ಹೈಡ್ರಾಕ್ಸಿಕ್ಲೋರೋಕ್ವಿನ್ ಕಂಡು ಹಿಡಿದವರು ಪಿ.ಸಿ.ರೇ ಅಲ್ಲ: ಡಾ.ನರೇಂದ್ರ ನಾಯಕ್
ಮಂಗಳೂರು, ಎ.10: ಆಚಾರ್ಯ ಪ್ರಫುಲ್ಲ ಚಂದ್ರ ರೇ (ಪಿ.ಸಿ.ರೇ) ಈ ದೇಶದ ಶ್ರೇಷ್ಠ ರಸಾಯನಶಾಸ್ತ್ರಜ್ಞರು ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಆದರೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವಂತೆ, ಮಲೇರಿಯಾ ಚಿಕಿತ್ಸೆಗೆ ಬಳಸುವ ಹೈಡ್ರಾಕ್ಸಿಕ್ಲೋರೋಕ್ವಿನ್ ತಯಾರಿಕೆಯನ್ನು ಅವರು ಮಾಡಿದ್ದರೆಂಬ ಮಾಹಿತಿ ಮಾತ್ರ ತಪ್ಪು ಎಂದು ಭಾರತೀಯ ವಿಚಾರವಾದಿ ಸಂಘಗಳ ಒಕ್ಕೂಟದ ಅಧ್ಯಕ್ಷ ಡಾ.ನರೇಂದ್ರ ನಾಯಕ್ ತಿಳಿಸಿದ್ದಾರೆ.
ಒಂದು ವೇಳೆ ಪಿ.ಸಿ.ರೇ ಅವರು ಹೈಡ್ರಾಕ್ಸಿಕ್ಲೋರೋಕ್ವಿನ್ತಯಾರು ಮಾಡಿದ್ದೆಂದರೆ ಅದು ನಿಜಕ್ಕೂ ಅಚ್ಚರಿಯ ಸಂಗತಿ. ಯಾಕೆಂದರೆ, ಈ ಔಷಧಿಯನ್ನು ಕಂಡು ಹಿಡಿದಿದ್ದು 1945ರಲ್ಲಿ. ಆದರೆ ಆಚಾರ್ಯ ಪ್ರಫುಲ್ಲ ಅವರ ಜೀವಿತ ಅವಧಿ 1861ರಿಂದ 1944! ಎಂದು ಡಾ.ನಾಯಕ್ ಹೇಳಿದ್ದಾರೆ. ಪಿ.ಸಿ. ರೇ ಶ್ರೇಷ್ಠ ಬಂಗಾಳಿ ರಸಾಯನಶಾಸ್ತ್ರಜ್ಞ. ಅವರು ಸ್ಥಾಪಿಸಿದ ರಾಸಾಯನಿಕ ಕಂಪನಿಯು ಕ್ಲಿಯೋಕ್ವಿನಾಲ್ ತಯಾರಿಸುತ್ತಿತ್ತು. ಈ ರಾಸಾಯನಿಕ ವಸ್ತುವನ್ನು ಸದ್ಯ ಔಷಧಿಯಾಗಿ ಬಳಸಲಾಗುತ್ತಿಲ್ಲ ಎಂದವರು ಸ್ಪಷ್ಟಪಡಿಸಿದ್ದಾರೆ.