ಆಸ್ತಿಪಾಲು ಸಿಗದ ಚಿಂತೆ: ಕೃಷಿಕ ಆತ್ಮಹತ್ಯೆ
Update: 2020-04-06 15:56 GMT
ಅಮಾಸೆಬೈಲು, ಎ.6: ಕಷ್ಟ ಪಟ್ಟು ಮಾಡಿದ ಫಸಲು ಬರುವ ಅಡಿಕೆ ತೋಟ ಬೇರೆಯವರ ಪಾಲಿಗೆ ಹೋದ ಚಿಂತೆಯಲ್ಲಿ ಕೃಷಿಕರೊಬ್ಬರು ಆತ್ಮಹತ್ಯೆ ಮಾಡಿ ಕೊಂಡ ಘಟನೆ ಎ.5ರಂದು ಅಮಾಸೆಬೈಲು ಗ್ರಾಮದ ಜಡ್ಡಿನಗದ್ದೆ ಎಂಬಲ್ಲಿ ನಡೆದಿದೆ.
ಮೃತರನ್ನು ಜಡ್ಡಿನಗದ್ದೆ ನಿವಾಸಿ ಸುಬ್ರಾಯ ನಾಯ್ಕ(58) ಎಂದು ಗುರುತಿಸ ಲಾಗಿದೆ.
ಇವರ ಹಿರಿಯರಿಗೆ ಸುಮಾರು 22 ಎಕ್ರೆ ಜಮೀನಿದ್ದು, ಜಮೀನಿನಲ್ಲಿ ಸುಮಾರು 2 ಎಕ್ರೆ 90 ಸೆಂಟ್ಸ್ ಜಾಗವನ್ನು ಇವರು ಅನುಭೋಗಿಸಿಕೊಂಡು ಕೃಷಿ ಮಾಡಿಕೊಂಡಿದ್ದರು. ಆದರೆ ಜಮೀನಿನ ಪಾಲು ಪಟ್ಟಿ ಮಾಡಿದ್ದು ಆಗ ಇವರು ಕೃಷಿ ಮಾಡಿದ ಫಲವತ್ತಾದ ಅಡಿಕೆ ತೋಟ ಕುಟುಂಬದ ಇತರ ಸದಸ್ಯರಿಗೆ ಹೋಗಿದೆ ಎನ್ನಲಾಗಿದೆ.
ಇದೇ ಚಿಂತೆಯಲ್ಲಿ ಇವರು ಈ ಹಿಂದೆ ಕೂಡ ಆತ್ಮಹತ್ಯೆಗೆ ಪ್ರಯತ್ನಿಸಿದ್ದರು. ಎ.5ರಂದು ಸೊಪ್ಪು ತರಲು ಹೋದ ಇವರು, ಗದ್ದೆಯ ಬಳಿಯ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.