ಕೆಎಸ್ ಹೆಗ್ಡೆ ಆಸ್ಪತ್ರೆಯಲ್ಲಿ ಮಾತ್ರ ಕೇರಳದ ರೋಗಿಗಳಿಗೆ ತುರ್ತು ವೈದ್ಯಕೀಯ ಚಿಕಿತ್ಸೆ : ದ.ಕ. ಜಿಲ್ಲಾಧಿಕಾರಿ
ಮಂಗಳೂರು, ಎ.8: ಕೊರೋನ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಕರ್ನಾಟಕ ಸರಕಾರವು ಬಂದ್ ಮಾಡಿದ್ದ ಕೇರಳ-ಕರ್ನಾಟಕದ ‘ತಲಪಾಡಿ’ ಗಡಿಯನ್ನು ಮಂಗಳವಾರ ತೆರವುಗೊಳಿಸಿ ದ.ಕ.ಜಿಲ್ಲಾಡಳಿತ ಆದೇಶಿಸಿದ್ದರೂ ಕೂಡ ಇದೀಗ ಕೇರಳದ ರೋಗಿಗಳಿಗೆ ತುರ್ತು ವೈದ್ಯಕೀಯ ಚಿಕಿತ್ಸೆಯನ್ನು ದೇರಳಕಟ್ಟೆಯ ಕೆ.ಎಸ್. ಹೆಗ್ಡೆ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಮಾತ್ರ ಚಿಕಿತ್ಸೆ ಪಡೆಯಬೇಕು ಎಂದು ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಬುಧವಾರ ಪರಿಷ್ಕೃತ ಆದೇಶದಲ್ಲಿ ತಿಳಿಸಿದ್ದಾರೆ.
ತಲಪಾಡಿ ಗಡಿ ಬಂದ್ ಮಾಡಿರುವುದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಂಗಳವಾರ ನೀಡಿದ ಸೂಚನೆಯ ಮೇರೆಗೆ ಕೆಲವು ಷರತ್ತುಗಳ ಅನ್ವಯ ‘ತುರ್ತು ವೈದ್ಯಕೀಯ ಚಿಕಿತ್ಸೆ’ಯ ಸಲುವಾಗಿ ತಲಪಾಡಿ ಗಡಿಯನ್ನು ದ.ಕ.ಜಿಲ್ಲಾಡಳಿತ ತೆರವುಗೊಳಿಸಿತ್ತು. ಅದರಂತೆ ಬುಧವಾರ ಎರಡು ಆ್ಯಂಬುಲೆನ್ಸ್ನಲ್ಲಿ ತುರ್ತು ಚಿಕಿತ್ಸೆಗಾಗಿ ಮಂಗಳೂರಿಗೆ ಕರೆತರಲಾಗಿತ್ತು. ಆದರೆ, ಒಂದು ಖಾಸಗಿ ಆಸ್ಪತ್ರೆಯವರು ಮಹಿಳಾ ರೋಗಿಗೆ ಚಿಕಿತ್ಸೆ ನೀಡಲು ನಿರಾಕರಿಸಿದ ವಿದ್ಯಮಾನ ನಡೆದಿತ್ತು. ಈ ಮಧ್ಯೆ ದೇರಳಕಟ್ಟೆಯ ಕೆಎಸ್ ಹೆಗ್ಡೆ ಆಸ್ಪತ್ರೆಯಲ್ಲಿ ಮಾತ್ರ ಕೇರಳದ ರೋಗಿಗಳು ತುರ್ತು ಚಿಕಿತ್ಸೆ ಪಡೆಯಬಹುದು ಎಂಬ ಡಿಸಿಯ ಆದೇಶ ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿವೆ.