ಚಿಕ್ಕಮಗಳೂರು: ಲಾಕ್‍ಡೌನ್ ಮತ್ತಷ್ಟು ಬಿಗಿ; ಎಸ್ಪಿಯಿಂದ ಜಿಲ್ಲಾದ್ಯಂತ ಪರಿಶೀಲನೆ

Update: 2020-04-07 12:24 GMT

ಚಿಕ್ಕಮಗಳೂರು, ಎ.7: ಜಿಲ್ಲೆಯಲ್ಲಿ ಇದುವರೆಗೂ ಕೊರೋನ ಸೋಂಕಿತ ಪ್ರಕರಣಗಳು ಪತ್ತೆಯಾಗಿಲ್ಲ. ಆದರೆ ದೇಶಾದ್ಯಂತ ಕೊರೋನ ಸೋಂಕಿತರ ಸಂಖ್ಯೆ ದಿನೇದಿನೇ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜನರು ಮನೆ ಬಿಟ್ಟು ಹೊರ ಬರುವುದನ್ನು ನಿಯಂತ್ರಿಸಲು ಜಿಲ್ಲಾ ಪೊಲೀಸ್ ಇಲಾಖೆ ಲಾಕ್‍ಡೌನ್‍ಅನ್ನು ಮತ್ತಷ್ಟು ಬಿಗಿಗೊಳಿಸುತ್ತಿದ್ದು, ಮಂಗಳವಾರ ಎಸ್ಪಿ ಹರೀಶ್ ಪಾಂಡೆ ರಸ್ತೆಗಿಳಿದು ಚೆಕ್‍ಪೋಸ್ಟ್ ಗಳ ತಪಾಸಣಾ ವೈಖರಿಯನ್ನು ಪರಿಶೀಲಿಸಿದರು.

ದೇಶಾದ್ಯಂತ ಲಾಕ್‍ಡೌನ್ ಆದೇಶವಿದ್ದು, ಕಳೆದ 14 ದಿನಗಳಿಂದ ಜಿಲ್ಲಾದ್ಯಂತ ಲಾಕ್‍ಡೌನ್‍ಗೆ ಜನರು ಉತ್ತಮ ಸ್ಪಂದನೆ ನೀಡಿದ್ದರೂ ಜಿಲ್ಲಾದ್ಯಂತ ಜನಜೀವನ ಅಸ್ತವ್ಯಸ್ತವಾಗಿದೆ. ಲಾಕ್‍ಡೌನ್‍ನಿಂದಾಗಿ ಜಿಲ್ಲಾದ್ಯಂತ ಸಾರ್ವಜನಿಕರು ಭಾರೀ ಸಮಸ್ಯೆಗಳನ್ನು ಎದುರಿಸುತ್ತಿದ್ದರೂ ಲಾಕ್‍ಡೌನ್‍ಗೆ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ.

ಈ ನಡುವೆ ಜಿಲ್ಲಾ ಪೊಲೀಸ್ ಇಲಾಖೆ ಲಾಕ್‍ಡೌನ್ ಅನ್ನು ಮತ್ತಷ್ಟು ಬಿಗಿಗೊಳಿಸುತ್ತಿದ್ದು, ರಸ್ತೆಗಳಲ್ಲಿ ಅನಗತ್ಯವಾಗಿ ತಿರುಗುವ ಸಾರ್ವಜನಿಕರು ಹಾಗೂ ಬೈಕ್, ಕಾರು ಚಾಲಕರ ಮೇಲೆ ಕಠಿಣ ಕ್ರಮಗಳನ್ನು ಜರಗಿಸುತ್ತಿದ್ದಾರೆ. ಬೈಕ್‍ಗಳನ್ನು ಸೀಝ್ ಮಾಡುವಂತಹ ಬಿಗಿ ಕಾನೂನು ಕ್ರಮಕ್ಕೂ ಪೊಲೀಸರು ಮುಂದಾಗಿದ್ದಾರೆ. ಮಂಗಳವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರೀಶ್ ಪಾಂಡೆ ಅವರು ನಗರ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕು ಕೇಂದ್ರಗಳಿಗೆ ಭೇಟಿ ನೀಡಿ ಲಾಕ್‍ಡೌನ್ ಹಿನ್ನೆಲೆಯಲ್ಲಿ ಪೊಲೀಸರ ಕಾರ್ಯವೈಖರಿಯನ್ನು ಪರಿಶೀಲನೆ ನಡೆಸಿದರು.

ಚೆಕ್‍ಪೋಸ್ಟ್ ಗಳಲ್ಲಿ ಬೈಕ್ ಹಾಗೂ ಇನ್ನಿತರ ವಾಹನಗಳ ತಪಾಸಣೆಯನ್ನು ಕಟ್ಟುನಿಟ್ಟಿನಿಂದ ಮಾಡುವ ನಿಟ್ಟಿನಲ್ಲಿ ಪೊಲೀಸ್ ಸಿಬ್ಬಂದಿಗೆ ಸೂಚನೆಗಳನ್ನು ನೀಡುತ್ತಿದ್ದಾರೆ.

ಪೊಲೀಸರು ಬಿಗಿ ಕ್ರಮಗಳನ್ನು ಕೈಗೊಂಡಿದ್ದರೂ ಮಂಗಳವಾರ ಚಿಕ್ಕಮಗಳೂರು ನಗರದಲ್ಲಿ ಸಾರ್ವಜನಿಕರ ತಿರುಗಾಟ ಕಂಡು ಬಂತು. ನಗರದ ವಿವಿಧೆಡೆ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ವಿತರಣೆ ಮಾಡುತ್ತಿರುವುದರಿಂದ ಜನರು ಪಡಿತರಕ್ಕಾಗಿ ನ್ಯಾಯಬೆಲೆ ಅಂಗಡಿಗಳತ್ತ ದೌಡಾಯಿಸುತ್ತಿದ್ದ ದೃಶ್ಯಗಳು ಮಂಗಳವಾರ ಕಂಡುಬಂದವು. ಇನ್ನು ಜನ್‍ಧನ್ ಖಾತೆಗೆ ಕೇಂದ್ರ ಸರಕಾರ ಹಣ ಜಮಾ ಮಾಡಿದ್ದಾರೆಂಬ ಕಾರಣಕ್ಕೂ ನಗರದ ಕೆಲ ಬ್ಯಾಂಕ್‍ಗಳ ಮುಂದೆ ಮಹಿಳೆಯರ ಸಾಲು ಕಂಡು ಬಂತು. ನ್ಯಾಯಬೆಲೆ ಅಂಗಡಿಗಳು ಹಾಗೂ ಬ್ಯಾಂಕ್‍ಗಳ ಮುಂದೆ ಜಮಾಯಿಸಿದ್ದ ಜನರು ಕೆಲವೆಡೆ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಸರತಿ ಸಾಲಿನಲ್ಲಿ ನಿಂತಿದ್ದ ದೃಶ್ಯಗಳೂ ಕಂಡುಬಂದವು. ಇನ್ನು ನಗರದ ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿ ಪ್ರತಿದಿನ ಜನಜಂಗುಳಿ ಇದ್ದು, ಪೊಲೀಸರು ಪ್ರತಿದಿನವೂ ಲಾಠಿ ಬೀಸಬೇಕಾದ ಪ್ರಮೇಯ ಎದುರಾಗಿದೆ. 

