ಕೇರಳದವರು ಸಮುದ್ರ ತೀರದಲ್ಲಿ ಕರ್ನಾಟಕಕ್ಕೆ ಬಾರದಂತೆ ಕಟ್ಟೆಚ್ಚರ
ಉಡುಪಿ, ಎ.7: ಕೋವಿಡ್ -19 ಹಿನ್ನೆಲೆಯಲ್ಲಿ ಕೇರಳ ರಾಜ್ಯದ ಜನ ಸಮುದ್ರ ತೀರ ಪ್ರದೇಶದ ಮೂಲಕ ಕರ್ನಾಟಕ ರಾಜ್ಯಕ್ಕೆ ಬರುತ್ತಿರುವುದಾಗಿ ಸುದ್ದಿ ಹಬ್ಬಿದ ಹಿನ್ನೆಲೆಯಲ್ಲಿ ಕರಾವಳಿ ಕಾವಲು ಪಡೆ ಪೊಲೀಸರು ತೀರ ಪ್ರದೇಶಲ್ಲಿ ತೀವ್ರ ಕಟ್ಟೆಚ್ಚರ ವಹಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಮಲ್ಪೆ ಕರಾವಳಿ ಕಾವಲು ಪಡೆಯ ಪೊಲೀಸ್ ಅಧೀಕ್ಷಕ ಚೇತನ್ ಆರ್. ಹಾಗೂ ಪೊಲೀಸ್ ಉಪಾಧೀಕ್ಷಕ ಪ್ರವೀಣ್ ಎಚ್. ನಾಯಕ್ ಮತ್ತು ಅಧಿಕಾರಿಗಳು ಇಂದು ಕೇರಳ- ಕರ್ನಾಟಕ ಗಡಿ ಭಾಗದ ಲ್ಯಾಂಡಿಂಗ್ ಪಾಯಿಂಟ್ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ದಿನದ 24 ಗಂಟೆಗಳ ಕಾಲ ಕರಾವಳಿ ಕಾವಲು ಪಡೆಯ ಪೊಲೀಸರು ಇಂಟರ್ಸೆಪ್ಟರ್ ಬೋಟುಗಳ ಮೂಲಕ ಗಸ್ತು ನಿರ್ವಹಿಸಬೇಕು. ಲ್ಯಾಂಡಿಂಗ್ ಪಾಯಿಂಟ್ಗಳಲ್ಲಿ ಈ ಹಿಂದೆ ಚಾಲ್ತಿಯಲ್ಲಿದ್ದ ಪಾಯಿಂಟ್ ಕರ್ತವ್ಯದೊಂದಿಗೆ ಕರಾವಳಿ ಕವಾಲು ಪಡೆ ಪೊಲೀಸ್ ಠಾಣೆಯ ಅಧಿಕಾರಿ ಹಾಗೂ ಸಿಬ್ಬಂದಿ ಹಾಗೂ ಕೆಎನ್ಡಿ ಸಿಬ್ಬಂದಿ ದಿನದ 24 ಗಂಟೆಗಳ ಕಾಲ ಕರ್ತವ್ಯ ನಿರ್ವಹಿಸ ಬೇಕು ಎಂದು ಎಸ್ಪಿ ಸೂಚನೆ ನೀಡಿದರು.
ಈವರೆಗೆ ಸಮುದ್ರ ತೀರ ಪ್ರದೇಶದಲ್ಲಿ ಕೇರಳ ರಾಜ್ಯದಿಂದ ಕರ್ನಾಟಕಕ್ಕೆ ಯಾರು ಕೂಡ ಬಂದಿಲ್ಲ. ಅಲ್ಲಿಂದ ಯಾರು ಕೂಡ ಕರ್ನಾಟಕಕ್ಕೆ ಆಗಮಿಸ ದಂತೆ ಸೂಕ್ತ ಎಚ್ಚರಿಕೆಯನ್ನು ಹಾಗೂ ಮುಂಜಾಗ್ರತಾ ಕ್ರಮಗಳನ್ನು ತೆಗೆದು ಕೊಳ್ಳಲಾಗಿದೆ ಎಂದು ಎಸ್ಪಿ ಚೇತನ್ ಆರ್. ತಿಳಿಸಿದ್ದಾರೆ.