ಬಂಟ್ವಾಳ: ಕೋಮು ಪ್ರಚೋದಕ ಪೋಸ್ಟ್‌ ; ಮೂವರ ವಿರುದ್ಧ ದೂರು

Update: 2020-04-06 15:36 GMT

ಬಂಟ್ವಾಳ, ಎ. 5: ಕೊರೋನ ವೈರಸ್ ಗೆ ಸಂಬಂಧಿಸಿ ಸಾಮಾಜಿಕ ಜಾಲತಾಣಗಳಲ್ಲಿ ಕೋಮು ಪ್ರಚೋದಕ ಪೋಸ್ಟ್ ಹಾಕಿರುವ ಆರೋಪದಲ್ಲಿ ತಾಲೂಕಿನ ಮೂವರ ವಿರುದ್ಧ ಸೋಮವಾರ ಬಂಟ್ವಾಳ ನಗರ ಠಾಣೆಗೆ ಪ್ರತ್ಯೇಕ ದೂರು ನೀಡಲಾಗಿದೆ.

ನಂದಾವರ ಮಸೀದಿ ಬಳಿಯ ನಿವಾಸಿ ಸಂತೋಷ್ ಗೌಡ ಎಂಬಾತನ ವಿರುದ್ಧ ಎಸ್.ಡಿ.ಪಿ.ಐ. ಬಂಟ್ವಾಳ ಪುರಸಭಾ ಸಮಿತಿ ಸದಸ್ಯ ಅನ್ವರ್ ಆಲಡ್ಕ, ನಂದಾವರ ಕೊಪ್ಪಳ ನಿವಾಸಿ ಸಂತೋಷ್ ಕುಮಾರ್ ಎಂಬಾತನ ವಿರುದ್ಧ ಎಸ್.ಡಿಪಿಐ ನಂದಾವರ ಬ್ರಾಂಚ್ ಸದಸ್ಯ ಫಾರೂಕ್ ನಂದಾವರ, ತಾಲೂಕಿನ ಪಲ್ಲಮಜಲು ನಿವಾಸಿ ಸುನಿಲ್ ಪೂಜಾರಿ ಎಂಬಾತನ ವಿರುದ್ಧ ಪಿಎಫ್.ಐ ಬಿ.ಸಿ.ರೋಡ್ ಕಾರ್ಯದರ್ಶಿ ಅಬ್ದುಲ್ ರಹೀಂ ಪರ್ಲ್ಯ ಅವರು ಪ್ರತ್ಯೇಕ ದೂರು ನೀಡಿದ್ದಾರೆ.

ಈ ಮೂವರು ಕೊರೋನ ವೈರಸ್ ಗೆ ಸಂಬಂಧಿಸಿ ಸಾಮಾಜಿಕ ಜಾಲತಾಣಗಳಲ್ಲಿ ಮುಸ್ಲಿಮರು, ಇಸ್ಲಾಂ ಧರ್ಮ, ಮಸೀದಿ ಹಾಗೂ ಮುಸ್ಲಿಮ್ ಧರ್ಮ ಗುರುಗಳನ್ನು ಅವಹೇಳನ ಮಾಡಿದ್ದಾರೆ. 'ಬ್ಯಾರಿಗಳು ವೈರಸ್ ಹರಡುವವರಾಗಿದ್ದು ಅವರ ಜೊತೆ ವ್ಯಾಪಾರ ನಿಲ್ಲಿಸೋಣ, ಅವರನ್ನು ಕಲ್ಲು ಹೊಡೆದು ಅಥವಾ ಗುಂಡಿಕ್ಕಿ ಕೊಂದು ಬಿಡಿ' ಮೊದಲಾದ ರೀತಿಯಲ್ಲಿ ಕೋಮು ಪ್ರಚೋದಕ ಬರಹಗಳನ್ನು ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಇದು ಸಮಾಜದಲ್ಲಿ ಶಾಂತಿಯನ್ನು ಕದಡಿ ಕೋಮು ಗಲಭೆ ನಡೆಸುವ ಪ್ರಯತ್ನವಾಗಿದ್ದು, ಹಾಗಾಗಿ ಅವರನ್ನು ಬಂಧಿಸಿ ಕಾನೂನು ಕ್ರಮ ಜರಗಿಸುವಂತೆ ದೂರಿನಲ್ಲಿ ಒತ್ತಾಯಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News