ಚಿಕ್ಕಮಗಳೂರು ಜಿಲ್ಲೆಯಲ್ಲಿ ಇದುವರೆಗೆ 273 ಮಂದಿಯನ್ನು ಪ್ರಯಾಣದ ಹಿನ್ನೆಲೆಯವರನ್ನು ಗುರುತಿಸಲಾಗಿದೆ. ಎಲ್ಲರನ್ನೂ ಹೋಮ್ ಕ್ವಾರಂಟೈನ್‍ನಲ್ಲಿಡಲಾಗಿದ್ದು, ಮನೆಯಿಂದ ಹೊರಬಾರದಂತೆ ಸೂಚಿಸಲಾಗಿದೆ. ಅಲ್ಲದೇ ಇವರ ಮೇಲೆ ನಿಗಾ ಇಡಲು ಪೊಲೀಸರು, ಆರೋಗ್ಯ ಇಲಾಖೆಯ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. 273 ಮಂದಿಯ ಪೈಕಿ 82ಮಂದಿ 28 ದಿನಗಳ ಕ್ವಾರಂಟೈನ್ ನಿಗಾ ಅವಧಿಯನ್ನು ಪೂರೈಸಿದ್ದಾರೆ. ಚಿಕ್ಕಮಗಳೂರು ನಗರದಲ್ಲಿ ಆರಂಭಿಸಲಾಗಿರುವ ಕೊರೋನಾ ಐಸೋಲೇಶನ್ ಘಟಕದಲ್ಲಿ 13 ಮಂದಿ ಆರೋಗ್ಯ ಸೇವೆಯೊಂದಿಗೆ ಕ್ವಾರಂಟೈನ್‍ಲ್ಲಿದ್ದಾರೆ. ಇನ್ನು ಕೊರೋನ ಸೋಂಕು ಶಂಕಿತ 10 ಮಂದಿಯ ರಕ್ತ, ಗಂಟಲದ್ರವದ ಪರೀಕ್ಷೆ ನಡೆದಿದ್ದು, ಎಲ್ಲ ವರದಿಗಳಲ್ಲೂ ನೆಗೆಟಿವ್ ಅಂಶ ಪತ್ತೆಯಾಗಿದೆ. ಈ 10 ಮಂದಿಯನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದ್ದು, ಅವರವರ ಮನೆಗಳಲ್ಲಿ ಕ್ವಾರಂಟೈನ್‍ಲ್ಲಿರಿಸಲಾಗಿದೆ.

ಪೊಲೀಸರಿಗೆ ಸಕಾಲದಲ್ಲಿ ಸಿಗುತ್ತಿಲ್ಲ ಅನ್ನಾಹಾರ: ಲಾಕ್‍ಡೌನ್ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲ ಪೊಲೀಸ್ ಠಾಣೆಗಳ ಪೊಲೀಸರನ್ನು ವಿವಿಧೆಡೆ ಕರ್ತವ್ಯಕ್ಕೆ ನಿಯೋಜಿಲಾಗಿದೆ. ಜಿಲ್ಲಾದ್ಯಂತ ಇರುವ ಚೆಕ್‍ಪೋಸ್ಟ್ ಗಳಲ್ಲಿ ಪೊಲೀಸರು ಹಗಲಿರುಳು, ಮಳೆ ಬಿಸಿಲೆನ್ನದೇ ಕೊರೋನ ಹರಡುವುದನ್ನು ತಡೆಯಲು ಶ್ರಮಿಸುತ್ತಿದ್ದಾರೆ. ಆದರೆ ವಿವಿಧ ಚೆಕ್‍ಪೋಸ್ಟ್ ಗಳಲ್ಲಿ ಕರ್ತವ್ಯನಿರತ ಪೊಲೀಸ್ ಸಿಬ್ಬಂದಿ ಹಾಗೂ ಗೃಹರಕ್ಷಕದಳ ಸಿಬ್ಬಂದಿಗೆ ಸಕಾಲದಲ್ಲಿ ಅನ್ನಾಹಾರ ಸಿಗುತ್ತಿಲ್ಲ ಎಂಬ ದೂರುಗಳು ಕೇಳಿ ಬರುತ್ತಿವೆ. ಹೊಟೆಲ್‍ಗಳು ಬಂದ್ ಆಗಿರುವುದರಿಂದ ಸ್ಥಳೀಯವಾಗಿ ಹೊಟೇಲ್‍ಗಳಲ್ಲೂ ಊಟ, ತಿಂಡಿ ಸಿಗುವುದಿಲ್ಲ ಎಂಬ ದೂರುಗಳು ಹೆಸರು ಹೇಳಲಿಚ್ಛಿಸದ ಪೊಲೀಸ್ ಸಿಬ್ಬಂದಿ ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News