ಹೆಬ್ರಿ: ಕಾಂಗ್ರೆಸ್‌ನಿಂದ ಬಡವರಿಗೆ ದಿನಬಳಕೆ ವಸ್ತು ವಿತರಣೆ

Update: 2020-04-09 15:45 GMT

 ಹೆಬ್ರಿ, ಎ.9: ಕೊರೋನ ವೈರಸ್ ಹರಡದಂತೆ ತಡೆಯುವ ನಿಟ್ಟಿನಲ್ಲಿ ಜಾರಿಗೊಳಿಸಲಾದ ಲಾಕ್‌ಡೌನ್ ಹಿನ್ನಲೆಯಲ್ಲಿ ಹೆಬ್ರಿ ಬ್ಲಾಕ್ ಕಾಂಗ್ರೆಸ್ ವತಿ ಯಿಂದ ಕಾಂಗ್ರೆಸ್ ನಾಯಕ ದಿ.ಎಚ್.ಗೋಪಾಲ ಭಂಡಾರಿ ಅವರ ಸ್ಮರಣಾರ್ಥ ಹೆಬ್ರಿ ಬ್ಲಾಕ್ ಕಾಂಗ್ರೆಸ್ ವ್ಯಾಪ್ತಿಯ ಅರ್ಹ ಬಡವರಿಗೆ ಒಟ್ಟು 20 ಕ್ವೀಂಟಾಲ್ ಅಕ್ಕಿ ಮತ್ತು ದಿನ ಬಳಕೆ ವಸ್ತುಗಳನ್ನು ಗುರುವಾರ ಹೆಬ್ರಿಯಲ್ಲಿ ಸಾಂಕೇತಿಕವಾಗಿ ವಿತರಿಸಲಾಯಿತು.

 ಪ್ರತಿ ಗ್ರಾಮ ವ್ಯಾಪ್ತಿಯಲ್ಲಿ ಇವುಗಳನ್ನು ಅರ್ಹರಿಗೆ ಸ್ಥಳೀಯ ನಾಯಕರು ಮನೆ ಮನೆಗೆ ತಲುಪಿಸಲಿದ್ದಾರೆ ಎಂದು ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಮಂಜುನಾಥ ಪೂಜಾರಿ ತಿಳಿಸಿದರು. ಗೋಪಾಲ ಭಂಡಾರಿ ನಮ್ಮ ನಡುವೆ ಇರುತ್ತಿದ್ದರೆ ಇಂತಹ ಸಂದರ್ಭದಲ್ಲಿ ಜನಸಾಮಾನ್ಯರಿಗೆ ಇನ್ನಷ್ಟು ನೆರವು ನೀಡುತ್ತಿದ್ದರು. ಈಗ ನಾವು ಅವರ ಹೆಸರಿನಲ್ಲಿ ನೀಡಬೇಕಾಗಿದೆ ಎಂದು ಮಂಜುನಾಥ ಪೂಜಾರಿ ಹೇಳಿದರು.

ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಅವರು ಅಕ್ಕಿ ಚೀಲವನ್ನು ಹಸ್ತಾಂತರಿಸುವ ಮೂಲಕ ಇದಕ್ಕೆ ಚಾಲನೆ ನೀಡಿದರು. ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ನೀರೆ ಕೃಷ್ಣ ಶೆಟ್ಟಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುಜಾತ ಲಕ್ಷ್ಮಣ ಆಚಾರ್ಯ, ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿಗಳಾದ ಎಚ್. ಜನಾರ್ದನ್, ಸಂತೋಷ ಕುಮಾರ ಶೆಟ್ಟಿ, ಮುದ್ರಾಡಿ ಗ್ರಾಪಂ ಅಧ್ಯಕ್ಷೆ ಶಶಿಕಲಾ ಪೂಜಾರಿ, ಕಾಂಗ್ರೆಸ್ ಐಟಿ ಸೆಲ್ ಅಧ್ಯಕ್ಷ ಸಂತೋಷ ನಾಯಕ್ ಸಹಿತ ವಿವಿಧ ಘಟಕಗಳ ಪ್ರಮುಖರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News