಗಿದೆ. ನಾಳೆ ಇದರ ವರದಿ ಬರುವ ನಿರೀಕ್ಷೆ ಇದ್ದು, ಆ ಬಳಿಕ ಮತ್ತೊಮ್ಮೆ ಅವರ ಸ್ಯಾಂಪಲ್‌ನ ಪರೀಕ್ಷೆ ನಡೆಸಿ, ಎರಡೂ ನೆಗೆಟಿವ್ ಬಂದರೆ 14 ದಿನಗಳ ಬಳಿಕ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗುವುದು ಎಂದು ಅವರು ತಿಳಿಸಿದರು.

ಅದೇ ರೀತಿ ಮಾ.29ರಂದು ಸೋಂಕು ಪತ್ತೆಯಾದ ಉಡುಪಿಯ ಇಬ್ಬರು ಯುವಕರೂ ಸಹ ಕೋವಿಡ್-19 ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿ ದ್ದಾರೆ. ಈ ವಾರದ ಕೊನೆಗೆ ಅವರ ಸ್ಯಾಂಪಲ್‌ನ್ನು ಪರೀಕ್ಷೆಗೆ ಕಳುಹಿಸಬಹುದು ಎಂದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News