ದ.ಕ.ಜಿಲ್ಲೆ: ಸತತ ಐದನೇ ದಿನವೂ ವರದಿ ನೆಗೆಟಿವ್

Update: 2020-04-09 16:43 GMT

 ಮಂಗಳೂರು, ಎ.9: ಕೊರೋನ ವೈರಸ್ ತಡೆಯುವ ನಿಟ್ಟಿನಲ್ಲಿ ದ.ಕ.ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಜರುಗಿಸಿದ ಹಿನ್ನೆಲೆಯಲ್ಲಿ ‘ಕೊರೋನ’ ಪ್ರಕರಣಗಳಲ್ಲಿ ಗೆಲುವು ಸಾಧಿಸತೊಡಗಿದೆ. ಅಂದರೆ ಗುರುವಾರ ಸ್ವೀಕರಿಸಿದ 8 ಮಂದಿಯ ವರದಿಯೂ ನೆಗೆಟಿವ್ ಆಗಿದೆ. ಕಳೆದ ಶನಿವಾರ 3 ಮಂದಿಯ ವರದಿಯು ಪಾಸಿಟಿವ್ ಬಂದಿತ್ತು. ಆ ಬಳಿಕದ ವರದಿಗಳೆಲ್ಲವೂ ನೆಗೆಟಿವ್ ಆಗಿದೆ.

ಗುರುವಾರ 92 ಮಂದಿಯ ಸ್ಕ್ರೀನಿಂಗ್ ಮಾಡಲಾಗಿದೆ. ಇದರೊಂದಿಗೆ ಈವರೆಗೆ 38,813 ಮಂದಿಯ ಸ್ಕ್ರೀನಿಂಗ್ ಮಾಡಿದಂತಾ ಗಿದೆ. ಈ ಮಧ್ಯೆ ಗುರುವಾರ 24 ಮಂದಿಯ ಗಂಟಲಿನ ದ್ರವವನ್ನು ಪರೀಕ್ಷೆಗಾಗಿ ವೆನ್ಲಾಕ್ ಆಸ್ಪತ್ರೆಯ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

ಬುಧವಾರದವರೆಗೆ 3,625 ಮಂದಿ ಹೋಂ ಕ್ವಾರಂಟೈನ್‌ನಲ್ಲಿದ್ದರೆ, ಗುರುವಾರ ಸಂಖ್ಯೆಯು 3,352ಕ್ಕೆ ಇಳಿದಿದೆ. ವೆನ್ಲಾಕ್ ಆಸ್ಪತ್ರೆಯಲ್ಲಿ ಇದೀಗ ಯಾರೂ ಕ್ವಾರಂಟೈನ್‌ನಲ್ಲಿಲ್ಲ. ಇಎಸ್‌ಐ ಆಸ್ಪತ್ರೆಯಲ್ಲಿ 12 ಮಂದಿ ಕ್ವಾರಂಟೈನ್‌ನಲ್ಲಿದ್ದಾರೆ. ಗುರುವಾರ 28 ದಿನದ ಕ್ವಾರಂಟೈನ್ (ನಿಗಾ) ಅವಧಿಯನ್ನು 2,594 ಮಂದಿ ಪೂರೈಸಿದ್ದಾರೆ.

ಈವರೆಗೆ 381 ಮಂದಿಯ ಗಂಟಲಿನ ದ್ರವವನ್ನು ಪರೀಕ್ಷೆಗಾಗಿ ಕಳುಹಿಸಲಾಗಿತ್ತು. ಆ ಪೈಕಿ 356 ಮಂದಿಯ ವರದಿಯನ್ನು ಸ್ವೀಕರಿಸಲಾಗಿದ್ದು, ಅದರಲ್ಲಿ 344 ಮಂದಿಯ ವರದಿಯು ನೆಗೆಟಿವ್ ಆಗಿದ್ದರೆ, 12 ಮಂದಿಯ ವರದಿಯು ಪಾಸಿಟಿವ್ ಆಗಿತ್ತು. ಪಾಸಿಟಿವ್‌ಗಳ ಪೈಕಿ 4 ಮಂದಿ ಗುಣಮುಖರಾಗಿ ಕಳೆದ ಸೋಮವಾರ ವೆನ್ಲಾಕ್ ಆಸ್ಪತ್ರೆಯಿಂದ ಡಿಸ್‌ಜಾರ್ಜ್ ಆಗಿದ್ದರು. ಉಳಿದ 8 ಮಂದಿ ಚೇತರಿಸುತ್ತಿದ್ದಾರೆ. ಇನ್ನೂ 25 ಮಂದಿಯ ವರದಿಗಾಗಿ ನಿರೀಕ್ಷಿಸಲಾಗುತ್ತಿದೆ.

ದ.ಕ.ಜಿಲ್ಲೆಯ 13 ಕಡೆ ಆರಂಭಿಸಲಾದ ಜ್ವರದ ಪ್ರಯೋಗಾಲಯದಲ್ಲಿ ಗುರುವಾರ 36 ಮಂದಿಯ ತಪಾಸಣೆ ಮಾಡಲಾಗಿದೆ. ಆದರೆ ಶಂಕಿತ ಕೊರೋನ ಸೋಂಕು ಪತ್ತೆಯಾಗಿಲ್ಲ ಎಂದು ಜಿಲ್ಲಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News