ಅದಾನಿ ಫೌಂಡೇಶನ್: ವಲಸಿಗರ ಕುಟುಂಬಗಳಿಗೆ ಕಿಟ್ ವಿತರಣೆ
ಪಡುಬಿದ್ರಿ: ಇಲ್ಲಿನ ಎಲ್ಲೂರು ಗ್ರಾಮದಲ್ಲಿ ಕಾರ್ಯಾಚರಿಸುತ್ತಿರುವ ಅದಾನಿ ಒಡೆತನದ ಯುಪಿಸಿಎಲ್ ಸಂಸ್ಥೆಯು ತನ್ನ ಸಿಎಸ್ಆರ್ ಯೋಜನೆಯನ್ನು ನಿರ್ವಹಿಸುವ ಅಂಗ ಸಂಸ್ಥೆಯಾದ ಅದಾನಿ ಪ್ರತಿಷ್ಠಾನದ ವತಿಯಿಂದ ಸ್ಥಾವರದ ಸುತ್ತಮುತ್ತಲಿನ ಸ್ಥಳಗಳಲ್ಲಿ ನೆಲೆಸಿರುವ ಸುಮಾರು 200 ವಲಸಿಗರ ಕುಟುಂಬಗಳಿಗೆ ಒಟ್ಟು ರೂ. 3.50 ಲಕ್ಷ ಮೌಲ್ಯದ ಆಹಾರ ಕಿಟ್ನ್ನು ವಿತರಿಸಿತು.
ಅದಾನಿ ಪ್ರತಿಷ್ಠಾನ ಕೋವಿಡ್-19ನ್ನು ಎದುರಿಸಲು ಪ್ರಧಾನ ಮಂತ್ರಿ ಪರಿಹಾರ ನಿಧಿಗೆ ರೂ. 100 ಕೋಟಿ ದೇಣಿಗೆ ನೀಡಿದ್ದು, ಕೋವಿಡ್-19ನ್ನು ಹರಡುವುದನ್ನು ತಡೆಗಟ್ಟುವ ಹಿನ್ನಲೆಯಲ್ಲಿ ದೇಶಾದ್ಯಂತ ಲಾಕ್ಡೌನ್ ಎಂದು ಅದಾನಿ ಸಂಸ್ಥೆಯ ಅಧ್ಯಕ್ಷ ಕಿಶೋರ್ ಆಳ್ವ ಹೇಳಿದರು.
ಯುಪಿಸಿಎಲ್ ಸ್ಥಾವರದ ಸುತ್ತಮುತ್ತಲಿನ ಪ್ರದೇಶಗಳಾದ ನಂದಿಕೂರು, ಎಲ್ಲೂರು, ಸಾಂತೂರು, ಬೆಳಪು ಹಾಗೂ ಕಾಪು ವಲಯದ ಇತರೆ ಪ್ರದೇಶಗಳಲ್ಲಿ ನೆಲೆಸಿರುವ ವಲಸೆ ಬಂದಂತಹ ಕುಟುಂಬಗಳು ಯಾವುದೇ ಕೆಲಸವಿಲ್ಲದೆ ಮತ್ತು ಅವರವರ ಪ್ರದೇಶಕ್ಕೆ ಹಿಂತಿರುಗಲು ಸಾಧ್ಯವಾಗದೆ ಇರುವುದರಿಂದ ಅವರಿಗೆ ದಿನನಿತ್ಯಕ್ಕೆ ಬೇಕಾಗುವ ಅಕ್ಕಿ, ಬೇಳೆ, ಗೋಧಿ ಹಿಟ್ಟು, ಎಣ್ಣೆ ಮತ್ತು ಉಪ್ಪು ಇರುವ ಕಿಟ್ಗಳನ್ನು ವಿತರಿಸಲಾಯಿತು. ಆಹಾರ ಸಾಮಗ್ರಿಗಳ ಕಿಟನ್ನು ಕಾಪು ತಹಶೀಲ್ದಾರ್ ಮೊಹಮ್ಮದ್ ಇಶ್ಹಾಕ್ ಹಾಗೂ ಅದಾನಿ ಸಂಸ್ಥೆಯ ಅಧ್ಯಕ್ಷ ಕಿಶೋರ್ ಆಳ್ವ ವಿತರಿಸಿದರು. ಅದಾನಿ ಯುಪಿಸಿಎಲ್ ಸಂಸ್ಥೆಯ ಏಜಿಎಂ ಗಿರೀಶ್ ನಾವುಡ ಹಾಗೂ ಹಿರಿಯ ವ್ಯವಸ್ಥಾಪಕ ರವಿ ಆರ್. ಜೇರೆ ಉಪಸ್ಥಿತರಿದ್ದರು.